ಮಂಗಳೂರು ರೈಲ್ವೆ ನಿಲ್ದಾಣಕ್ಕೆ ನಾರಾಯಣ ಗುರು, ವಿಮಾನ ನಿಲ್ದಾಣಕ್ಕೆ ಅಬ್ಬಕ್ಕ ಹೆಸರಿಡಿ: ಸಿಎಂಗೆ ಖಾದರ್ ಮನವಿ
ಮಂಗಳೂರು, ನವೆಂಬರ್, 19; ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣಕ್ಕೆ ಬ್ರಹ್ಮಶ್ರೀ ನಾರಾಯಣಗುರು ಹೆಸರು, ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವೀರರಾಣಿ ಅಬ್ಬಕ್ಕ ಹೆಸರು ಇಡಬೇಕು ಎಂದು ಮಾಜಿ ಸಚಿವ ಯುಟಿ ಖಾದರ್ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಒತ್ತಾಯ ಮಾಡಿದ್ದಾರೆ.
ಮಂಗಳೂರಿನಲ್ಲಿ ಸ್ವಾತಂತ್ರ್ಯ ವೀರ ಕೆದಂಬಾಡಿ ರಾಮಯ್ಯ ಗೌಡ ಪ್ರತಿಮೆ ಅನಾವರಣ ಬಳಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ವಿಪಕ್ಷ ಉಪನಾಯಕ ಯು.ಟಿ.ಖಾದರ್, ಬಾವುಟ ಗುಡ್ಡೆಯಲ್ಲಿ ಮಾಡಲಾಗಿರುವ ಪ್ರತಿಮೆ ಅನಾವರಣ ಇಡೀ ಕರ್ನಾಟಕಕ್ಕೆ ಹೆಮ್ಮೆಯ ವಿಚಾರವಾಗಿದೆ. ಭವಿಷ್ಯದಲ್ಲಿ ಇದು ವಿದ್ಯಾರ್ಥಿಗಳಿಗೆ ಇತಿಹಾಸ ತಿಳಿಸಲು ಅಗತ್ಯವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವಾರು ಸ್ವಾತಂತ್ರ್ಯ ಹೋರಾಟಗಾರರು ಜಿಲ್ಲೆಯಲ್ಲಿ ಇದ್ದಾರೆ. ಉತ್ತರ ಭಾರತದ ಸ್ವಾತಂತ್ರ್ಯ ಹೋರಾಟಗಾರರಿಗೆ ಸಿಕ್ಕ ಮಹತ್ವ ನಮ್ಮವರಿಗೆ ಸಿಕ್ಕಿಲ್ಲ. ಹಾಗಾಗಿ ಪಠ್ಯ ಪುಸ್ತಕದಲ್ಲಿ ರಾಮಯ್ಯ ಗೌಡರ ಪಠ್ಯ ಸೇರಿಸಬೇಕು ಎಂದು ಯು.ಟಿ.ಖಾದರ್ ಸಿಎಂಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರದ್ದು ಜಾತಿ, ಧರ್ಮ ಮೀರಿ ನಿಂತ ವ್ಯಕ್ತಿತ್ವವಾಗಿತ್ತು. ಸ್ವಾತಂತ್ರ್ಯ ಹೋರಾಟಗಾರರ ತತ್ವ ನಮಗೆ ಮುಖ್ಯ ಆಗಬೇಕು. ಅವರೆಲ್ಲರ ಇತಿಹಾಸಗಳು ಪಠ್ಯದಲ್ಲಿ ದಾಖಲಾಗಿ ಮುಂದಿನ ಪೀಳಿಗೆಗೆ ತಿಳಿಯುವಂತಾಗಲಿ ಎಂದರು.
Voter Data Theft: ತೀವ್ರಗತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು: ಸಿಎಂ ಬಸವರಾಜ ಬೊಮ್ಮಾಯಿ
ಬೊಮ್ಮಾಯಿಯನ್ನು ಹೊಗಳಿದ ಖಾದರ್
ಜಿಲ್ಲೆಗೆ ನಿರ್ಮಲಾನಂದನಾಥ ಸ್ವಾಮೀಜಿಯವರ ಮಾರ್ಗದರ್ಶನ ಬೇಕು. ಸಿಎಂ ಬಸವರಾಜ ಬೊಮ್ಮಾಯಿ ಕೂಡ ಜಿಲ್ಲೆಗೆ ಯಾವುದೇ ಯೋಜನೆ ಕೇಳಿದರೂ ಕೂಡ ಇಲ್ಲ ಅಂದಿಲ್ಲ. ಮಂಗಳೂರು ಏರ್ಪೋರ್ಟ್ಗೆ ವೀರರಾಣಿ ಅಬ್ಬಕ್ಕ ಹಾಗೂ ರೈಲ್ವೆ ನಿಲ್ದಾಣಕ್ಕೆ ನಾರಾಯಣ ಗುರುಗಳ ಹೆಸರಿಡಬೇಕು. ಈ ಬಗ್ಗೆ ಮುಖ್ಯಮಂತ್ರಿಗಳು ಗಮನಹರಿಸಲಿ ಎಂದು ಖಾದರ್ ಮನವಿ ಮಾಡಿದರು.
ಬಸವರಾಜ ಬೊಮ್ಮಾಯಿಗೆ ಖಾದರ್ ಬೇಡಿಕೆ
ಜೊತೆಗೆ ಈ ವೇದಿಕೆಯಲ್ಲಿ ಜಿಲ್ಲೆಗೆ 100 ಕೋಟಿ ಅನುದಾನ ಘೋಷಣೆ ಮಾಡಲಿ. ಅಲ್ಲದೇ 2ಎ ಮೀಸಲಾತಿ ಇನ್ನು ಮುಂದೆ ಯಾರಿಗೂ ಕೊಡುವುದು ಬೇಡ. ಇದರಿಂದ ಜಿಲ್ಲೆಯ ಹಲವು ಜಾತಿಗಳಿಗೆ ಸಮಸ್ಯೆ ಆಗುತ್ತದೆ. ಇದನ್ನು ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಕೇಳಿಕೊಳ್ಳುತ್ತೇವೆ ಅಂತಾ ಯು.ಟಿ.ಖಾದರ್ ಹೇಳಿದರು.
ಗುಡ್ಡೆಯ ಟಾಗೋರ್ ಪಾರ್ಕ್ಗೆ ಹೆಚ್ಚಿದ ಕಳೆ
ಮಂಗಳೂರಿನ ಹೃದಯ ಭಾಗದಲ್ಲಿರುವ ಬಾವುಟ ಗುಡ್ಡೆಯ ಟಾಗೋರ್ ಪಾರ್ಕ್ನಲ್ಲಿ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ಸ್ವಾತಂತ್ರ್ಯದ 75ನೇ ವರ್ಷಾಚರಣೆ ಹಿನ್ನೆಲೆ ಪ್ರತಿಮೆ ಲೋಕಾರ್ಪಣೆ ಮಾಡಲಾಗುತ್ತಿದೆ. ಕಾರ್ಯಕ್ರಮದಲ್ಲಿ ಆದಿ ಚುಂಚನಗಿರಿಯ ಡಾ.ನಿರ್ಮಲಾನಂದ ಶ್ರೀಗಳು, ರಾಜ್ಯಸಭಾ ಸದಸ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಸೇರಿದಂತೆ ಮತ್ತಿತರರು ಭಾಗಿಯಾಗಲಿದ್ದಾರೆ. ಬಾವುಟ ಗುಡ್ಡೆಯ ಟಾಗೋರ್ ಪಾರ್ಕ್ ನಿರ್ವಹಣೆ ಇಲ್ಲದೆ ಇಷ್ಟು ದಿನ ಪಾಳು ಬಿದ್ದಿತ್ತು. ಇದೀಗ ಪ್ರತಿಮೆ ಅನಾವರಣ ಮಾಡುವ ಹಿನ್ನೆಲೆ ಪಾರ್ಕ್ಗೆ ಕಳೆ ಬಂದಂತಾಗಿದೆ. ಜಿಲ್ಲಾಡಳಿತ ಹಾಗೂ ಪಾಲಿಕೆ ಪ್ರತಿಮೆ, ಪಾರ್ಕ್ನ ನಿರ್ಮಾಣದ ಕೆಲಸ ಮಾಡಿವೆ. ಯಾವುದೇ ತೊಂದರೆ ಆಗದಂತೆ ನಿರ್ವಹಣೆ ಮಾಡಲು ಪಾಲಿಕೆಗೆ ಜವಾಬ್ದಾರಿಯನ್ನು ವಹಿಸಲಾಗಿತ್ತು.
ರೈತ ಹೋರಾಟದ ಸಂಘಟನಾ ಶಕ್ತಿ ಕೆದಂಬಾಡಿ
ದೇಶದ ಮೊದಲ ಸ್ವಾತಂತ್ರ್ಯ ಹೋರಾಟಕ್ಕೆ ಬುನಾದಿ ಎಂಬಂತೆ ಎರಡು ದಶಕದ ಮೊದಲು ರೈತ ಹೋರಾಟ ನಡೆದಿತ್ತು. ರೈತ ಹೋರಾಟದ ಸಂಘಟನಾ ಶಕ್ತಿ ಕೆದಂಬಾಡಿ ರಾಮಯ್ಯ ಗೌಡರು ಆಗಿದ್ದರು. ಸ್ವಾತಂತ್ರ್ಯ ಸಮರವೀರ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ ಮಂಗಳೂರಿನ ಬಾವುಟಗುಡ್ಡೆಯಲ್ಲಿ ಇಂದು ಅನಾವರಣಗೊಳ್ಳಲಿದೆ. ಸ್ವಾತಂತ್ರ್ಯ ಸಮರದ ಇತಿಹಾಸದಲ್ಲಿ ಕೆದಂಬಾಡಿ ರಾಮಯ್ಯ ಗೌಡ ಅವರು ಸಂಘಟನಾ ಚತುರರಾಗಿ ತಮ್ಮದೇ ಛಾಪು ಮೂಡಿಸಿದವರಾಗಿದ್ದರು.