ಮೂಡುಬಿದರೆ: ಸ್ಪೋಟಕ ಸಿಡಿದು ಓರ್ವ ಸಾವು, ಇಬ್ಬರಿಗೆ ಗಾಯ
ಮೂಡುಬಿದರೆ, ಮಾರ್ಚ್ 31 : ಸ್ಪೋಟಕ ಸಿಡಿದು ವ್ಯಕ್ತಿಯೋರ್ವ ಸಾವನ್ನಪ್ಪಿ ಇಬ್ಬರು ಗಾಯಗೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದರೆ ಇರುವೈಲು ಕೋರೆಯೊಂದರಲ್ಲಿ ಗುರುವಾರ ರಾತ್ರಿ ಸಂಭವಿಸಿದೆ.
ಶಿವಮೊಗ್ಗ ಸೊರಬ ತಾಲೂಕಿನ ಬಾಣಾಮತಿ ನಿವಾಸಿ ಉಮೇಶ್ (32) ಮೃತ ದಯರ್ದೈವಿ. ಈ ಘಟನೆಯಲ್ಲಿ ಇನ್ನಿಬ್ಬರು ಕಾರ್ಮಿಕರು ಗಾಯಗೊಂಡಿದ್ದು, ಗಂಭೀರ ಗಾಯಗೊಂಡ ಒಬ್ಬನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.[ಸುರತ್ಕಲ್: ಅನಿಲ ಸೋರಿಕೆ, ತಪ್ಪಿದ ಭಾರೀ ಅನಾಹುತ]
ಇಲ್ಲಿನ ಕಲ್ಲುಗಣಿಯಲ್ಲಿ ಕೆಲಸ ನಿರ್ಮಹಿಸುತ್ತಿರುವ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ. ಕ್ರಿಸ್ಟಲ್ ಅಸೋಸಿಯೇಟ್ಸ್ ಹೆಸರಿನಲ್ಲಿ ಕಾರ್ಯಾಚರಿಸುತ್ತಿರುವ ಈ ಕೋರೆಯಲ್ಲಿ ಡ್ರಿಲ್ಲಿಂಗ್ ಕೆಲಸ ಮಾಡುತ್ತಿದ್ದ ವೇಳೆ ಹಿಂಬದಿಯಲ್ಲಿದ್ದ ಸ್ಪೋಟಕ ಸಿಡಿದು ಈ ದುರಂತ ಸಂಭವಿಸಿದೆ ಎನ್ನಲಾಗಿದೆ.
ಇರುವೈಲು ಪ್ರದೇಶದಲ್ಲಿ ಮೂರು ಕಲ್ಲಿನ ಕೋರೆಗಳು ಕಾರ್ಯಾಚರಿಸುತ್ತಿದ್ದು, ಈ ಕ್ರಷರ್ ನಿಂದ ಸ್ಥಳಿಯ ಜಲವಿದ್ಯುತ್ ಯೋಜನೆಯಾದ ಸೋಹಮ್ ಲಿಮಿಟೆಡ್ ಸಂಸ್ಥೆಗೆ ಜಲ್ಲಿ ಕಲ್ಲು ಪೂರೈಕೆಯಾಗುತ್ತಿದೆ.
ಇನ್ನೊಂದು ಮೂಲದ ಪ್ರಕಾರ ಕಲ್ಲು ಸ್ಪೋಟಕ್ಕೆಂದು ಬಂಡೆಗೆ ತೂತು ಕೊರೆದು ಸ್ಪೋಟಕ ಇಟ್ಟಿದ್ದು ಅದು ಸ್ಪೋಟಗೊಳ್ಳದೇ ಇದ್ದಾಗ ಏನಾಯಿತೆಂದು ಹತ್ತಿರ ಹೋಗಿ ನೋಡುತ್ತಿದ್ದಂತೆ ಸ್ಪೋಟ ಸಂಭವಿಸಿ ಮೃತಪಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ.
ಘಟನೆಯ ಸಂದರ್ಭ ಉಮೇಶ್ ದೇಹ ಛಿದ್ರಗೊಂಡಿದ್ದು, ಉಳಿದವರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನೆಡಸಿದರು.