ಸ್ಮಶಾನಗುಡ್ಡೆಯಲ್ಲಿ ಬಗೆಹರಿದ ನೀರಿನ ಬವಣೆ, ಜನರಲ್ಲಿ ಮಂದಹಾಸ
ಮಂಗಳೂರು, ಜೂನ್ 4: ಮಂಗಳೂರು ನಗರದ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಜೆಪ್ಪಿನಮೊಗರು ಪ್ರದೇಶದ ಸ್ಮಶಾನಗುಡ್ಡೆಯಲ್ಲಿ ನೀರಿನ ಸಮಸ್ಯೆ ಆರಂಭವಾಗಿ ಹಲವು ವರ್ಷಗಳೇ ಕಳೆದಿದ್ದವು. ಅದನ್ನು ತಿರುಗಿ ನೋಡುವವರೂ ಇಲ್ಲದೇ ಜನರು ತೀವ್ರ ಸಮಸ್ಯೆಯನ್ನು ಅನುಭವಿಸುತ್ತಿದ್ದರು. ಇದೀಗ ಆ ಸಮಸ್ಯೆಗೆ ಪರಿಹಾರ ದೊರೆತು ಜನರ ಮುಖದಲ್ಲಿ ನಗುವರಳಿದೆ.
ಮಂಗಳೂರಿನಲ್ಲಿ ಶುಭ ಸಮಾರಂಭಗಳಿಗೂ ತಟ್ಟಿದ ನೀರಿನ ಬಿಸಿ
ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಈ ಸ್ಮಶಾನಗುಡ್ಡೆ ಎತ್ತರ ಪ್ರದೇಶವಾದ ಹಿನ್ನೆಲೆಯಲ್ಲಿ ಮಂಗಳೂರು ನಗರಕ್ಕೆ ನೀರುಣಿಸುವ ತುಂಬೆ ಕಿಂಡಿ ಅಣೆಕಟ್ಟಿನಿಂದ ಪೈಪಿನ ಮೂಲಕ ಬರುವ ನೀರು ಇಲ್ಲಿಗೆ ತಲುಪುತ್ತಿರಲಿಲ್ಲ. ಹಲವಾರು ವರ್ಷಗಳಿಂದ ಈ ಭಾಗದ ಜನರು ನೀರಿನ ಸಮಸ್ಯೆ ಪರಿಹರಿಸುವಂತೆ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿರಲಿಲ್ಲ.
ಕೊನೆಗೆ ಸಮಸ್ಯೆಯಿಂದ ಬೇಸತ್ತ ನಾಗರಿಕರು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರನ್ನು ಭೇಟಿಯಾಗಿ ಕುಡಿಯುವ ನೀರಿನ ಸಂಕಷ್ಟವನ್ನು ಬಗೆಹರಿಸಲು ಕೋರಿದ್ದರು. ಇದಕ್ಕೆ ಸ್ಪಂದಿಸಿದ ಶಾಸಕ ವೇದವ್ಯಾಸ್ ಕಾಮತ್ ಅವರು ತಕ್ಷಣ ಅಧಿಕಾರಿಗಳನ್ನು ಸಂಪರ್ಕಿಸಿ ಜಪ್ಪಿನಮೊಗರು ಸ್ಮಶಾನಗುಡ್ಡೆಯಲ್ಲಿ ಕೊಳವೆಬಾವಿ ತೋಡುವಂತೆ ಸೂಚನೆ ನೀಡಿದ್ದರು. ಶಾಸಕರ ಸೂಚನೆಯಂತೆ ಎರಡು ದಿನಗಳೊಳಗೆ ಅಲ್ಲಿ ಕೊಳವೆಬಾವಿ ತೋಡಿ ವಿದ್ಯುತ್ ಸಂಪರ್ಕ ಕಲ್ಪಿಸಿ ನೀರನ್ನು ಮೇಲೆತ್ತಿ ಸ್ಥಳೀಯರಿಗೆ ಸರಬರಾಜು ಮಾಡಿದ್ದಾರೆ. ಇದೀಗ ಈ ಭಾಗದ ದಶಕದ ನೀರಿನ ಸಮಸ್ಯೆ ಬಗೆಹರಿದು, ಜನರ ಮುಖದಲ್ಲಿ ಮಂದಹಾಸ ಮೂಡಿದೆ.