ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಮಯೂರ ನರ್ತನ, ರಾತ್ರಿ ಪೂಜೆಗಂತೂ ನವಿಲು ಪ್ರತಿದಿನ ಹಾಜರ್!
ಮಂಗಳೂರು, ಜೂ. 18: ನವಿಲಿನ ನೃತ್ಯಕ್ಕಿಂದ ಮಿಗಿಲಾದ ನೃತ್ಯವಿಲ್ಲ. ಅದಕ್ಕಾಗಿಯೇ ನವಿಲನ್ನು ನಾಟ್ಯ ಮಯೂರಿ ಅಂತಾ ಮರೆಯೋದು. ಈ ನವಿಲಿನ ನಾಟ್ಯ ಕಾಣ ಸಿಗೋದು ಬಹಳ ಅಪರೂಪ.
ಅದರಲ್ಲೂ ಸಿಟಿ ಮಂದಿಗೆ ನವಿಲಿನ ನಾಟ್ಯ ಅಂದರೆ ಅದು ಅದ್ಭುತ. ಕಣ್ಣಿಗೆ ಹಬ್ಬ, ಆದರೆ ಮಂಗಳೂರು ನಗರ ಹೊರವಲಯದ ನೀರುಮಾರ್ಗದ ಮಾಣೂರು ಶ್ರೀ ಅನಂತ ಪದ್ಮನಾಭ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಾತ್ರ ನವಿಲಿನ ನಾಟ್ಯ ಪ್ರತಿದಿನ ಕಾಣಸಿಗುತ್ತದೆ. ಜನರನ್ನು ಕಂಡೊಡನೆ ಯಾವುದೇ ಭಯ ಇಲ್ಲದೇ ತನ್ನ ವಿಶಾಲವಾದ ಗರಿಗಳನ್ನು ಬಿಚ್ಚಿ ಅತ್ಯದ್ಭುತ ವಾದ ದೃಶ್ಯಕಾವ್ಯವನ್ನು ಬರೆಯುತ್ತದೆ. ಸುಬ್ರಹ್ಮಣ್ಯನ ವಾಹನ ನವಿಲು ಈ ರೀತಿ ಕುಣಿಯೋದರ ಹಿಂದೆಯೂ ಬಹುರೋಚಕ ವಿಚಾರವಿದೆ.
ಮಂಗಳೂರು ನಗರದ ರಕ್ಷಣೆಗೆ ಕಠಿಣ ತರಬೇತಿ: ಶಸ್ತ್ರಸಜ್ಜಿತ ತಂಡ ತಯಾರು
ಮಯೂರ ನವಿಲು ಈ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಆಕರ್ಷಣೆಯ ಕೇಂದ್ರ ಬಿಂದು. ದೇವಸ್ಥಾನಕ್ಕೆ ಬರುವ ಭಕ್ತರು ನವಿಲನ್ನು ನೋಡಿಯೇ ಹೋಗುತ್ತಾರೆ. ಈ ನವಿಲು ಕೂಡ ಬರುವ ಭಕ್ತರಿಗೆ ಗರಿಬಿಚ್ಚಿ ತನ್ನ ನರ್ತನದ ಮೂಲಕ ಕಣ್ಮನ ತಣಿಸುತ್ತಿದೆ.
ನಲಿಯುತ ನವಿಲು ಕುಣಿಯುತಿದೆ ನೋಡೆ
ಕರಾವಳಿಯ ಜನರಿಗೆ ಖ್ಯಾತ ಯಕ್ಷಗಾನ ಭಾಗವತ ಕಾಳಿಂಗ ನಾವಡರ 'ನೀಲಗಗನದೊಳು ಮೇಘಗಳ ಕಂಡಾಗಲೆ ನಲಿಯುತ ನವಿಲು ಕುಣಿಯುತಿದೆ ನೋಡೆ' ಎಂಬ ಪದ್ಯ ಕೇಳಿದಾಗ ನವಿಲಿನ ನಾಟ್ಯ ಕಣ್ಣಮುಂದೆ ಬರುತ್ತದೆ. ನೀಲ ಆಕಾಶದಲ್ಲಿ ಮಳೆಯ ಸಿಂಚನಗೈವ ಮೋಡಗಳನ್ನು ಕಂಡಾಗ ನವಿಲು ಕುಣಿಯುತ್ತಿದೆ ನೋಡು ಎಂಬುವುದು ಈ ಯಕ್ಷಗಾನ ಪದ್ಯ ಅರ್ಥವಾಗಿದೆ..
ಮಂಗಳೂರು ನಗರ ಹೊರವಲಯದ ನೀರು ಮಾರ್ಗದ ಮಾಣೂರು ಶ್ರೀ ಅನಂತಪದ್ಮನಾಭ ದೇವಸ್ಥಾನದ ಅಚ್ಚರಿ ನವಿಲು ಯಾವುದೇ ಹೆದರಿಕೆ ಇಲ್ಲದೇ ಗರಿಬಿಚ್ಚಿ ಕುಣಿವ ವೀಡಿಯೋ ಇತ್ತೀಚೆಗೆ ವೈರಲ್ ಆಗಿತ್ತು. ದೇವಸ್ಥಾನದ ಪಕ್ಕದಲ್ಲಿಯೇ ಇರುವ ಅರ್ಚಕ ರಾಜೇಶ್ ಭಟ್ ಅವರ ಮನೆಗೆ ಬಂದ ನೆಂಟರ ಮಗುವೊಂದರ ಜೊತೆ ನವಿಲು ಗರಿ ಬಿಚ್ಚಿ ನರ್ತನ ಮಾಡಿತ್ತು. ಈ ವೀಡಿಯೋ ಭಾರೀ ವೈರಲ್ ಆಗಿತ್ತು.
ಮಂಗಳೂರಿನಲ್ಲಿ ಮಣ್ಣಿನ ಗಣಿಗಾರಿಕೆ ಅವ್ಯಾಹತ! ಮಿನಿ ಬಳ್ಳಾರಿ ಆಗಲಿದ್ಯಾ ಮಂಗಳೂರು
ಏಳೆಂಟು ವರ್ಷಗಳಿಂದಲೂ ದೇವಸ್ಥಾನದಲ್ಲಿರುವ ನವಿಲು
ನವಿಲಿನ ಸೊಗಸಾದ ನಾಟ್ಯ ಕಂಡು ಜನ ಆಶ್ಚರ್ಯಚಕಿತರಾಗಿದ್ದರು. ಈ ನವಿಲು ಹೀಗೆ ದೇವಸ್ಥಾನದಲ್ಲಿ ಸ್ವಚ್ಛಂದವಾಗಿ ಕುಣಿಯೋದಕ್ಕೂ ಕಾರಣವಿದೆ. ಈ ನವಿಲು ಕಳೆದ ಏಳೆಂಟು ವರ್ಷಗಳಿಂದಲೂ ಈ ದೇವಸ್ಥಾನದಲ್ಲಿದೆ. ಸ್ಥಳೀಯ ನಿವಾಸಿಯೊಬ್ಬರು ತೋಟದಲ್ಲಿ ತಮಗೆ ದೊರೆತ ಮೂರು ನವಿಲಿನ ಮೊಟ್ಟೆಯನ್ನು ಕೋಳಿಯ ಕಾವಿಗೆ ಇಟ್ಟಿದ್ದರು. ಮೊಟ್ಟೆ ಒಡೆದು ಕೋಳಿ ಮರಿಯೊಂದಿಗೆ ಮೂರು ನವಿಲಿನ ಮರಿಗಳು ಹೊರ ಬಂದಿತ್ತು. ಅವರು ಈ ನವಿಲ ಮರಿಗಳನ್ನು ದೇವಸ್ಥಾನಕ್ಕೆ ಒಪ್ಪಿಸಿದ್ದಾರೆ. ಮೂರು ನವಿಲು ದೊಡ್ಡವಾಗುತ್ತಿದ್ದಂತೆಯೇ ಅದರಲ್ಲಿದ್ದ ಎರಡು ನವಿಲು ಹಾರಿ ಹೋಗಿತ್ತು. ಆದರೆ ಈ ನವಿಲು ಮಾತ್ರ ದೇವಸ್ಥಾನದ ಪರಿಸರ, ಸುತ್ತಮುತ್ತಲಿನ ಮನೆಗಳ ಪರಿಸರದಲ್ಲಿಯೇ ಇದೆ. ಐದಾರು ವರ್ಷಗಳಾಗಿರುವ ಈ ನವಿಲಿಗೆ ದೇವಾಲಯದ ಅರ್ಚಕ ರಾಜೇಶ್ ಭಟ್ 'ಮಯೂರ'ವೆಂದು ಹೆಸರಿಟ್ಟಿದ್ದಾರೆ.
ಅರ್ಚಕರ ಕರೆಗೆ ಸ್ಪಂದಿಸುವ ನವಿಲು
ಗರಿಬಿಚ್ಚಿ ಸಂಭ್ರಮಿಸುವ ದೃಶ್ಯ ಕಾಣಸಿಗುವುದು ಬಲು ಅಪರೂಪ. ಆದರೆ ಮಂಗಳೂರಿನ ನೀರುಮಾರ್ಗ ಬಳಿಯ ಮಾಣೂರು ಶ್ರೀ ಅನಂತಪದ್ಮನಾಭ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಗರಿಬಿಚ್ಚಿದ ನವಿಲಿನ ದರ್ಶನ ಖಂಡಿತ ಸಿಗುತ್ತದೆ. ಅರ್ಚಕರ ಕರೆಗೆ ಸ್ಪಂದಿಸಿ ಮೆಲ್ಲನೆ ಹೆಜ್ಜೆಯಿರಿಸಿ ಹತ್ತಿರಕ್ಕೆ ಬರುತ್ತದೆ. ಅವರು ಮಾಡುವ ಹಾವಭಾವಕ್ಕೆ ತಕ್ಕಂತೆ ಸ್ಪಂದಿಸುತ್ತದೆ. ಈ ಮಯೂರ ಪ್ರತಿದಿನವೂ ರಾತ್ರಿ ಪೂಜೆಯ ವೇಳೆ ನಮಸ್ಕಾರ ಮಂಟಪಕ್ಕೆ ತಪ್ಪದೇ ಬರುತ್ತದೆ. ದೇವಸ್ಥಾನ ಪರಿಸರದಲ್ಲಿಯೇ ಇರುವ ಈ ನವಿಲು ಭಕ್ತರೊಂದಿಗೆ ಸುಲಭದಲ್ಲಿ ಬೆರೆಯುತ್ತದೆ. ಅವರ ಸೆಲ್ಫಿಗೆ ನರ್ತನ ಮಾಡಿ ಪೋಸ್ ಕೊಡುತ್ತದೆ. ಮೊಬೈಲ್ ಕಂಡರೆ ಎಷ್ಟು ಹೊತ್ತು ಬೇಕಾದರೂ ಗರಿಬಿಚ್ಚಿ ನರ್ತಿಸುತ್ತದೆ.
ಜನ ಕಂಡಾಕ್ಷಣ ಕುಣಿಯುವ ನವಿಲು
ನವಿಲು ಮತ್ತು ತನ್ನೊಡನೆಯ ಬಾಂಧವ್ಯದ ಬಗ್ಗೆ ಒನ್ ಇಂಡಿಯಾಗೆ ಅರ್ಚಕ ರಾಜೇಶ್ ಭಟ್ ಪ್ರತಿಕ್ರಿಯೆ ನೀಡಿದ್ದಾರೆ. ನವಿಲು ಸಣ್ಣಂದಿನಿಂದಲೂ ಮುಕ್ತವಾಗಿ ನಮ್ಮ ಜೊತೆ ಬೆರೆತಿದೆ. ಅದು ತನಗೆ ಬೇಕಾದಾಗ ಹೊರಗಡೆ ಹಾರಿ ಆಹಾರ ತಿಂದು ಬರುತ್ತಿದೆ. ಕೆಲ ಸಮಯದ ಹಿಂದೆ ನವಿಲು ಒಂದು ದಿನ ಹಾರಿಹೋಗಿತ್ತು. ಕೆಲ ದಿನಗಳಾದರೂ ನವಿಲು ಮತ್ತೆ ಬರಲಿಲ್ಲ. ನವಿಲು ತನ್ನ ಗುಂಪು ಸೇರಿದೆ ಅಂತಾ ಅಂದುಕೊಳ್ಳುವಷ್ಟರಲ್ಲಿ ಮತ್ತೆ ದೇವಸ್ಥಾನಕ್ಕೆ ಬಂದಿದೆ. ಈ ನವಿಲಿಗೆ ಜನರ ಭಯ ಇಲ್ಲ. ಜನ ಕಂಡಾಕ್ಷಣ ಗರಿಬಿಚ್ಚಿ ಕುಣಿಯುತ್ತದೆ. ಈಗ ದೇವಸ್ಥಾನದಲ್ಲೇ ಆಶ್ರಯ ಪಡೆದಿದೆ. ನಾವು ನೀಡಿದ ಆಹಾರವನ್ನು ತಿನ್ನುತ್ತದೆ. ಸುಬ್ರಹ್ಮಣ್ಯ ದೇವರ ಆಲಯ ವಾಗಿರೋದರಿಂದ ಸುಬ್ರಹ್ಮಣ್ಯ ವಾಹನ ನವಿಲು ಇಲ್ಲಿ ಸ್ವತಂತ್ರವಾಗಿ ಇರೋದು ಭಕ್ತರಿಗೆ ಕೂಡಾ ಖುಷಿ ತಂದಿದೆ ಅಂತಾ ಹೇಳಿದ್ದಾರೆ.
ಒಟ್ಟಿನಲ್ಲಿ ರಾಷ್ಟ್ರ ಪಕ್ಷಿ ನವಿಲು ಸಹಜವಾಗಿ ಮಾನವ ಸಂಬಂಧದಿಂದ ದೂರವಿದ್ದರೂ ಮಾಣೂರು ದೇವಸ್ಥಾನದ ನವಿಲು ಮಾತ್ರ ಜನಸ್ನೇಹಹೊಂದಿರೋದು ಸೋಜಿಗವಾಗಿದೆ. ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನವಿಲಿನ ಜೀವನ ಎಲ್ಲರ ಹುಬ್ಬೇರಿಸುವಂತಡ ಮಾಡಿದೆ.
(ಒನ್ಇಂಡಿಯಾ ಸುದ್ದಿ)
Recommended Video