ಪ್ರಚಾರಕ್ಕಾಗಿ ಪೊಲೀಸರನ್ನು ನಿಂದಿಸಿದ ಎಸ್ಡಿಪಿಐ ಕಾರ್ಯಕರ್ತರ ಬಂಧನ
ಮಂಗಳೂರು, ಮೇ31: ಪೊಲೀಸರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಎಸ್ಡಿಪಿಐ ಕಾರ್ಯಕರ್ತರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ರಾತ್ರೋರಾತ್ರಿ ಪ್ರಸಿದ್ಧರಾಗಬೇಕು, ತಮ್ಮನ್ನು ಜನರು ಗುರುತಿಸಬೇಕೆಂಬ ಉದ್ದೇಶದಿಂದ ಎಸ್ಡಿಪಿಐ ಸಮಾವೇಶಕ್ಕೆ ತೆರಳುತ್ತಿದ್ದ ತಂಡವೊಂದು ಪೊಲೀಸರನ್ನು ಅವಾಚ್ಯವಾಗಿ ನಿಂದಿಸಿರುವ ಪ್ರಕರಣದಲ್ಲಿ ನೇರವಾಗಿ ಭಾಗಿಯಾದವರು ಹಾಗೂ ಅವರಿಗೆ ಆಶ್ರಯ ನೀಡಿದ 6 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಜಾಮೀನು ದೊರಕುವವರೆಗೆ ತಲೆಮರೆಸಿಕೊಂಡಿದ್ದ ಆರೋಪಿಗಳು
ಇನೋಳಿ ನಿವಾಸಿಗಳಾದ ನೌಷಾದ್(28), ಹೈದರಾಲಿ(27), ಜುಬೇರ್(32), ಪಾಂಡೇಶ್ವರದ ಮೊಹರಮ್ ಸಯ್ಯದ್ ಅಫ್ರೀದ್(23), ಕೊಣಾಜೆಯ ಬಶೀರ್(40), ಪುತ್ತೂರಿನ ಜಲೀಲ್(25) ಬಂಧಿತ ಆರೋಪಿಗಳು. ನಗರದ ಕಣ್ಣೂರಿನಲ್ಲಿ ಶುಕ್ರವಾರ ನಡೆದ ಎಸ್ಡಿಪಿಐ ಜನಾಧಿಕಾರ ಸಮಾವೇಶದಲ್ಲಿ ಭಾಗವಹಿಸಲು ಆರೋಪಿಗಳು ಬೈಕ್ ನಲ್ಲಿ ಹೋಗುತ್ತಿದ್ದರು. ಈ ವೇಳೆ ಪೊಲೀಸರ ವಿರುದ್ಧ ಅವಾಚ್ಯವಾಗಿ ನಿಂದಿಸಿ ಘೋಷಣೆ ಕೂಗಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗಾಗಿ ತನಿಖೆ ನಡೆಸುತ್ತಿದ್ದರು. ಇದು ಆರೋಪಿಗಳಿಗೆ ತಿಳಿದು ತಮ್ಮ ಕುಟುಂಬಸ್ಥರು, ಹಿತೈಷಿಗಳು, ಎಸ್ಡಿಪಿಐ ಪಕ್ಷದ ಮುಖಂಡರಲ್ಲಿ ಈ ಕುರಿತು ಚರ್ಚಿಸಿದ್ದರು. ಎಲ್ಲರೂ ಪ್ರಕರಣದಲ್ಲಿ ಜಾಮೀನು ದೊರಕುವವರೆಗೆ ತಲೆಮರೆಸಿಕೊಳ್ಳುವಂತೆ ಸಲಹೆ ನೀಡಿದ್ದರು.

ಬೆಂಗಳೂರು, ಮೈಸೂರಿಗೆ ತೆರಳಿ ತಲೆಮರೆಸಿಕೊಂಡಿದ್ದ ಆರೋಪಿಗಳು
ಮೇ.27ರಂದು ನಗರ ಹೊರವಲಯದ ಕಣ್ಣೂರಿನಲ್ಲಿ ನಡೆದಿದ್ದ ಎಸ್ಡಿಪಿಐ ಸಮಾವೇಶಕ್ಕೆ ಬೈಕ್ ಮತ್ತು ಕಾರುನಲ್ಲಿ ಬಂದ ಸವಾರ, ಸಹ ಸವಾರ ಸೇರಿ ಒಟ್ಟು 6 ಮಂದಿ ಕಾರ್ಯಕರ್ತರು ಪೊಲೀಸರನ್ನು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದು ಆರೋಪಿಗಳ ವಿರುದ್ಧ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತು. ಆರೋಪಿಗಳ ವಿರುದ್ಧ ಐಪಿಸಿ 143, 353, 504, 149 ಅಡಿ ಪ್ರಕರಣ ದಾಖಲಾಗಿದೆ. ಕರ್ತವ್ಯದಲ್ಲಿ ಪೊಲೀಸರಿಗೆ ಹೀನಾಯವಾಗಿ ನಿಂದಿಸಿದ ಎಸ್ಡಿಪಿಐ ಕಾರ್ಯಕರ್ತರಿಗೆ ಮಂಗಳೂರು ಪೊಲೀಸರು ಹುಡುಕಾಟ ಆರಂಭಿಸಿದರು.
ಈ ಹಿನ್ನೆಲೆಯಲ್ಲಿ ಆರೋಪಿಗಳಾದ ನೌಷಾದ್ ಹಾಗೂ ಹೈದರಾಲಿ ತಾವು ವೃತ್ತಿ ನಿರ್ವಹಿಸುತ್ತಿದ್ದ ಬೆಂಗಳೂರು ಮತ್ತು ಮೈಸೂರಿಗೆ ತೆರಳಿ ತಲೆಮರೆಸಿಕೊಂಡಿದ್ದರು. ಆದರೆ ಪೊಲೀಸರಿಗೆ ತನಿಖೆ ವೇಳೆ ಇವರು ಅವಿತುಕೊಂಡಿರುವ ಜಾಗ ತಿಳಿದು ದಾಳಿ ನಡೆಸಿದ್ದಾರೆ. ಆಗ ಬೆಂಗಳೂರಿನ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ಆರೋಪಿ ನೌಷಾದ್ನ ರಕ್ಷಣೆ ಮಾಡಲು ಮನೆಯಲ್ಲಿದ್ದವರು ಯತ್ನಿಸಿದ್ದಾರೆ. ಇದೀಗ ಪ್ರಕರಣದಲ್ಲಿ ಆರೋಪಿಗಳನ್ನು ರಕ್ಷಿಸಲು ಯತ್ನಿಸಿರುವ 11 ಮಂದಿಯನ್ನು ಬಂಧನ ಮಾಡಲು ಪೊಲೀಸರು ಬಲೆ ಬೀಸಿದ್ದಾರೆ.

ಒಟ್ಟು 11 ಜನರು ಕೃತ್ಯದಲ್ಲಿ ಭಾಗಿ
ಪ್ರಮುಖ ಆರೋಪಿಗಳು ಚೆಕ್ ಪೋಸ್ಟ್ ಪೊಲೀಸ್ ಸಿಬ್ಬಂದಿ ಮೇಲೆ ಬೈಕ್ ಹತ್ತಿಸಲು ಹೋಗಿದ್ದಾರೆ. ಪೊಲೀಸ್ ಇಲಾಖೆ ಬಗ್ಗೆ ಅವಾಚ್ಯವಾಗಿ ಮಾತನಾಡಿದ್ದಾರೆ. ಪೊಲೀಸರಿಗೆ ವಿಡಿಯೋ ಮಾಡಿ ನಿಂದನಾ ಘೋಷಣೆ ಕೂಗಿದ್ದಾರೆ. ಎಸ್ಡಿಪಿಐ ಸಮಾವೇಶಕ್ಕೆ ಭದ್ರತೆ ಕೊಟ್ಟ ಪೊಲೀಸರಿಗೆ ನಿಂದಿಸಿರುವುದು ಸರಿಯಲ್ಲ. ಸುಮಾರು 15 ಸೆಕೆಂಡ್ ವಿಡಿಯೋ ಎಲ್ಲಾ ಕಡೆ ಓಡಾಡಿದೆ. ಆರೋಪಿಗಳು ಪಡೀಲ್ ಕಣ್ಣೂರು ನಡುವೆ ಅಜಾಗರೂಕತೆ ಅತಿವೇಗವಾಗಿ ಬೈಕ್ ಚಲಾಯಿಸಿದ್ದಾರೆ. ಈ ಬಗ್ಗೆ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಮೇ 28ಕ್ಕೆ ದೂರು ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮೂಲದ ಮಹಮ್ಮದ್ ಯಾಸೀನ್(25), ಅಫ್ರೀದ್ ಸಾಗ್(19), ಮಹಮ್ಮದ್ ತುಫೇಲ್(19) ಎಂಬವರನ್ನು ಮಡಿವಾಳ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಆಶ್ರಯ ಕೊಟ್ಟ ನಾಲ್ವರ ಬಂಧನ
"ಇಬ್ಬರು ಆರೋಪಿಗಳನ್ನು ಬೆಂಗಳೂರು, ಮೈಸೂರಲ್ಲಿ ವಶಕ್ಕೆ ಪಡೆದಿದ್ದೇವೆ. ಆರೋಪಿಗಳು ಮೈಸೂರು, ಬೆಂಗಳೂರಲ್ಲಿ ಹೋಟೆಲ್, ಜ್ಯೂಸ್ ಅಂಗಡಿ ಕೆಲಸದವರು. ಇಬ್ಬರೂ ದಕ್ಷಿಣ ಕನ್ನಡ ಜಿಲ್ಲೆ ಇನೋಳಿ ಗ್ರಾಮದವರು. ಮಡಿವಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಂಧಿಸಿದ್ದೇವೆ. ಬಂಧನ ಸಂದರ್ಭ ಪೊಲೀಸರ ಕರ್ತವ್ಯಕ್ಕೆ ಅಡ್ಡಿಯಾಗಿದೆ. ಆಶ್ರಯ ಕೊಟ್ಟ ನಾಲ್ವರ ಬಂಧನವಾಗಿದೆ .ಒಟ್ಟು 11 ಜನ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಪ್ರಕರಣ ಸಂಬಂಧ ಆರು ಮಂದಿ ಬಂಧಿಸಿದ್ದೇವೆ. ಬೈಕ್, ಮೊಬೈಲ್, ಮತ್ತಿತರ ವಸ್ತುಗಳ ವಶ ಪಡಿಸಿಕೊಂಡಿದ್ದೇವೆ" ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹೇಳಿದ್ದಾರೆ.
"ಪೊಲೀಸರನ್ನು ನಿಂದಿಸಿ ವಾಟ್ಸಾಪ್ ಗ್ರೂಪ್ಗಳಿಗೆ ಶೇರ್ ಮಾಡುವುದು ಇವರ ಉದ್ದೇಶವಾಗಿದೆ. ಶ್ರೀಘ್ರ ಪಾಪ್ಯುಲರ್ ಆಗಲು ವಿಡಿಯೋ ಮಾಡಿದ್ದಾರೆ. ಕೇರಳ ಬಾಲಕನಂತೆ ಬೇಗ ಫೇಮಸ್ ಆಗಲು ಹೀಗೆ ಮಾಡಿದ್ದೇವೆ ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ" ಎಂದು ಎನ್. ಶಶಿಕುಮಾರ್ ತಿಳಿಸಿದ್ದಾರೆ.












Click it and Unblock the Notifications