ಬರೋಬ್ಬರಿ ಆರು ತಿಂಗಳ ಬಳಿಕ ಮಿರಾಲ್ ಪ್ರಿನ್ಸೆನ್ಸ್ ಹಡಗಿನಿಂದ ತೈಲ ತೆರವು..!
ಮಂಗಳೂರು, ಜನವರಿ 19: ಕಳೆದ ಆರು ತಿಂಗಳ ಹಿಂದೆ ಮಂಗಳೂರಿನ ಕಡಲ ಕಿನಾರೆಯಲ್ಲಿ ಆತಂಕ ಸೃಷ್ಠಿಸಿದ್ದ ಸರಕು ಸಾಗಾಟದ ಹಡಗಿನಲ್ಲಿದ್ದ ತೈಲವನ್ನು ಕೊನೆಗೂ ಹೊರತೆಗೆಯುವ ಕಾರ್ಯಾಚರಣೆ ಆರಂಭಗೊಂಡಿದೆ.
ಸೋಮೇಶ್ವರ ದ ಬಟ್ಟಪ್ಪಾಡಿ ಕಡಲ ಕಿನಾರೆಯಲ್ಲಿ 2022ರ ಜೂನ್ 21ರಂದು ಚೀನಾದಿಂದ ಲೆಬನಾನ್ಗೆ 8 ಸಾವಿರ ಟನ್ ತೂಕದ ಸ್ಟೀಲ್ ಕಾಯಿಲ್ ಸಾಗಿಸುತ್ತಿದ್ದ ಪ್ರಿನ್ಸೆಸ್ ಮಿರಾಲ್ ಎಂಬ ಹಡಗು ರಂಧ್ರ ಕಾಣಿಸಿಕೊಂಡು ಮುಳುಗಡೆಯಾಗಿತ್ತು. 15 ಮಂದಿ ಸಿರಿಯಾ ಮೂಲದ ನಾವಿಕರನ್ನು ಕೋಸ್ಟ್ ಗಾರ್ಡ್ ಯಶಸ್ವಿ ಯಾಗಿ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿತ್ತು. ಆದರೆ ಹಡಗಿನಲ್ಲಿದ್ದ 220 ಟನ್ ತೈಲ ಹೊರತೆಗೆಯಲಾಗದೇ ಅಪಾರ ಜಲಸಂಪತ್ತು ನಾಶವಾಗುವ ಆತಂಕ ಎದುರಾಗಿತ್ತು..
ಬರೋಬ್ಬರಿ ಆರು ತಿಂಗಳ ಬಳಿಕ ಹಡಗಿನಿಂದ ತೈಲ ಹೊರತೆಗೆಯುವ ಕಾರ್ಯಾಚರಣೆ ಆರಂಭಗೊಂಡಿದೆ. ಸದ್ಯ ಗುಜರಾತ್ ಮೂಲದ ಬನ್ಸಲ್ ಎಂಡೆವರ್ಸ್ ಸಂಸ್ಥೆಗೆ ತೈಲ ತೆರವು ಗುತ್ತಿಗೆ ನೀಡಲಾಗಿದೆ. 160 ಟನ್ ಫರ್ನೆಸ್ ಆಯಿಲ್, 60 ಟನ್ ಡೀಸೆಲ್ ಸೇರಿದಂತೆ 220 ಟನ್ ತೈಲವನ್ನು ಹೋಸ್ಪೈಪ್ ಅಳವಡಿಸಿ ವ್ಯಾಕ್ಯೂಂ ಪಂಪ್ ಮೂಲಕ ತೈಲವನ್ನು ಹೊರಕ್ಕೆಳೆಯುವ ಕಾರ್ಯಕ್ಕೆ ಚಾಲನೆ ಸಿಕ್ಕಿದೆ.

ಮುಂದಿನ 15 ದಿನಗಳ ಒಳಗಾಗ 320 ಟನ್ ಸಾಮರ್ಥ್ಯದ ಬಂಕರ್ ಬಾರ್ಜ್ ಮೂಲಕ ತೈಲವನ್ನು ಪೂರ್ಣ ವರ್ಗಾಯಿಸಿ ಹಳೆಬಂದರಿಗೆ ತರಲಾಗುವುದು ಎಂದುಗುತ್ತಿಗೆ ವಹಿಸಿದ ಕಂಪನಿ ಹೇಳಿಕೊಂಡಿದೆ.
ಈ ಹಿಂದೆಯೇ ತೈಲ ತೆರವು ಆಗಬೇಕಿದ್ದರೂ, ತೈಲ ತೆರವು ಕಾರ್ಯಾಚರಣೆ ಮಾಡದಂತೆ ಅಕ್ಟೋಬರ್ನಲ್ಲಿ ಯುಎಇಗೆ ಸೇರಿದ ಮೊಂಜಾಸಾ ಡಿಎಂಸಿಸಿ ಎಂಬ ಕಂಪೆನಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ತನಗೆ ಶಿಪ್ ಬಂಕರಿಂಗ್ ಕಾರ್ಯಕ್ಕಾಗಿ ಬರಬೇಕಾದ 1,71,301 ಅಮೆರಿಕನ್ ಡಾಲರ್ (ಸುಮಾರು 1.39 ಕೋಟಿ ರೂ.) ಮೊತ್ತ ಬಂದಿಲ್ಲ ಎಂದಿತ್ತು. ಅದು ಬರುವವರೆಗೆ ಈ ಹಡಗನ್ನು ತಡೆಹಿಡಿಯುವಂತೆ ಕೋರಿತ್ತು. ಅದನ್ನು ಹೈಕೋರ್ಟ್ ಮಾನ್ಯ ಮಾಡಿದ್ದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಹಿನ್ನೆಡೆಯಾಗಿತ್ತು.
ಬಳಿಕ ಜಿಲ್ಲಾಡಳಿತ ಹೈಕೋರ್ಟ್ಗೆ ಪರಿಸರ ಮಾಲಿನ್ಯ ಭೀತಿ ಹಿನ್ನೆಲೆ ತೈಲ ತೆರವಿಗೆ ಅರ್ಜಿ ಸಲ್ಲಿಸಿತ್ತು.ಇದೀಗ ತೈಲ ತೆರವಿಗೆ ಹೈಕೋರ್ಟ್ ಅನುಮತಿ ಹಿನ್ನೆಲೆಯಲ್ಲಿ ತೈಲ ತೆರವು ಮಾಡಲಾಗುತ್ತಿದೆ. ಸುಮಾರು 15 ದಿನಗಳ ಕಾಲ ತೈಲ ತೆರವು ಕಾರ್ಯ ನಡೆಯಲಿದ್ದ, ಮಾಲಿನ್ಯ ನಿಯಂತ್ರಣ ಮಂಡಳಿ, ಪೊಲೀಸ್ ಇಲಾಖೆ ಮತ್ತು ಕೋಸ್ಟ್ಗಾರ್ಡ್ನಿಂದ ನಿರಾಕ್ಷೇಪಣ ಪತ್ರ (ಎನ್ಒಸಿ) ಪಡೆದು ತೆರವು ಮಾಡಲಾಗುತ್ತಿದೆ.












Click it and Unblock the Notifications