'ಶಬರಿಮಲೆಯಲ್ಲಿ ಅಯ್ಯಪ್ಪ ಭಕ್ತರಿಗಿಂತ ಹೆಚ್ಚು ಪೊಲೀಸರೇ ಕಾಣುತ್ತಾರೆ'
ಮಂಗಳೂರು, ನವೆಂಬರ್. 21: ಶಬರಿಮಲೆಯ ಪ್ರಸ್ತುತ ಸ್ಥಿತಿಗತಿಗಳ ಕುರಿತು ಅಧ್ಯಯನ ವರದಿ ತಯಾರಿಸುವ ಉದ್ದೇಶದಿಂದ ಶಬರಿಮಲೆಗೆ ತೆರಳಿರುವ ದಕ್ಷಿಣ ಕನ್ನಡ ಸಂಸದ ಹಾಗೂ ಕೇರಳ ಸಹ ಪ್ರಭಾರಿ ನಳಿನ್ ಕುಮಾರ್ ಕಟೀಲ್ ಎರಡು ದಿನದಲ್ಲಿ ಸಮಗ್ರ ವರದಿಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಸಲ್ಲಿಸಲಿದ್ದಾರೆ.
ನಳಿನ್ ಕುಮಾರ್ ಕಟೀಲ್ ಹಾಗೂ ರಾಜ್ಯಸಭಾ ಸದಸ್ಯ ಮುರುಳಿಧರನ್ ಸೇರಿದಂತೆ ಇನ್ನಿತರರು ಶಬರಿಮಲೆಗೆ ಬರುವ ಮಾಹಿತಿ ಮೊದಲೇ ಕೇರಳ ಪೊಲೀಸರಿಗೆ ನೀಡಿದ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರನ್ನು ಪೊಲೀಸರು ಬಂಧಿಸಲು ಮುಂದಾಗಿಲ್ಲ.
ಈ ನಡುವೆ ಶಬರಿಮಲೆಯ ಪಂಪೆ, ನೀಲಕ್ಕಲ್ ಹಾಗೂ ಸನ್ನಿಧಾನದಲ್ಲಿನ ಪರಿಸ್ಥಿತಿಯನ್ನು ಬಿಜೆಪಿ ನಾಯಕರ ತಂಡ ಅವಲೋಕಿಸಿದೆ.
ಶಬರಿಮಲೆಯಲ್ಲಿ ಪೊಲೀಸರ ಬಿಗಿ ಭದ್ರತೆಯ ನಡುವೆ ಪ್ರಸ್ತುತ ಸ್ಥಿತಿಗತಿಗಳ ಕುರಿತು ಅವಲೋಕಿಸಿರುವ ಸಂಸದ ನಳಿನ್ ಕುಮಾರ್, ಮುರಳೀಧರನ್ ಹಾಗೂ ಬಿಜೆಪಿ ಕೇರಳ ರಾಜ್ಯ ಕಾರ್ಯದರ್ಶಿ ಪದ್ಮಕುಮಾರ್ ಅಯ್ಯಪ್ಪನ ಸನ್ನಿಧಾನದವರೆಗೂ ತೆರಳಿದ್ದಾರೆ.
'ಸ್ವಾಮಿಯೇ ಶರಣಂ ಅಯ್ಯಪ್ಪ' ಎಂದು ಶರಣು ಕೂಗುವವರನ್ನು ಪೊಲೀಸರು ಬಂಧಿಸುತ್ತಿದ್ದಾರೆ. ಮೇಲ್ನೋಟಕ್ಕೆ ಶಬರಿಮಲೆಯಲ್ಲಿ ಕಾಶ್ಮೀರದ ಸ್ಥಿತಿ ಕಾಣಿಸುತ್ತಿದೆ ಎಂದು ನಳಿನ್ ಕುಮಾರ್ ಕಟೀಲ್ ಕಿಡಿಕಾರಿದ್ದಾರೆ.

ಪೊಲೀಸರೇ ತುಂಬಿದ್ದಾರೆ
ಎಲ್ಲಿ ನೋಡಿದರೂ ಪೊಲೀಸರೇ ತುಂಬಿದ್ದಾರೆ. ಅಯ್ಯಪ್ಪ ಭಕ್ತರಿಗಿಂತ ಹೆಚ್ಚು ಪೊಲೀಸರೇ ಕಾಣುತ್ತಾರೆ. ಅಯ್ಯಪ್ಪ ಭಕ್ತರು ನಾಲ್ಕು ಮಂದಿ ಒಟ್ಟಿಗೆ ತೆರಳಿದರೂ ವಶಕ್ಕೆ ಪಡೆಯುತ್ತಾರೆ ಎಂದು ನಳಿನ್ ಕುಮಾರ್ ಕಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಯ್ಯಪ್ಪ ದರ್ಶನ ಆರಂಭ
ಶಬರಿಮಲೆಯಲ್ಲಿ ವಾರ್ಷಿಕ ಮಕರವಿಳಕ್ಕು ಹಾಗೂ ಮಂಡಲ ಪೂಜೆ ನಿಮಿತ್ತ ಎರಡು ತಿಂಗಳ ದರ್ಶನಕ್ಕಾಗಿ ನ.16 ಸಾಯಂಕಾಲ ದೇವಸ್ಥಾನದ ಬಾಗಿಲು ತೆರೆದಿದ್ದು, 17ರಿಂದ ಅಯ್ಯಪ್ಪನ ದರ್ಶನ ಆರಂಭವಾಗಿದೆ.

ನಳಿನ್ ಕುಮಾರ್ ಗೆ ಸೂಚನೆ
ಕೆಲದಿನಗಳ ಹಿಂದೆ ಮಂಗಳೂರಿನಲ್ಲಿ ನಡೆದ ಆರ್ಎಸ್ಎಸ್ ಬೈಠಕ್ ಬಳಿಕ ಸಂಸದ ನಳಿನ್ ಕುಮಾರ ಕಟೀಲ್ ಅವರೊಂದಿಗೆ ಸಭೆ ನಡೆಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಶಬರಿಮಲೆ ಹೋರಾಟವನ್ನು ಪರಿಣಾಮಕಾರಿಯಾಗಿ ಮುಂದುವರಿಸುವ ಬಗ್ಗೆ ನಳಿನ್ ಕುಮಾರ್ ಗೆ ಸೂಚನೆ ನೀಡಿದ್ದರು ಎಂದು ಹೇಳಲಾಗಿದೆ.

ಶಬರಿಮಲೆಗೆ ತೆರಳಿದ ನಳಿನ್ ಕುಮಾರ್ ಕಟೀಲ್
ಈ ಕಾರ್ಯ ತಂತ್ರದಂತೆ ನಳಿನ್ ಕುಮಾರ್ ಕಟೀಲ್ ಶಬರಿಮಲೆಗೆ ತೆರಳಿದ್ದಾರೆ. ಮಂಗಳವಾರ (ನ.20) ಮುಂಜಾನೆ ಕೇರಳದ ಚೆಂಗನ್ನೂರು ತಲುಪಿದ ನಳಿನ್ ಕುಮಾರ್ ಕಟೀಲ್ ಅವರೊಂದಿಗೆ ಸಂಸದ ವಿ.ಮುರಳೀಧರನ್, ರಾಜ್ಯ ಕಾರ್ಯದರ್ಶಿ ಜೆ.ಆರ್.ಪದ್ಮಕುಮಾರ್ ಮತ್ತು ಪಥನಂತಿಟ್ಟ ಜಿಲ್ಲೆಯ ಅಧ್ಯಕ್ಷ ಅಶೋಕನ್, ಮಂಗಳೂರು ವಿಧಾನಸಭಾ ಕ್ಷೇತ್ರ ಬಿಜೆಪಿ ಮಂಡಲ ಅಧ್ಯಕ್ಷ ಸಂತೋಷ್ ಕುಮಾರ್ ಬೋಳ್ಯಾರು, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಜಗದೀಶ್ ಜೊತೆಗಿದ್ದಾರೆ.












Click it and Unblock the Notifications