ಶೆಣೈಗೆ ಜಾಮೀನು ನೀಡಿದ್ದೇಕೆ, ಬಾಳಿಗಾ ಕುಟುಂಬದಿಂದ ಸುಪ್ರೀಂಗೆ ಅರ್ಜಿ
ಆರ್ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ನರೇಶ್ ಶೆಣೈಗೆ ಹೈಕೋರ್ಟ್ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಬಾಳಿಗಾ ಕುಟುಂಬವು ಸುಪ್ರೀಂ ಕೋರ್ಟ್ಗೆ ಅರ್ಜಿ ಹಾಕಿದೆ
ಮಂಗಳೂರು, ನವೆಂಬರ್ 27: ಆರ್ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ನರೇಶ್ ಶೆಣೈಗೆ ಹೈಕೋರ್ಟ್ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಬಾಳಿಗಾ ಕುಟುಂಬವು ಸುಪ್ರೀಂ ಕೋರ್ಟ್ಗೆ ಹಾಕಿದ್ದ ಅರ್ಜಿಯ ವಿಚಾರಣೆಯು ಸೋಮವಾರ ನಡೆಯಲಿದೆ ಎಂದು ಹೈಕೋರ್ಟ್ನ ನ್ಯಾಯವಾದಿ ರವೀಂದ್ರ ಕಾಮತ್ ತಿಳಿಸಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿನಾಯಕ್ ಬಾಳಿಗ ಅವರ ಹತ್ಯೆ ಪ್ರಕರಣದ ತನಿಖೆ ನಡೆಯುತ್ತಿರುವಾಗ ಪ್ರಮುಖ ಆರೋಪಿಗೆ ಜಾಮೀನು ನೀಡಿದ್ದರಿಂದ ತನಿಖೆಗೆ ತಡೆಯಾಗುತ್ತದೆ.
ತಮ್ಮ ಕುಟುಂಬಕ್ಕೂ ಅಪಾಯ ಹಾಗೂ ಸಾಕ್ಷಿ ನಾಶಕ್ಕೂ ಸಹಕಾರಿಯಾಗಲಿದೆ ಎಂದು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ಮಧ್ಯೆ ನಾರ್ಕೊ ಅನಾಲಿಸಿಸ್ಗೆ ಆರೋಪಿ ನರೇಶ್ ಶೆಣೈ ನಿರಾಕರಿಸಿರುವುದನ್ನು ಮಂಗಳೂರು ಸೆಷನ್ಸ್ ಕೋರ್ಟ್ ಎತ್ತಿಹಿಡಿದಿದೆ. ಈ ತೀರ್ಪಿನ ವಿರುದ್ಧವೂ ಹೈಕೋರ್ಟ್ನಲ್ಲಿ ಮನವಿ ಸಲ್ಲಿಸಲಾಗಿದೆ ಎಂದರು.

ಇದೇ ವೇಳೆ ಮಾತನಾಡಿದ ದೇಶಪ್ರೇಮಿ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಪ್ರೊ. ನರೇಂದ್ರ ನಾಯಕ್ ಅವರು ಬಾಳಿಗ ಕೊಲೆ ಪ್ರಕರಣದಲ್ಲಿ ಮಂಗಳೂರು ಪೊಲೀಸರು ನಡೆದುಕೊಂಡ ಬಗ್ಗೆಯೂ ಸಂಶಯ ವ್ಯಕ್ತವಾಗುತ್ತದೆ.
ವಿನಾಯಕ ಬಾಳಿಗ ಬರೆದ ಪತ್ರವನ್ನು ಹಾಜರುಪಡಿಸುವಂತೆ ಮಠದ ಈಗಿನ ಮುಖ್ಯಸ್ಥ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರಿಗೆ ಸಮನ್ಸ್ ಕಳುಹಿಸಿದಾಗ ಸ್ವಾಮೀಜಿ ಖುದ್ದು ಹಾಜರಾಗದೆ ಮಠದ ಗುಮಾಸ್ತರನ್ನು ಹಾಗೂ ತಮ್ಮ ಪ್ರತಿನಿಧಿಯಾಗಿ ಇಬ್ಬರು ವಕೀಲರನ್ನು ಕಳುಹಿಸಿದ್ದರು.
ಸಾಮಾನ್ಯವಾಗಿ ಕ್ರಿಮಿನಲ್ ಪ್ರಕರಣಗಳಲ್ಲಿ ಠಾಣೆಯಲ್ಲಿ ಪ್ರಶ್ನೋತ್ತರ ವಿಚಾರಣೆ ನಡೆಸುವುದರಿಂದ ಹೀಗೆ ವ್ಯಕ್ತಿಯ ಬದಲು ಇನ್ನೊಬ್ಬರು ಪ್ರತಿನಿಧಿಯಾಗಿ ಹೋಗುವಂತಿಲ್ಲವಾದರೂ ಪೊಲೀಸರು ಇದನ್ನು ಮಾನ್ಯ ಮಾಡಿರುವುದು ಅನುಮಾನಕ್ಕೆ ಎಡೆ ಮಾಡಿದೆ ಎಂದರು.
ಮಂಪರು ಪರೀಕ್ಷೆಗೆ ಒಳಪಡಲು ಪ್ರಕರಣದ ಪ್ರಮುಖ ಆರೋಪಿಯಾಗಿರುವ ನರೇಶ್ ಶೆಣೈಗೆ ಹೆದರಿಕೆ ಯಾಕೆ ಎಂದು ವಿಚಾರವಾದಿ ಸಂಘದ ರಾಷ್ಟ್ರೀಯ ಅಧ್ಯಕ್ಷ ನರೇಂದ್ರ ನಾಯಕ್ ಪ್ರಶ್ನಿಸಿದ್ದಾರೆ.
ಆರೋಪಿಗೆ ಮಂಪರು ಪರೀಕ್ಷೆಗೆ ಒಳಪಡಿಸಿದರೆ ಸತ್ಯಾಂಶ ಹೊರಬೀಳುವ ಸಾಧ್ಯತೆ ಇದೆ. ಆದ್ದರಿಂದ ಮಂಪರು ಪರೀಕ್ಷೆಗೆ ಸಮ್ಮತಿ ನೀಡುವಂತೆ ಕೋರಿ ಬಾಳಿಗಾ ಕುಟಂಬ ಹೈಕೋರ್ಟ್ಗೆ ಮನವಿ ಸಲ್ಲಿಸಿದೆ. ತನ್ನನ್ನು ತಾನು ಅಮಾಯಕನೆಂದು ಹೇಳಿಕೊಳ್ಳುತ್ತಿರುವ ನರೇಶ್ ಶೆಣೈಗೆ ಮಂಪರು ಪರೀಕ್ಷೆಗೆ ಒಳಪಡಲು ಆತಂಕ ಯಾಕೆ ಎಂದವರು ಪ್ರಶ್ನಿಸಿದ್ದಾರೆ.
ವಿನಾಯಕ ಬಾಳಿಗಾ ಅವರು ವೆಂಕಟರಮಣ ದೇವಸ್ಥಾನ ಹಾಗೂ ಕಾಶಿ ಮಠಗಳಲ್ಲಿ ನಡೆಯುತ್ತಿದ್ದ ಅವ್ಯವಹಾರಗಳನ್ನು ಪ್ರಶ್ನಿಸಿದ್ದರು. ಈ ಕುರಿತು ಕಾಶಿಮಠದ ಈಗಿನ ಮುಖ್ಯಸ್ಥರಿಗೆ ಬಾಳಿಗಾ ಅವರು ಪತ್ರ ಬರೆದಿದ್ದರೆನ್ನಲಾಗಿದೆ. ಬಾಳಿಗಾ ಅವರು ಹತ್ಯೆಯಾಗುವ ಕೆಲವು ದಿನಗಳ ಮುಂಚೆ ಮಠದ ಮುಖ್ಯಸ್ಥರು ಬೀಡುಬಿಟ್ಟಿದ್ದ ದೆಹಲಿ ಕ್ಯಾಂಪ್ಗೆ ಪತ್ರವನ್ನು ಕಳುಹಿಸಿದ್ದರು.
ವಿನಾಯಕ ಬಾಳಿಗಾ ಅವರು ಬರೆದ ಪತ್ರವನ್ನು ಹಾಜರುಪಡಿಸುವಂತೆ ಮಠದ ಈಗಿನ ಸ್ವಾಮೀಜಿಗೆ ಸಮನ್ಸ್ ಕಳುಹಿಸಿದಾಗ ಸ್ವಾಮೀಜಿಯವರೇ ಖುದ್ದಾಗಿ ಹಾಜರಾಗಬೇಕಿತ್ತು. ಆದರೆ ಅವರು ಮಠದ ಗುಮಾಸ್ತನನ್ನು ಹಾಗೂ ತಮ್ಮ ಪ್ರತಿನಿಧಿಯಾಗಿ ಇಬ್ಬರು ವಕೀಲರನ್ನು ಕಳುಹಿಸಿದ್ದರು ಎಂದರು.
ಸುದ್ದಿಗೋಷ್ಠಿಯಲ್ಲಿ ದೆಹಲಿ ಹೈಕೋರ್ಟ್ನ ವಕೀಲೆ ಲೀನಾ, ಕಾರ್ಪೊರೇಟರ್ ದಯಾನಂದ್, ದಸಂಸದ ಎಂ.ದೇವದಾಸ್, ಬಾಳಿಗಾ ಅವರ ತಂದೆ, ತಾಯಿ ಹಾಗೂ ಸಹೋದರಿಯರು ಉಪಸ್ಥಿತರಿದ್ದರು.












Click it and Unblock the Notifications