ರಸ್ತೆಗೆ ಆಗ್ರಹಿಸಿ ಸೋತ ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರಕ್ಕೆ ನಿರ್ಧಾರ
ಮಂಗಳೂರು, ಏಪ್ರಿಲ್ 08:ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಭರದಿಂದ ಸಾಗುತ್ತಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಸ್ಪರ್ಧೆಗೆ ಬಿದ್ದು ಚುನಾವಣಾ ಪ್ರಚಾರ ನಡೆಸುತ್ತಿವೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಈ ನಡುವೆ ಮತದಾನಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗ ಮೂಲ ಸೌಕರ್ಯಗಳ ಕೊರತೆಯನ್ನು ಮುಂದಿಟ್ಟುಕೊಂಡು ನೋಟಾ ಅಭಿಯಾನ ಮತ್ತು ಮತದಾನ ಬಹಿಷ್ಕಾರದ ಬೆದರಿಕೆ ಕೂಗು ಕೇಳ ಬರತೊಡಗಿದೆ.
ಜನಪ್ರತಿನಿಧಿಗಳಿಗೆ ಶುರುವಾಯ್ತು ಚುನಾವಣೆ ಬಹಿಷ್ಕಾರದ ಬಿಸಿ
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಜಾಲ್ಸೂರು ಎಂಬಲ್ಲಿ ಚುನಾವಣಾ ಬಹಿಷ್ಕಾರದ ಬೆದರಿಕೆ ಕೇಳಿಬಂದಿದೆ. ರಸ್ತೆ ಅಭಿವೃದ್ಧಿಯಾಗದ ಹಿನ್ನೆಲೆಯಲ್ಲಿ ಜಾಲ್ಸೂರಿನ ಕಾಳಮನೆ ಭಾಗದ ಜನರು ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ತಮ್ಮ ಮನೆಗಳ ಗೋಡೆಯ ಮೇಲೆ ಮತದಾನ ಬಹಿಷ್ಕಾರ ಎಂಬ ಪೋಸ್ಟರ್ ಅಂಟಿಸಿದ್ದಾರೆ .
ಜಾಲ್ಸೂರು ಗ್ರಾಮ ಪಂಚಾಯತ್ ನ ಒಂದನೇ ವಾರ್ಡ್ ನ ಕಾಳಮನೆ ಭಾಗದ ಜನರು ರಸ್ತೆ ನಿರ್ಮಾಣವಾಗದ ಕಾರಣ ಲೋಕಸಭಾ ಚುನಾವಣೆಯಲ್ಲಿ ಭಾಗವಹಿಸದೆ ಮತದಾನ ಬಹಿಷ್ಕರಿಸಲು ತೀರ್ಮಾನಿಸಿದ್ದಾರೆ.
ಉಡುಪಿ: ಚುನಾವಣಾ ಬಹಿಷ್ಕಾರ ಕ್ಕೆ ಮುಂದಾದ ಬಡಾ ಗ್ರಾಮಸ್ಥರು
ಜಾಲ್ಸೂರು ಪೇಟೆಯಿಂದ ಕಾಳಮನೆ ಕಡೆಗೆ ಹೋಗಲು ಯಾವುದೇ ರಸ್ತೆ ವ್ಯವಸ್ಥೆಗಳಿಲ್ಲ. ಈ ಭಾಗದಲ್ಲಿ ರಸ್ತೆ ನಿರ್ಮಾಣವಾಗದ ಕಾರಣ ವಾಹನಗಳು ಕೂಡ ಸಂಚರಿಸುವುದಿಲ್ಲ. ಜನರು ಕಾಲುದಾರಿಯಲ್ಲೇ ತಮ್ಮ ಮನೆಗಳಿಗೆ ತೆರಳಬೇಕಾದ ಅನಿವಾರ್ಯತೆ ಇದೆ. ಈ ಕುರಿತು ಜನ ಪ್ರತಿನಿಧಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಈ ಬಾರಿ ಚುನಾವಣೆ ಬಹಿಷ್ಕರಿಸಲು ಜನರು ನಿರ್ಧರಿಸಿದ್ದಾರೆ.