ಸಂಪಾಜೆ ಬಳಿ ಭಾರೀ ಭೂ ಕುಸಿತ, ಮಣ್ಣಿನಡಿ ಸಿಲುಕಿದ ಮನೆ, ಒಬ್ಬರ ಸಾವು
ಮಂಗಳೂರು, ಆಗಸ್ಟ್ 17: ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಪ್ರದೇಶ ಸಂಪಾಜೆ ಬಳಿ ಭಾರೀ ಭೂ ಕುಸಿತ ಆಗಿ, 3 ಮನೆಗಳು ಧ್ವಂಸಗೊಂಡಿವೆ. ಮಣ್ಣಿನಡಿ ಸಿಲುಕಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಇಬ್ಬರು ಮಕ್ಕಳು ಹಾಗೂ ಮಹಿಳೆಯೊಬ್ಬರು ಮಣ್ಣಿನಡಿಗೆ ಸಿಲುಕಿರುವ ಶಂಕೆ ಇದೆ. ಮಣ್ಣಿನಡಿಗೆ ಸಿಲುಕಿದವರ ರಕ್ಷಣೆಗೆ ಕಾರ್ಯಾಚರಣೆ ಆರಂಭವಾಗಿದೆ.
ಸಂಪಾಜೆಯಿಂದ ಮಡಿಕೇರಿಗೆ ಸಾಗುವ ಮಾರ್ಗ ಮದ್ಯದ ಜೋಡುಪಾಲ ಎಂಬಲ್ಲಿ ಈ ಘಟನೆ ಸಂಭವಿಸಿದೆ. ಗುರುವಾರ ಸಂಜೆಯಿಂದ ಗುಡ್ಡ ಮೇಲಿನಿಂದಲೇ ಜಾರತೊಡಗಿತ್ತು. ಶುಕ್ರವಾರದಂದು ಏಕಾಏಕಿ ಗುಡ್ಡ ಜರುಗಿದೆ. ಈ ಪರಿಣಾಮ ಮೂರು ಮನೆಗಳು ಮಣ್ಣಿನಡಿ ಸಿಲುಕಿ ಧ್ವಂಸವಾಗಿವೆ. ಈ ಘಟನೆಯಲ್ಲಿ ಬಸಪ್ಪ ಎಂಬುವವರು ಮೃತಪಟ್ಟಿದ್ದಾರೆ.
ಕರ್ನಾಟಕದ ಪ್ರವಾಹ ಪೀಡಿತರ ರಕ್ಷಣೆಗೆ ಸೇನಾಪಡೆ : ಕುಮಾರಸ್ವಾಮಿ
ಮೃತ ಬಸಪ್ಪ ಅವರ ಪತ್ನಿ ಹಾಗೂ ಇಬ್ಬರು ಮಕ್ಕಳು ಕೂಡ ಮಣ್ಣಿನಡಿ ಸಿಲುಕಿದ್ದಾರೆ ಎಂಬುದು ಸದ್ಯಕ್ಕೆ ಕೇಳಿಬರುತ್ತಿರುವ ಸುದ್ದಿ. ಮಣ್ಣಿನಡಿ ಸಿಲುಕಿರುವವರ ರಕ್ಷಣೆಗೆ ಕಾರ್ಯಾಚರಣೆ ಆರಂಭವಾಗಿದೆ. ಸ್ಥಳಕ್ಕೆ ಎನ್ ಡಿಆರ್ ಎಫ್ ತಂಡ ತಲುಪಿದ್ದು, ರಕ್ಷಣಾ ಕಾರ್ಯ ಆರಂಭಿಸಲಾಗಿದೆ. ಸ್ಥಳಕ್ಕೆ ಸುಳ್ಯ ಠಾಣೆ ಪೊಲೀಸರು ದೌಡಾಯಿಸಿದ್ದಾರೆ.
ಗುರುವಾರದಿಂದಲೇ ಜೋಡುಪಾಲದ ಮೇಲ್ಭಾಗದ ಈ ಗುಡ್ಡ ಜಾರತೊಡಗಿತ್ತು. ಇದಕ್ಕಾಗಿ ಇಲ್ಲಿನ ನಿವಾಸಿಗಳನ್ನು ಪಕ್ಕದ ಶಾಲೆಗೆ ಸ್ಥಳಾಂತರಿಸುವ ಕಾರ್ಯ ನಡೆಯುತ್ತಿತ್ತು. ಈ ಮಧ್ಯೆಯೇ ಗುಡ್ಡ ಕುಸಿದಿದೆ. ಗುಡ್ಡ ಸಂಪೂರ್ಣ ಜಾರಿದ ಪರಿಣಾಮ 3 ಮನೆಗಳು ನಾಶ ವಾಗಿವೆ. ರಸ್ತೆಯಿಡೀ ನೀರು ಹರಿದು ಬರುತ್ತಿದ್ದು, ಮೂರು ಕಿಲೋಮೀಟರ್ ನಷ್ಟು ವ್ಯಾಪ್ತಿಯಲ್ಲಿ ವಾಹನವಾಗಲಿ, ಜನರಾಗಲಿ ಹೋಗಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಮಧ್ಯೆ ಬೆಂಗಳೂರಿನಿಂದ ಮಂಗಳೂರಿಗೆ ಕೆಎಸ್ ಆರ್ ಟಿಸಿಯ ಎಲ್ಲ ವಿಲಾಸಿ ಬಸ್ಸುಗಳನ್ನು (ಐರಾವತ, ರಾಜಹಂಸ ಇತ್ಯಾದಿ) ರದ್ದು ಮಾಡಲಾಗಿದೆ.