ಕುಕ್ಕೆ ಸುಬ್ರಹ್ಮಣ್ಯದ ಬ್ರಹ್ಮರಥೋತ್ಸವಕ್ಕೆ ಭಕ್ತರಿಗಿಲ್ಲ ಅವಕಾಶ
ಮಂಗಳೂರು, ಡಿಸೆಂಬರ್ 2: ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಈ ಬಾರಿ ನಡೆಯಲಿರುವ ಬ್ರಹ್ಮರಥೋತ್ಸವಕ್ಕೆ ಭಕ್ತರಿಗೆ ನಿಷೇಧ ಹೇರಲಾಗಿದೆ.
ಪ್ರತಿ ವರ್ಷವೂ ಚಂಪಾಷಷ್ಠಿಯಂದು ಸುಬ್ರಹ್ಮಣ್ಯ ಸ್ವಾಮಿಯ ಬ್ರಹ್ಮ ರಥೋತ್ಸವವನ್ನು ಸಾಂಪ್ರದಾಯಿಕವಾಗಿ ಅದ್ಧೂರಿಯಿಂದ ನಡೆಸಲಾಗುತ್ತಿತ್ತು. ರಥೋತ್ಸವದಲ್ಲಿ ರಥ ಎಳೆಯಲು ಭಕ್ತರಿಗೂ ಅವಕಾಶ ಮಾಡಿಕೊಡಲಾಗುತ್ತಿತ್ತು. ಆದರೆ ಈ ಬಾರಿ ಕೊರೊನಾ ಸೋಂಕಿನ ಮುಂಜಾಗ್ರತೆಯ ಹಿನ್ನೆಲೆಯಲ್ಲಿ ಭಕ್ತರಿಗೆ ರಥ ಎಳೆಯುವ ಅವಕಾಶವನ್ನು ನೀಡಿಲ್ಲ.
ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಹೊಸದಾಗಿ ಅಭಿವೃದ್ಧಿ ಸಮಿತಿ ನೇಮಕ
ಕ್ಷೇತ್ರದ ಸಂಪ್ರದಾಯಕ್ಕೆ ಅನುಗುಣವಾಗಿ ಚಂಪಾಷಷ್ಠಿ ಮಹೋತ್ಸವವನ್ನು ನಡೆಸಲು ತೀರ್ಮಾನಿಸಲಾಗಿದೆ.
ಡಿಸೆಂಬರ್ 12ರಿಂದ ರಥೋತ್ಸವಕ್ಕೆ ಚಾಲನೆ ದೊರೆಯಲಿದ್ದು, ಡಿ19 ರಂದು ಪಂಚಮಿ ರಥೋತ್ಸವ ಹಾಗೂ ಡಿ.20ಕ್ಕೆ ಬ್ರಹ್ಮರಥೋತ್ಸವ ನಡೆಯಲಿದೆ. ಈ ಬಾರಿ ದೇವಸ್ಥಾನದ ಅರ್ಚಕರು, ಸಿಬ್ಬಂದಿಗಳಿಂದ ಮಾತ್ರ ಬ್ರಹ್ಮರಥ ಎಳೆಯಲು ತೀರ್ಮಾನಿಸಲಾಗಿದೆ. ಈ ಉತ್ಸವಕ್ಕೆ ಸಂಬಂಧಿಸಿ ಡಿ.6ರಂದು ಸಾರ್ವಜನಿಕ ಸಭೆ ಕರೆಯಲಾಗುವುದು ಎಂದು ದೇಗುಲದ ಅಭಿವೃದ್ಧಿ ಸಮಿತಿ ಅಧ್ಯಕ್ಷ, ಶಾಸಕ ಎಸ್.ಅಂಗಾರ ತಿಳಿಸಿದ್ದಾರೆ.
ಡಿ.1ರ ವರದಿಯಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 31959 ಕೊರೊನಾ ಸೋಂಕಿನ ಪ್ರಕರಣಗಳು ದಾಖಲಾಗಿವೆ. 30770 ಮಂದಿ ಗುಣಮುಖರಾಗಿದ್ದು, 472 ಸಕ್ರಿಯ ಪ್ರಕರಣಗಳಿದ್ದು, ಈವರೆಗೂ ಒಟ್ಟು 715 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.