Breaking: ಮಂಗಳೂರಲ್ಲಿ ಪ್ರಧಾನಿ: ಡಬಲ್ ಇಂಜಿನ್ ಸರ್ಕಾರ ಜನರ ಆಕಾಂಕ್ಷೆ ಪೂರೈಸುತ್ತೆ
ಮಂಗಳೂರು, ಸೆ.02: ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಮಂಗಳೂರಿಗೆ ಭೇಟಿ ನೀಡಿದ್ದು, ಅದ್ದೂರಿ ಸ್ವಾಗತ ನೀಡಲಾಗಿದೆ.
ನವ ಮಂಗಳೂರು ಬಂದರು ಪ್ರಾಧಿಕಾರದ ವಿವಿಧ ಯೋಜನೆಗಳ ಶಂಕುಸ್ಥಾಪನೆ ನೆರವೇರಿಸಲು ಮಧ್ಯಾಹ್ನ 1:30 ಆಗಮಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ವಾಗತಿಸಿದರು.
ನಗರದ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ಬೃಹತ್ ಸಮಾವೇಶದಲ್ಲಿ ಪ್ರಧಾನಿ ಮೋದಿಯವರಿಗೆ ರಾಜ್ಯ ನಾಯಕರು ಪೇಟ, ಶಾಲು, ಮಲ್ಲಿಗೆ ಹಾರ ಹಾಕಿ ಸ್ವಾಗತಿಸಿದರು. ಜೊತೆಗೆ ಶ್ರೀಕೃಷ್ಣನ ಪ್ರತಿಮೆ, ಪರುಶುರಾಮನ ಪ್ರತಿಮೆ ನೀಡಿ ಗೌರವಿಸಿದರು.
ಮಂಗಳೂರಿನಲ್ಲಿ ಪ್ರಧಾನಿ ಮೋದಿ ಭಾಷಣ
ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ಬೃಹತ್ ಸಮಾವೇಶದಲ್ಲಿ ಜನರನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತಿದ್ದಾರೆ.
"ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರದ ಸಹೋದ್ಯೋಗಿಗಳೇ ಮತ್ತು ರಾಜ್ಯ ನಾಯಕರೇ, ಮತ್ತು ಸಹೋದರರೇ, ಇಂದು ಭಾರತದ ಸಮುದ್ರದ ಶಕ್ತಿಗೆ ದೊಡ್ಡ ದಿನ. ಕೆಲ ಗಂಟೆಗಳ ಮೊದಲು ಲೋಕಾರ್ಪಣೆ ಮಾಡಿದ ಸ್ವದೇಶಿ ಏರ್ಕ್ರಾಫ್ಟ್ ಭಾರತೀಯರಿಗೆ ಹೆಮ್ಮೆ ಮೂಡಿಸಿದೆ. ಈಗ ಮಂಗಳೂರಿನಲ್ಲಿ 3,800 ಕೋಟಿ ರೂಪಾಯಿಗೂ ಹೆಚ್ಚು ಹಣದ ಯೋಜನೆಗಳ ಶಂಕುಸ್ಥಾಪನೆಯಿದೆ" ಎಂದರು.
"ನಮ್ಮ ಸರಕಾರ ಮೀನುಗಾರರ ಅಭಿವೃದ್ದಿಗಾಗಿ ಹಲವು ಯೋಜನೆ ಜಾರಿ ಮಾಡಲಾಗುತ್ತಿದೆ. ಇದಕ್ಕಾಗಿ ನಾನು ಕರ್ನಾಟಕ ರಾಜ್ಯ ಮತ್ತು ನಿಮಗೆಲ್ಲಾ ಅಭಿನಂದನೆ ಸಲ್ಲಿಸುತ್ತೇನೆ. ಈ ಯೋಜನೆಗಳಿಂದ ವ್ಯಾಪಾರ, ವಹಿವಾಟು, ಉದ್ಯೋಗಕ್ಕೆ ಹೆಚ್ಚು ಶಕ್ತಿ ಬರಲಿದೆ. ವಿಶೇಷವಾಗಿ ಮೀನುಗಾರರು ಮತ್ತು ಕೃಷಿಕರಿಗೆ ಲಾಭವಾಗಲಿದೆ" ಎಂದರು.

" ಗೆಳೆಯರೇ ಈ ಬಾರಿ ಸ್ವಾತಂತ್ರ ದಿನದಂದು ಕೆಂಪುಕೋಟೆಯಲ್ಲಿ ಮಾತನಾಡಿದ ಪ್ರಮುಖ ವಿಷಯ ಅಭಿವೃದ್ಧಿ ಭಾರತದ ನಿರ್ಮಾಣ ಕೂಡ ಒಂದು. ಮೇಕ್ ಇನ್ ಇಂಡಿಯಾವನ್ನು ಮಾಡುವುದು ಪ್ರಮುಖವಾಗಿದೆ. ವಿಶ್ವದಲ್ಲಿ ನಮ್ಮ ಉತ್ಪನ್ನಗಳು ಹೆಚ್ಚಾಗಬೇಕು. ರಫ್ತು ಹೆಚ್ಚಾಗಬೇಕು. ಇದೇ ಚಿಂತನೆಯಿಂದ ನಮ್ಮ ಸರಕಾರ ಎಂಟು ವರ್ಷದಿಂದ ದೇಶದ ಮೂಲಸೌರ್ಕದ ಮೇಲೆ ಹೆಚ್ಚು ಕೆಲಸವಾಗುತ್ತಿದೆ. ಕಳೆದ ಎಂಟು ವರ್ಷಗಳಲ್ಲಿ ಇದು ಎರಡರಷ್ಟು ಹೆಚ್ಚಾಗಿದೆ" ಎಂದು ಮೋದಿ ಹೇಳಿದರು.
"ಇಲ್ಲಿನ ಯೋಜನೆಗಳಿಂದ ಕರ್ನಾಟಕ ಮತ್ತು ದೇಶದ ಅಭಿವೃದ್ಧಿಯಾಗಲಿದೆ. ಅಮೃತ ಕಾಲದಲ್ಲಿ ಭಾರತ ಗ್ರೀನ್ ಗೋಥ್, ಗ್ರೀನ್ ಜಾಬ್ಗಳ ಮೂಲಕ ಮುನ್ನಡೆಯುತ್ತಿದೆ. ಕಳೆದ ಎಂಟು ವರ್ಷಗಳಲ್ಲಿ ಕರ್ನಾಟಕಕ್ಕೆ ಹೆಚ್ಚು ಲಾಭವಾಗಿದೆ. ಕರ್ನಾಟಕ ಸಾಗರ ಮಾಲಾ ಯೋಜನೆಯ ಹೆಚ್ಚು ಲಾಭ ಪಡೆದ ರಾಜ್ಯವಾಗಿದೆ" ಎಂದರು.
"ಗೌರವದಿಂದ ಬದುಕಲು, ಮನೆ, ಶೌಚಾಲಯ, ನೀರು, ವಿದ್ಯುತ್ ಅವಶ್ಯಕತೆಯಾಗಿದೆ. ನಮ್ಮ ಸರಕಾರ ಇವುಗಳನ್ನು ಜನರಿಗೆ ನೀಡುತ್ತಿದೆ. ಕಳೆದ ಎಂಟು ವರ್ಷದಲ್ಲಿ ಬಡವರಿಗೆ ಮೂರು ಕೋಟಿ ಮನೆ ನೀಡಲಾಗಿದೆ. ಲಕ್ಷಾಂತರ ಜನರಿಗೆ ಮನೆ ಕಟ್ಟಲು ಸಹಾಯ ಮಾಡಲಾಗಿದೆ" ಎಂದು ಹೇಳಿದರು.
"21ನೇ ಶತಮಾನದಲ್ಲಿ ಭಾರತವು 'ಹಸಿರು ಬೆಳವಣಿಗೆ'ಯ ದೃಷ್ಟಿಯಲ್ಲಿ ಮುನ್ನಡೆಯುತ್ತಿದೆ. ಕರ್ನಾಟಕದ ಸಂಸ್ಕರಣಾಗಾರಗಳಲ್ಲಿ ಬಳಸಲಾಗುವ ತಂತ್ರಜ್ಞಾನವು ಈ ಉದ್ದೇಶದೊಂದಿಗೆ ಒಂದಾಗಿದೆ. ಅಮೃತ ಕಾಲದ ಸಮಯದಲ್ಲಿ ಭಾರತವು ಹಸಿರು ಬೆಳವಣಿಗೆ ಮತ್ತು ಹಸಿರು ಉದ್ಯೋಗಗಳ ಮನಸ್ಥಿತಿಯೊಂದಿಗೆ ಮುನ್ನಡೆಯುತ್ತಿದೆ. ಮುಂಬರುವ 5ಜಿ ತಂತ್ರಜ್ಞಾನ ದೇಶದ ಪ್ರಗತಿಯ ದಿಕ್ಕು ಬದಲಾಯಿಸಲಿದೆ" ಎಂದರು.
"ಈ ದಿನ ಭಾರತ ಮೂಲಸೌರ್ಕಗಳ ಮೇಲೆ ನಿಂತಿದೆ, ಏಕೆಂದರೆ, ಅಭಿವೃದ್ಧಿ ಭಾರತದ ಅಭಿವೃದ್ಧಿ ವೇಗವಾಗಿ ನಡೆಯಲು ಸರಿಯಾದ ದಾರಿಯಲ್ಲಿ ನಡೆಯೇಕಿದೆ. ದೇಶದ ಜನರ ಆಕಾಂಕ್ಷೆ ವಿಶ್ವದರ್ಜೆಯ ಮೂಲಸೌಕರ್ಯ ಹೊಂದುವುದಾಗಿದೆ" ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ 3,800 ಕೋಟಿ ರೂಪಾಯಿಗಳ ಯಾಂತ್ರೀಕರಣ ಮತ್ತು ಕೈಗಾರಿಕೀಕರಣ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಷಣ
ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, "ಭಾರತದ ಜನನಾಯಕ ಪ್ರಧಾನಿ ನರೇಂದ್ರ ಮೋದಿಯವರೆ, ಇಂದು ಕರಾವಳಿ ಸುವರ್ಣ ಅಕ್ಷರದಲ್ಲಿ ಬರೆದಿಡುವ ದಿನ. ಈ ಕ್ಷೇತ್ರದ ಅಭವೃದ್ಧಿಯಾಗಲು ನಾಲ್ಕು ದಿಕ್ಕೂಗಳಲ್ಲಿಯೂ ಅಭಿವೃದ್ಧಿಯಾಗಬೆಕು. ಅಂತಹ 3,800 ಕೋಟಿಯ ನವ ಮಂಗಳೂರು ಬಂದರು ಪ್ರಾಧಿಕಾರದ ಯೋಜನೆಗಳಿಗೆ ಚಾಲನೆ ದೊರೆಯಲಿದೆ. ಈ ಕರಾವಳಿ ಮೂಲಕ ಸಮಗ್ರ ಕರ್ನಾಟಕದ ಅಭಿವೃದ್ಧಿಯಾಗಲಿದೆ" ಎಂದರು.
"ಎಲ್ಲರು ಡಬಲ್ ಇಂಜಿನ್ ಸರಕಾರದಿಂದಾದ ಪ್ರಯೋಜನಗಳೇನು ಎನ್ನುತ್ತಾರೆ. ಇದೇ ನೋಡಿ ನರೇಂದ್ರ ಮೋದಿ ನೇತೃತ್ವದಲ್ಲಿ ದೊಡ್ಡ ಮಟ್ಟದಲ್ಲಿ ಕೆಲಸ ಮಾಡುತ್ತಿದೆ. ಅದಾನಿ ಪೋಟ್ಗೆ ಇಂದು ಚಾಲನೆ ದೊರೆಯಲಿದೆ. ಮೀನುಗಾರರಿಗೆ 100 ಹೈಸ್ಪೀಡ್ ಇಂಜಿನ್, ಎರಡು ಲಕ್ಷ ಮೀನುಗಾರರ ಮಕ್ಕಳಿಗೆ ವಿದ್ಯಾನಿಧಿ ನೀಡುವುದು ಸೇರಿದಂತೆ ಹಲವು ಸಾಧನೆ ಮಾಡುತ್ತಿದೆ. ಡಬಲ್ ಇಂಜಿನ್ ಸರಕಾರ ಕರ್ನಾಟಕದ ಜೊತೆಗೆ ಭಾರತವನ್ನು ಮುನ್ನಡೆಸುತ್ತಿದೆ" ಎಂದರು.
ಇನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕನ್ನಡದ ಜೊತೆ ಜೊತೆಗೆ ಹಿಂದಿಯಲ್ಲಿಯೂ ಭಾಷಣ ಮಾಡಿ ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದರು.
ರಾಜ್ಯಪಾಲರು, ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿ, ಸಚಿವರು, ಶಾಸಕರು ಸೇರಿದಂತೆ ಬಿಜೆಪಿ ನಾಯಕರು, ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.












Click it and Unblock the Notifications