ಮಂಗಳೂರು: ಪಾದ್ರಿಗೆ ಬೆದರಿಕೆ ಹಾಕಿದ ಬಿಜೆಪಿ ಮುಖಂಡನ ಮೇಲೆ ಕೇಸು
ಮಂಗಳೂರು, ಜೂನ್ 12: ಪ್ರಾರ್ಥನಾಲಯದ ಮುಂದೆ ಗೋಹತ್ಯೆ ವಿರುದ್ಧ ಪ್ರತಿಭಟನೆ ನಡೆಸಿ, ಧರ್ಮಗುರುಗಳಿಗೆ ಬೆದರಿಸಿದ ಪ್ರಕರಣಕ್ಕೆ ಸಂಬಂಧ ಬಿಜೆಪಿ ಅಲ್ಪಸಂಖ್ಯಾತ ಘಟಕದ ನಾಯಕರಿಬ್ಬರ ಮೇಲೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಘಟನೆ ವಿವರ: ಮಂಗಳೂರು ಬಿಜೆಪಿ ಅಲ್ಪಸಂಖ್ಯಾತ ನಾಯಕ ಹಾಗೂ ರಾಷ್ಟ್ರೀಯ ಕ್ರೈಸ್ತರ ವೇದಿಕೆ ಸಂಘಟನೆಯ ಅಧ್ಯಕ್ಷ ಫ್ರಾಂಕ್ಲಿನ್ ಮೊಂತೇರೊ ಹಾಗೂ ಓಸ್ವಲ್ ಡಿ'ಕುನ್ಹಾ ಎಂಬಿಬ್ಬರು ತಮ್ಮ ಬೆಂಬಲಿಗರೊಂದಿಗೆ ಗೋಹತ್ಯೆ ಮತ್ತು ಗೋಕಳ್ಳತನ ವಿರುದ್ಧ ಮಂಗಳೂರಿನ ಸಂತ ಲಾರೆನ್ಸ್ ಚರ್ಚ್ ಬೊಂದೇಲ್ ಇದರ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದರು.

ನಿನ್ನೆ ಭಾನುವಾರ ಆಗಿದ್ದುದರಿಂದ ಪ್ರಾರ್ಥನಾಲಯಕ್ಕೆ ನೂರಾರು ಭಕ್ತರು ಬಂದಿದ್ದರು. ಜೊತೆಗೆ ಪ್ರಾರ್ಥನಾಲಯದಲ್ಲಿ ಬಲಿಪೂಜೆ ನಡೆಯುತ್ತಿರುವ ವೇಳೆ ಫ್ರಾಂಕ್ಲಿನ್ ಸಂಗಡಿಗರು ಪ್ರಾರ್ಥನಾಲಯದ ಮುಂದೆ ಪ್ರತಿಭಟನೆ ನಡೆಸುತ್ತಿದ್ದರು. ಇದು ಬಲಿಪೂಜೆಯಲ್ಲಿ ನಿರತರಾಗಿರುವ ಭಕ್ತರಿಗೆ ಕಿರಿಕಿರಿಯುಂಟು ಮಾಡಿತ್ತು. ಇದನ್ನು ಪ್ರಶ್ನಿಸಲು ಹೋದ ಭಕ್ತರಿಗೆ ಬೆದರಿಕೆಯೊಡ್ಡಿದ್ದರು.
ಧರ್ಮಗುರುಗಳಿಗೂ ಬೆದರಿಕೆ ಹಾಕಿದ ಫ್ರಾಂಕ್ಲಿನ್
ಬಲಿಪೂಜೆ ನಡೆದ ನಂತರ ಚಚ ಧರ್ಮಗುರುಗಳಾದ ಫಾ. ಆಂಡ್ರ್ಯು ಡಿ'ಸೋಜ ಕಚೇರಿಗೆ ಏಕಾಏಕಿ ನುಗ್ಗಿದ ಪ್ರತಿಭಟನಾ ತಂಡ ನೀವು ಮತ್ತು ಭಕ್ತರು ನಮ್ಮ ಪ್ರತಿಭಟನೆಗೆ ಯಾಕೆ ಬೆಂಬಲ ನೀಡಲಿಲ್ಲ ಎಂದು ಪ್ರಶ್ನಿಸಿ ಗುರುಗಳಿಗೆ ಬೆದರಿಕೆಯೊಡ್ಡಿ ಹಲ್ಲೆಗೆ ಮುಂದಾಗಿದ್ದಾರೆ. ಈ ಬಗ್ಗೆ ನಗರದ ಗ್ರಾಮಾಂತರ ಠಾಣೆಯಲ್ಲಿ ಫ್ರಾಂಕ್ಲಿನ್ ಹಾಗೂ ಓಸ್ವಲ್ ಎಂಬುವವರ ಮೇಲೆ ಪ್ರಕರಣ ದಾಖಲಾಗಿದೆ.

ಪ್ರತಿಭಟನೆಗೆ ಸಾಕ್ಷಿಯಾದ ಜಗದೀಶ್ ಶೇಣವ
ಈ ಪ್ರತಿಭಟನೆಗೆ ದಕ್ಷಿಣ ಕನ್ನಡ ವಿಶ್ವ ಹಿಂದೂ ಪರಿಷತ್ ನ ಅಧ್ಯಕ್ಷರಾದ ಜಗದೀಶ್ ಶೇಣವ ಸಾಕ್ಷಿಯಾಗಿ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ. ಜೊತೆಗೆ ಕ್ರೈಸ್ತ ಬಾಂಧವರು ಗೋಹತ್ಯೆ ವಿರುದ್ಧ ಪ್ರತಿಭಟನೆ ನಡೆಸಬೇಕೆಂದು ತಿಳಿಸಿದ್ದಾರೆ.
ಈ ಘಟನೆಯ ಬಗ್ಗೆ ಪಾದ್ರಿಗಳು ಹಾಗೂ ಭಕ್ತರು ಫ್ರಾಂಕ್ಲಿನ್ ಮತ್ತು ಅವರ ಕ್ರೈಸ್ತ ವೇದಿಕೆಯ ಬಗ್ಗೆ ನಿರಾಶಾದಾಯಕ ವ್ಯಕ್ತಪಡಿಸಿದ್ದಾರೆ.
ಈ ಹಿಂದೆಯೂ ಈತ ಅಲ್ವಾರು ಕ್ರೈಸ್ತ ಕುಟುಂಬಗಳಿಗೆ ಸಾಕಷ್ಟ್ಟು ತೊಂದರೆ ಉಂಟುಮಾಡಿದ್ದಾನೆ, ಕ್ರೈಸ್ತ ವೇದಿಕೆ ಹೆಸರಿನಲ್ಲಿ ಈ ರೀತಿ ಧಮ್ಕಿ ಹಾಗೂ ಗಲಭೆ ಉಂಟುಮಾಡುವುದೇ ಫ್ರಾಂಕ್ಲಿನ್ ನ ಮುಖ್ಯ ಉದ್ದೇಶ ಎಂದು ಚರ್ಚ್ ನ ಆಡಳಿತ ಸದ್ಯಸ ಒಬ್ಬರು ತಿಳಿಸಿದ್ದಾರೆ.












Click it and Unblock the Notifications