ಕೊರಗಜ್ಜನ ಪವಾಡ; ಕ್ಷಮೆ ಕೇಳಲು ಓಡೋಡಿ ಬಂದ ಆರೋಪಿ!
ಮಂಗಳೂರು, ಏಪ್ರಿಲ್ 01; ಪವಾಡ ಪುರುಷ ಎಂದೇ ಕರೆಸಿಕೊಳ್ಳುವ ಕೊರಗಜ್ಜನ ಕಾಣಿಕೆ ಹುಂಡಿಯಲ್ಲಿ ಕಾಂಡೋಮ್ ಹಾಕಿ ಅಪವಿತ್ರಗೊಳಿಸಿದ ಪ್ರಕರಣಗಳು ಮಂಗಳೂರಿನಲ್ಲಿ ನಡೆದಿದ್ದವು. ಈಗ ಆರೋಪಿಗಳು ಕೊರಗಜ್ಜನ ಮುಂದೆ ಬಂದು ಕ್ಷಮೆ ಕೇಳಿದ ಘಟನೆ ನಡೆದಿದೆ.
ಮಂಗಳೂರಿನಲ್ಲಿ ದೇವಾಲಯಗಳ ಕಾಣಿಕೆ ಹುಂಡಿಗೆ ಕಾಂಡೋಮ್ ಮತ್ತು ಇತರ ವಸ್ತುಗಳನ್ನು ಹಾಕಿ ಅಪವಿತ್ರ ಮಾಡಿದ ಘಟನೆಗಳು ನಡೆದಿದ್ದವು. ಈ ಕೃತ್ಯ ಮಾಡಿದ ಆರೋಪಿಗಳಲ್ಲಿ ಒಬ್ಬ ಮೃತಪಟ್ಟಿದ್ದು, ಉಳಿದವರು ಭಯಗೊಂಡಿದ್ದಾರೆ.
ಇಬ್ಬರು ಆರೋಪಿಗಳು ಬುಧವಾರ ಕೊರಗಜ್ಜ ಕೋಲೋತ್ಸವದಲ್ಲಿ ಕ್ಷಮಾಪಣೆ ಕೇಳಲು ಬಂದಿದ್ದರು. ಕಾಣಿಕೆ ಹುಂಡಿ ಅಪವಿತ್ರಗೊಳಿಸಿದ ಬಗ್ಗೆ ಪೊಲೀಸರಿಗೆ ಸಹ ದೂರು ನೀಡಲಾಗಿದ್ದು, ತನಿಖೆ ನಡೆಯುತ್ತಿದೆ.

ದುಷ್ಕೃತ್ಯ ನಡೆಸಿದವರಿಗೆ ಕೊರಗಜ್ಜನೇ ಶಿಕ್ಷೆ ಕೊಡಬೇಕು ಎಂದು ಜನರು ಪ್ರಾರ್ಥಿಸಿದ್ದರು. ದುಷ್ಕರ್ಮಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಹಿಂದೂ ಸಂಘಟನೆಗಳು ಕೊರಗಜ್ಜ ಮೂಲ ಕ್ಷೇತ್ರಕ್ಕೆ ಪಾದಯಾತ್ರೆಯನ್ನು ಮಾಡಿದ್ದರು.
ಕಾಣಿಕೆ ಹುಂಡಿ ಅಪವಿತ್ರ ಮಾಡಿದ ಆರೋಪಿಗಳಲ್ಲಿ ಒಬ್ಬ ಒಂದು ತಿಂಗಳ ಹಿಂದೆ ಮೃತಪಟ್ಟಿದ್ದಾನೆ. ಇದರಿಂದಾಗಿ ಉಳಿದ ಆರೋಪಿಗಳು ಎಮ್ಮೆಕೆರೆ ಕ್ಷೇತ್ರಕ್ಕೆ ಬಂದು ಕ್ಷಮಾಪಣೆ ಕೇಳಿದ್ದಾರೆ.
ಕ್ಷಮೆ ನೀಡಲಿಲ್ಲ; ಬುಧವಾರ ಒಬ್ಬ ಆರೋಪಿ ಬಂದು ಎಮ್ಮೆಕೆರೆ ಕ್ಷೇತ್ರದಲ್ಲಿ ಕ್ಷಮೆ ಕೇಳಿದ್ದಾನೆ. ಆದರೆ, ಕೊರಗಜ್ಜ ಕ್ಷಮೆ ನೀಡಲಿಲ್ಲ. ಬಬ್ಬುಸ್ವಾಮಿ ಪ್ರಧಾನ ದೈವವಾದ ಕಾರಣ ನೇಮೋತ್ಸವದಲ್ಲಿ ಈ ಸಮಸ್ಯೆ ಇಟ್ಟು, ನುಡಿ ಕ್ಷಮಾಪಣೆ ಕೇಳಿದರೆ ಪರಿಹಾರ ನೀಡಲು ಸಾಧ್ಯ ಎಂದು ನುಡಿ ಕೊಟ್ಟಿದ್ದಾರೆ.
ಆರೋಪಿ ಎಮ್ಮೆಕೆರೆ ಕ್ಷೇತ್ರಕ್ಕೆ ಬಂದ ವಿಚಾರ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡರು. ಪೊಲೀಸರು ತನಿಖೆಯನ್ನು ಕೈಗೊಂಡಿದ್ದು, ಕಾಣಿಕೆ ಹುಂಡಿ ಅಪವಿತ್ರಗೊಳಿಸಿದ ಪ್ರಕರಣದ ಮಾಹಿತಿ ಬಹಿರಂಗವಾಗುವ ನಿರೀಕ್ಷೆ ಇದೆ.












Click it and Unblock the Notifications