ಅಭಯ್ ಚಂದ್ರ ಜೈನ್ ಗೆ ಕೊಲೆ ಬೆದರಿಕೆ ಹಾಕಿದ್ದವನ ಬಂಧನ
ಮಂಗಳೂರು, ಮಾರ್ಚ್ 25: ಮುಲ್ಕಿ- ಮೂಡಬಿದ್ರೆ ಶಾಸಕ ಕೆ. ಅಭಯಚಂದ್ರ ಜೈನ್ ಸಹಿತ ಮೂವರು ಕಾಂಗ್ರೆಸ್ ನಾಯಕರಿಗೆ ಕೊಲೆ ಬೆದರಿಕೆ ಕರೆ ಮಾಡಿದ ಬಜರಂಗದಳದ ಕಾರ್ಯಕರ್ತನನ್ನು ಮೂಡಬಿದ್ರೆ ಪೊಲೀಸರು ಬಂಧಿಸಿದ್ದು, ಉಳಿದವರಿಗಾಗಿ ತನಿಖೆ ಮುಂದುವರೆಸಿದ್ದಾರೆ.
ಕಾರ್ಕಳ ತಾಲೂಕು ಈದು ಗ್ರಾಮದ ಸಚಿನ್ ಶೆಟ್ಟಿ ಬಂಧಿತ . ಈತ ಮತ್ತು ಇತರ ಆರೋಪಿಗಳು ಬಜರಂಗದಳದ ಕಾರ್ಯಕರ್ತರೆನ್ನಲಾಗಿದ್ದು, ಇವರು ಮಾರ್ಚ್ ೨೧ರ ರಾತ್ರಿ ವಾಲ್ಪಾಡಿಯ ಅರುಣ್ ಕುಮಾರ್ ಶೆಟ್ಟಿಯವರ ಮೊಬೈಲ್ ಗೆ ವಿವಿಧ ಸಂಖ್ಯೆಗಳಿಂದ ಕರೆಮಾಡಿ ಶಾಸಕ ಅಭಯಚಂದ್ರ, ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ವಾಲ್ಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ ಸೇರಿದಂತೆ ಒಟ್ಟು ಮೂರೂ ಮಂದಿಯನ್ನು ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದರು ಎನ್ನಲಾಗಿದೆ.

ಆರೋಪಿ ಪ್ರವೀಣ್ ಶೆಟ್ಟಿ ಈದುವಿನಲ್ಲಿ ಏಪ್ರಿಲ್ ೫ಕ್ಕೆ ನಡೆಯುವ ದೈವಸ್ಥಾನವೊಂದರ ಜಾತ್ರೆಗೆ ಬರುವಂತೆಯೂ , ಅಲ್ಲಿ ಶಾಸಕ ಅಭಯಚಂದ್ರ, ಮಿಥುನ್ ರೈ ಹಾಗೂ ನಿನ್ನನ್ನು ಸೇರಿ ಕೈಲೆಗೈಯುವುದಾಗಿ ಹೇಳಿ ಬೆದರಿಕೆಯೊಡ್ಡಿದ್ದಾರೆಂದು ಅರುಣ್ ಶೆಟ್ಟಿ ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.
ಒಟ್ಟು ಮೂರೂ ನಂಬರ್ಗಳಿಂದ ನಾಲ್ವರು ಆರೋಪಿಗಳು ಕರೆ ಮಾಡಿದ್ದು, ಓರ್ವನನ್ನು ಮಾತ್ರ ಗುರುತಿಸಲಾಗಿದೆ. ಇನ್ನಿತರರ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದು, ಮೂಡಬಿದಿರೆ ಪೊಲೀಸರು ದೂರಿನ ಆಧಾರದಲ್ಲಿ ಎಫ್ಐಆರ್ ಧಾಖಲಿಸಿದ್ದಾರೆ. ಈ ನಡುವೆ ಇತ್ತೀಚೆಗೆ ಉಪವಾಸ ಸತ್ಯಾಗೃಹ ನಡೆಸಿದ್ದ ಕಾರ್ಮಿಕ ಮುಖಂಡ ಸುದತ್ತ ಜೈನ್ ಶಿರ್ತಾಡಿಗೂ ಬಜರಂಗದಳ ಸದಸ್ಯರು ಬೆದರಿಕೆ ಕರೆ ಮಾಡಿದ್ದರೆನ್ನಲಾಗಿದ್ದು, ಈ ಕುರಿತು ಸುದತ್ತ ಜೈನ್ ದೂರು ನೀಡದೆ ಕೇವಲ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ದೂರಿದ್ದಾರೆ.
ಬೆದರಿಕೆಯ ಕಾರಣ: ಇತ್ತೀಚೆಗೆ ಧರೆಗುಡ್ಡೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಣಪಿಲ ಎಂಬಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಬಿಜೆಪಿಯ ಮಹಿಳಾ ಕಾರ್ಯಕರ್ತರಿಂದ ಅಭಯ ಚಂದ್ರ ಅವರ ಮೇಲೆ ನಡೆದ ಹಲ್ಲೆ ಯತ್ನ ಹಾಗೂ ಅದರ ನಂತರ ನಡೆದ ಘಟನೆಯ ವೀಡಿಯೊ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಹಿನ್ನಲೆಯಲ್ಲಿ ಇದನ್ನು ಪ್ರಶ್ನಿಸಿದ್ದ ಅರುಣ್ ಕುಮಾರ್ ಶೆಟ್ಟಿಯ ಮೇಲೆ ಈ ರೀತಿ ಕರೆ ಮಾಡಿ ಕೊಲೆ ಬೆದರಿಕೆಯೊಡ್ಡಲು ಕಾರಣವೆಂದು ಹೇಳಲಾಗಿದೆ.












Click it and Unblock the Notifications