ಸುಬ್ರಮಣ್ಯ ರೋಡ್, ಮಂಗಳೂರು ಪ್ರತಿ ದಿನದ ರೈಲಿಗೆ ಬೇಡಿಕೆ
ಮಂಗಳೂರು, ಆಗಸ್ಟ್ 04; ಸುಬ್ರಮಣ್ಯ ರೋಡ್-ಮಂಗಳೂರು ಪ್ರತಿದಿನದ ರೈಲು ಆರಂಭ ಸೇರಿದಂತೆ ವಿವಿಧ ಬೇಡಿಕೆಗಳನ್ನು ಕೇಂದ್ರ ರೈಲ್ವೆ ಸಚಿವರಿಗೆ ಸಲ್ಲಿಸಲಾಗಿದೆ. ಈ ಬೇಡಿಕೆಗಳಿಗೆ ಸಚಿವರು ಸಹ ಉತ್ತಮವಾಗಿ ಸ್ಪಂದಿಸಿದ್ದಾರೆ.
ದಕ್ಷಿಣ ಕನ್ನಡದ ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಕೆ ಮಾಡಿದ್ದಾರೆ.

ಸಚಿವರ ಭೇಟಿ ಸಂದರ್ಭದಲ್ಲಿ ಹೊಸ ರೈಲುಗಳಿಗೆ ಬೇಡಿಕೆ ಇಟ್ಟಿರುವ ಸಂಸದರು, ಸುಬ್ರಹ್ಮಣ್ಯ ರೋಡ್-ಮಂಗಳೂರಿಗೆ ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಹೊಸ ರೈಲು ಪ್ರಾರಂಭಿಸಬೇಕು ಎಂದುದ ಬೇಡಿಕೆ ಇಟ್ಟಿದ್ದಾರೆ.
ರೈಲು ಸಂಚಾರ ಆರಂಭಿಸಿ; ಸುಬ್ರಹ್ಮಣ್ಯ ರೋಡ್-ಮಂಗಳೂರು ನಡುವೆ ಪ್ರತಿದಿನ ಸಂಚಾರ ನಡೆಸುವ ಜನರಿಗಾಗಿ ಮೀಟರ್ ಗೇಜ್ ಕಾಲದಲ್ಲಿಯೇ ರೈಲು ಇತ್ತು. ಸುಬ್ರಮಣ್ಯ ರೋಡ್ನಿಂದ ಹೊರಟು ಮಂಗಳೂರಿಗೆ ಹೋಗಿ, ಮಂಗಳೂರಿನಿಂದ ಹೊರಟು ರೈಲು ಸಂಜೆ ಸುಬ್ರಣ್ಯ ರೋಡ್ಗೆ ವಾಪಸ್ ಆಗುತ್ತಿತ್ತು.
ಈ ರೈಲನ್ನು ಮತ್ತೆ ಆರಂಭಿಸಬೇಕು ಎಂದು ಹಲವು ವರ್ಷಗಳಿಂದ ಬೇಡಿಕೆ ಇಡಲಾಗಿದೆ. ಈ ಕುರಿತು ಟ್ವೀಟ್ ಅಭಿಯಾನವನ್ನು ಸಹ ಜನರು ನಡೆಸಿ ರೈಲ್ವೆ ಇಲಾಖೆ, ಸಚಿವರ ಗಮನ ಸೆಳೆದಿದ್ದರು. ಈಗ ಸಂಸದರು ಸಹ ಇದೇ ರೈಲು ಪ್ರಾರಂಭಕ್ಕೆ ಬೇಡಿಕೆ ಸಲ್ಲಿಕೆ ಮಾಡಿದ್ದಾರೆ.
ಈ ವರ್ಷದ ಫೆಬ್ರವರಿಯಲ್ಲಿ ನಡೆದ ಟ್ವಿಟರ್ ಅಭಿಯಾನದ ಸಂದರ್ಭದಲ್ಲಿ ಜನರು ಸುಬ್ರಹ್ಮಣ್ಯ ರೋಡ್-ಮಂಗಳೂರು ನಡುವೆ ಹೇಗೆ ರೈಲು ಸೇವೆ ಇರಬೇಕು? ಎಂದು ವೇಳಾಪಟ್ಟಿಯನ್ನು ನೀಡಿದ್ದರು.
ಬೆಳಗ್ಗೆ 3.30ರ ಸುಮಾರಿಗೆ ಮಂಗಳೂರಿನಿಂದ ರೈಲು ಹೊರಟು, ಸುಬ್ರಮಣ್ಯ ರೋಡ್ಗೆ 6.10ಕ್ಕೆ ತಲುಪಬೇಕು. 6.40ಕ್ಕೆ ಸುಬ್ರಮಣ್ಯ ರೋಡ್ನಿಂದ ಹೊರಟು 9.20ಕ್ಕೆ ಮಂಗಳೂರು ತಲುಪಬೇಕು ಎಂದು ವೇಳಾಪಟ್ಟಿಯನ್ನು ನೀಡಿದ್ದರು.
ಈ ರೈಲಿನ ಜೊತೆಗೆ ಮಂಗಳೂರು ಸೆಂಟ್ರಲ್ನಿಂದ ಕಬಕ ಪುತ್ತೂರು ತನಕ ಸಂಚಾರ ನಡೆಸುವ ರೈಲನ್ನು ಸಹ ಸುಬ್ರಮಣ್ಯ ರೋಡ್ ತನಕ ವಿಸ್ತರಣೆ ಮಾಡಿದರೆ ಜನರಿಗೆ, ಭಕ್ತಾದಿಗಳಿಗೆ ಅನುಕೂಲವಾಗಲಿದೆ ಎಂದು ಬೇಡಿಕೆ ಇಟ್ಟಿದ್ದರು. ಆದರೆ ರೈಲು ಸೇವೆ ಇನ್ನೂ ಆರಂಭವಾಗಿಲ್ಲ.
ಮಂಗಳೂರು ಸೆಂಟ್ರಲ್-ಸುಬ್ರಮಣ್ಯ ರೋಡ್ ನಡುವೆ ಪ್ಯಾಸೆಂಜರ್ ರೈಲು ಸೇವೆ ಆರಂಭಿಸಬೇಕು ಎಂಬ ಮನವಿಯನ್ನು ರೈಲ್ವೆ ಇಲಾಖೆ ಅಧಿಕಾರಿಗಳು ತಳ್ಳಿ ಹಾಕಿದ್ದರು. ನೈಋತ್ಯ ರೈಲ್ವೆ ಮತ್ತು ಚೆನ್ನೈನಲ್ಲಿರುವ ದಕ್ಷಿಣ ರೈಲ್ವೆ ಅಧಿಕಾರಿಗಳ ನಡುವೆ ಸಮನ್ವಯ ಇಲ್ಲದಿರುವುದೇ ಇದಕ್ಕೆ ಕಾರಣ ಎಂದು ಆರೋಪ ಮಾಡಿದ್ದರು.
ಸಂಸದರ ಇತರ ಬೇಡಿಕೆಗಳು; ಕೇಂದ್ರ ಸಚಿವರ ಭೇಟಿಯ ವೇಳೆ ಸಂಸದರು ಇನ್ನೂ ಹಲವು ಬೇಡಿಕೆ ಇಟ್ಟಿದ್ದಾರೆ. ಮಂಗಳೂರು ಕೇಂದ್ರ ರೈಲು ನಿಲ್ದಾಣಕ್ಕೆ ಹೊಸ ಕಟ್ಟಡ, ಕೇಂದ್ರ ರೈಲು ನಿಲ್ದಾಣದ ಎಲ್ಲ ಪ್ಲಾಟ್ ಫಾರ್ಮ್ಗಳಿಗೂ ರೂಫಿಂಗ್ ಅಳವಡಿಕೆ, ಮಂಗಳೂರು-ಬೆಂಗಳೂರು ನಡುವೆ ಹಳಿ ದ್ವಿಪಥ, ರೈಲ್ವೆ ಮಾರ್ಗದ ಸಂಪೂರ್ಣ ವಿದ್ಯುದೀಕರಣ, ಮಂಗಳೂರಿನ ಪಾಂಡೇಶ್ವರದಲ್ಲಿ ನಾಲ್ಕು ಲೈನ್ ಆರ್ಒಬಿ ನಿರ್ಮಾಣ, ಸುಬ್ರಹ್ಮಣ್ಯದಲ್ಲಿ ಹೆಚ್ಚುವರಿ ಟರ್ಮಿನಲ್ ನಿರ್ಮಾಣ ಮುಂತಾದ ಬೇಡಿಕೆ ಇಟ್ಟಿದ್ದಾರೆ.
ಸಂಸದರು ಮಂಗಳೂರು-ಬೆಂಗಳೂರು ನಡುವೆ ಸಂಪರ್ಕ ಕಲ್ಪಿಸಲು ವಂದೇ ಭಾರತ್ ರೈಲು ಓಡಿಸುವುದು.
ಮಂಗಳೂರು-ಮುಂಬೈ ನಡುವೆ ವಂದೇ ಭಾರತ್ ರೈಲು ಆರಂಭ. ತಿರುವನಂತಪುರ-ಕಾಸರಗೋಡು ನಡುವಿನ ವಂದೇ ಭಾರತ್ ರೈಲನ್ನು ಮಂಗಳೂರು ತನಕ ವಿಸ್ತರಣೆ ಮಾಡಬೇಕು ಎಂದು ಸಹ ಮನವಿ ಸಲ್ಲಿಕೆ ಮಾಡಿದ್ದಾರೆ.
ಸಂಸದರು ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಕಲಬುರಗಿ, ಬೀದರ್ಗೆ ಹಾಸನ, ಬೀರೂರು, ಚಿಕ್ಕಜಾಜೂರು, ಚಿತ್ರದುರ್ಗ, ರಾಯದುರ್ಗ, ಬಳ್ಳಾರಿ, ಗುಂತಕಲ್, ಮಂತ್ರಾಲಯ ರಸ್ತೆ, ರಾಯಚೂರು, ಯಾದಗಿರಿ, ವಾಡಿ ಮೂಲಕ ಹೊಸ ರೈಲು ಆರಂಭಿಸಬೇಕು.
ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ರಾಮೇಶ್ವರಕ್ಕೆ ಹೊಸ ರೈಲು ಆರಂಭಿಸಬೇಕು. ಮಂಗಳೂರು ಕೇಂದ್ರ ನಿಲ್ದಾಣದಿಂದ ವರಣಾಸಿಗೆ ಹೊಸ ರೈಲು ಬೇಕು ಎಂದು ಸಹ ಬೇಡಿಕೆ ಇಟ್ಟಿದ್ದಾರೆ.












Click it and Unblock the Notifications