'ಎತ್ತಿನಹೊಳೆ ಯೋಜನೆ ವಿಚಾರದಲ್ಲಿ ಆತುರ ಬೇಡ'
ಮಂಗಳೂರು, ಅಕ್ಟೋಬರ್ 19 : 'ಎತ್ತಿನಹೊಳೆ ಯೋಜನೆ ವಿಚಾರದಲ್ಲಿ ವಿವರವಾದ ಅಧ್ಯಯನ ನಡೆಯಬೇಕು. ಕರ್ನಾಟಕ ಸರ್ಕಾರ ಯೋಜನೆ ಬಗ್ಗೆ ಆತುರ ವಹಿಸುತ್ತಿರುವುದು ಅಪಾಯಕಾರಿ, ಇದರ ಪರಿಣಾಮವಾಗಿ ಮುಂದೊಂದು ದಿನ ಮಲೆನಾಡು ಕೂಡಾ ನೀರಿಗಾಗಿ ಪರಿತಪಿಸುವ ಪರಿಸ್ಥಿತಿ ಬರಲಿದೆ' ಎಂದು ತುಮಕೂರು ವಿಜ್ಞಾನ ಕೇಂದ್ರದ ಉಪಾಧ್ಯಕ್ಷ ಸಿ. ಯತಿರಾಜು ಹೇಳಿದ್ದಾರೆ.
ಮಂಗಳೂರು ಸಿಟಿಝನ್ಸ್ ಕೌನ್ಸಿಲ್ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ 'ಎತ್ತಿನಹೊಳೆ ಯೋಜನೆ ಒಂದು ವೈಜ್ಞಾನಿಕ ಸಮೀಕ್ಷೆ' ಕುರಿತ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, 'ಯೋಜನೆ ಬಗ್ಗೆ ಸರ್ಕಾರ ಆತುರದ ನಿರ್ಧಾರ ತೆಗೆದುಕೊಳ್ಳುವುದು ಸರಿಯಲ್ಲ' ಎಂದರು. [ಎತ್ತಿನಹೊಳೆ ಯೋಜನೆ ನೀರಿನ ಲಭ್ಯತೆ ಬಗ್ಗೆ ಆತಂಕ ಬೇಡ]

'ಎತ್ತಿನಹೊಳೆ ಯೋಜನೆ ಜಾರಿಯಿಂದ ಆಗಬಹುದಾದ ತಕ್ಷಣ ಹಾಗೂ ದೀರ್ಘಕಾಲೀನ ಪರಿಣಾಮಗಳ ಬಗ್ಗೆ ಸಮಾಲೋಚನೆ, ಪರಾಮರ್ಶೆ ಆಗಬೇಕಾಗಿದೆ. ಸದ್ಯ, ಯೋಜನೆಯನ್ನು ರಾಜಕೀಯ ಲಾಭಕ್ಕಾಗಿ ಮಾತ್ರವೇ ಮಾಡಲಾಗುತ್ತಿದೆ. ಈ ಯೋಜನೆಗೆ ಅರಣ್ಯ ಇಲಾಖೆಯಿಂದ ಒಪ್ಪಿಗೆ ಪಡೆಯಲಾಗಿಲ್ಲ' ಎಂದು ಯತಿರಾಜು ಹೇಳಿದರು. [ಎತ್ತಿನಹೊಳೆ ಯೋಜನೆ : ಸರ್ಕಾರದ ಸ್ಪಷ್ಟನೆಗಳು]
'ಅರಣ್ಯ ಇಲಾಖೆ ಒಪ್ಪಿಗೆ ಸಿಗುವ ತನಕ ಯಾವುದೇ ಕಾಮಗಾರಿ ನಡೆಸುವುದಿಲ್ಲ ಎಂದು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಎದುರು ನೀರಾವರಿ ನಿಗಮ ಹೇಳಿದೆ. ಆದರೆ, ನ್ಯಾಯಾಲಯಕ್ಕೆ ತಪ್ಪು ಮಾಹಿತಿ ಕೊಟ್ಟು ಕಾಮಗಾರಿ ನಡೆಸಲಾಗುತ್ತಿದೆ' ಎಂದು ಯತಿರಾಜು ಅವರು ದೂರಿದರು. [ಎತ್ತಿನಹೊಳೆ ಯೋಜನೆ ನಿಲ್ಲಿಸಿ, ನೇತ್ರಾವತಿ ಉಳಿಸಿ]
'ದಕ್ಷಿಣ ಭಾರತದ 58 ಪ್ರಮುಖ ನದಿಗಳು ಪಶ್ಚಿಮಘಟ್ಟದಲ್ಲಿ ಜನ್ಮ ತಾಳುತ್ತವೆ. ಈಗಾಗಲೇ ಅಭಿವೃದ್ದಿ ಹೆಸರಿನಲ್ಲಿ ನಿರಂತರ ದಾಳಿಯ ಮೂಲಕ ಪಶ್ಚಿಮಘಟ್ಟಕ್ಕೆ ಹಾನಿಯಾಗಿದೆ. ಮುಂದೊಂದು ದಿನ ಬಯಲು ಸೀಮೆ ಮಾತ್ರವಲ್ಲ ಮಲೆನಾಡಿನ ಜನರಿಗೂ ಕುಡಿಯಲು ನೀರು ಸಿಗದು' ಎಂದು ಯತಿರಾಜು ಅವರು ಎಚ್ಚರಿಕೆ ನೀಡಿದರು.
ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ನೀರಾವರಿ ತಜ್ಞ ಡಾ.ಟಿ.ವಿ.ರಾಮಚಂದ್ರ ಅವರು, 'ಎತ್ತಿನಹೊಳೆ ಯೋಜನೆಗಾಗಿ 13 ಸಾವಿರ ಕೋಟಿ ರೂ. ಖರ್ಚು ಮಾಡಿ 5 ಟಿಎಂಸಿ ನೀರು ಕೊಡುವ ಬದಲು ಆ ಹಣದಲ್ಲಿ ಶೇ. 10ರಷ್ಟು ಉಪಯೋಗಿಸಿ ಮಳೆ ನೀರು ಸಂಗ್ರಹಿಸುವ ಮೂಲಕ ಬಯಲು ಸೀಮೆಗೆ ನೀರೊದಗಿಸಲು ಸಾಧ್ಯವಿದೆ' ಎಂದು ಅಭಿಪ್ರಾಯಪಟ್ಟರು.
ಏನಿದು ಎತ್ತಿನಹೊಳೆ ಯೋಜನೆ? : ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳನ್ನು ಒಳಗೊಂಡಂತೆ ರಾಜ್ಯದ 7 ಜಿಲ್ಲೆಗಳ 28 ತಾಲ್ಲೂಕುಗಳ 68.5 ಲಕ್ಷ ಜನರಿಗೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಸರ್ಕಾರ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯನ್ನು ಕರ್ನಾಟಕ ನೀರಾವರಿ ನಿಗಮದ ಮೂಲಕ ಅನುಷ್ಟಾನಗೊಳಿಸುತ್ತಿದೆ.












Click it and Unblock the Notifications