ಎರ್ಮಾಯಿ ಜಲಪಾತ ಇನ್ನುಮುಂದೆ ಪ್ರವಾಸಿಗರಿಂದ ದೂರ
ಮಂಗಳೂರು, ನವೆಂಬರ್ 11: ಕಾನನದ ನಡುವೆ ಮೈದುಂಬಿ ಹರಿಯುವ ಜಲಪಾತಗಳ ದೃಶ್ಯ ಕಾವ್ಯವನ್ನು ನೋಡುವುದೇ ಕಣ್ಣಿಗೆ ಒಂದು ಹಬ್ಬ. ಇಂಥಹ ಹಲವು ಜಲಪಾತಗಳು ಪಶ್ಚಿಮಘಟ್ಟಗಳ ಸಾಲಿನ ಬೆಟ್ಟಗಳಿಂದ ಗಂಗೆಯಂತೆ ಶುಭ್ರವಾಗಿ ಧರೆಗಿಳಿಯುತ್ತಿದೆ. ಇಂಥಹ ಸುಂದರ ಅತ್ಯಾಕರ್ಷಕ ಜಲಪಾತ ಒಂದು ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿದೆ. ಆದರೆ ಈ ಜಲಪಾತವನ್ನು ವೀಕ್ಷಿಸಲು ಇನ್ನು ಪ್ರವಾಸಿಗರಿಗೆ ಸಾಧ್ಯ ಇಲ್ಲ.
ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ದಿಡುಪೆ ಸಮೀಪವಿರುವ ಎರ್ಮಾಯಿ ಜಲಪಾತ. ಸುಮಾರು 120 ಅಡಿ ಎತ್ತರದಿಂದ ಧುಮ್ಮಿಕ್ಕಿ ಹರಿಯುವ ಈ ಜಲಪಾತ ಪ್ರಕೃತಿ ಪ್ರಿಯರ ಸುಂದರ ತಾಣವೂ ಆಗಿದೆ. ಕಾಡು ರಸ್ತೆಯ ಮೂಲಕ ಈ ಜಲಪಾತವನ್ನು ನೋಡಲು ಸಾಗಬೇಕಿದ್ದು, ಕಾಲ್ನಡಿಗೆಯಲ್ಲಿ ಆದ ಸುಸ್ತು ಈ ಜಲಪಾತವನ್ನು ನೋಡಿದಾಗ ಮಾಯವಾಗಿ ಬಿಡುತ್ತದೆ. ಅಂಥಹ ಸೌಂದರ್ಯದ ಮಾಯಾಂಗನೆ ಈ ಎರ್ಯಾಯಿ ಜಲಪಾತವಾಗಿದೆ.

ನೋಡಿದಷ್ಟೂ ತೀರದ ದಾಹ ಅನುಭವ ಈ ಜಲಪಾತವನ್ನು ನೋಡಿದಾಗ ಅರಿವಿಗೆ ಬರುತ್ತದೆ. ಎರ್ಯಾಯಿ ಎಂದರೆ ಸ್ಥಳೀಯ ಭಾಷೆಯ ಪ್ರಕಾರ ಎತ್ತುಗಳು ಮಾಯವಾದ ಪ್ರದೇಶ ಎಂದರ್ಥ. ಹಿಂದೆ ಮೇಯಲು ಬಂದ ಎತ್ತುಗಳು ಇದೇ ಪ್ರದೇಶದಲ್ಲಿ ಮಾಯವಾದ ಕಾರಣ ಈ ಸ್ಥಳಕ್ಕೆ ಎರ್ಮಾಯಿ ಎನ್ನುವ ಹೆಸರು ಬಂದಿದೆ. ಈ ಜಲಪಾತವಲ್ಲದೆ, ಇದರ ಮೇಲೆ ಇನ್ನೂ ಏಳು ಜಲಪಾತಗಳು ಹರಿಯುತ್ತಿದ್ದು, ಸೌಂದರ್ಯದಲ್ಲಿ ಒಂದಕ್ಕಿಂತ ಒಂದು ಮಿಗಿಲಾಗಿದೆ.

ದೂರದ ಊರುಗಳಿಂದ ಈ ಜಲಪಾತದ ವೀಕ್ಷಣೆಗಾಗಿ ಪ್ರವಾಸಿಗರ ಜೊತೆಗೆ ಬರುವ ಕೆಲವು ವಿಕೃತ ಮನಸ್ಸುಗಳಿಂದ ಇದೀಗ ಜಲಪಾತ ವೀಕ್ಷಣೆಗೆ ನಿಷೇಧಿಸಲಾಗಿದೆ. ಕೆಲವು ದಿನಗಳ ಹಿಂದೆ ಈ ಜಲಪಾತಕ್ಕಿಳಿದಿದ್ದ ಅಕ್ಷಿತ್ ಅನ್ನುವ ಯುವಕ ನೀರುಪಾಲಾಗಿದ್ದ.ಎಚ್ಚರಿಕೆ ನಿರ್ಲಕ್ಷಿಸಿ, ಸರಿಯಾದ ರಕ್ಷಣೆ ಇಲ್ಲದೆ ಅಧಿಕಾರಗಳ ಅಸಡ್ಡೆತನ ದಿಂದ ಈ ಘಟನೆ ನಡೆದಿದ್ದು ಬೆಳ್ತಂಗಡಿ ಶಾಸಕ ಕೆ ವಸಂತ ಬಂಗೇರ ಈ ಜಲಪಾತದ ವೀಕ್ಷಣೆಗೆ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮದ್ಯದ ಬಾಟಲಿಗಳ ಜೊತೆ ಪ್ರವಾಸಿಗರು ಇಲ್ಲಿಗೆ ಬರುತ್ತಿದ್ದು, ಕುಡಿದು ಮಜಾ ಉಡಾಯಿಸುವುದರ ಜೊತೆ ತಮ್ಮ ಜೊತೆ ತಂದು ಪ್ಲಾಸ್ಟಿಕ್ ಹಾಗೂ ಬಾಟಲಿಗಳನ್ನೂ ಚೆಲ್ಲಿ ವಿಕೃತಿ ಮೆರೆಯುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿಬಂದಿದೆ. ಹಾಗಾಗಿ ಜಲಪಾತದ ವೀಕ್ಷಣೆಗೆ ಪ್ರವಾಸಿಗರಿಗೆ ನಿಷೇಧ ಹೇರಿದ್ದು ಸರಿ ಎನ್ನುತ್ತಾರೆ ಪರಿಸರ ಪ್ರೇಮಿಗಳು.












Click it and Unblock the Notifications