ನಳಿನ್ ಮಾಹಿತಿ ಸೋರಿಕೆ, ಪಿಪಿ ಹೆಗ್ಡೆ ಮೇಲೆ ಕೇಸ್
ಮಂಗಳೂರು, ಮೇ.8: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳೀನ್ ಕುಮಾರ್ ಅವರ ಖಾಸಗಿ ಮಾಹಿತಿ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ನ್ಯಾಯವಾದಿ ಮತ್ತು ಬಿಜೆಪಿ ರಾಷ್ಟೀಯ ಕಾರ್ಯಕಾರಿಣಿ ಸದಸ್ಯ ಪಿ. ಪಿ ಹೆಗ್ಡೆ ಹಾಗೂ ಅಖಿಲ ಭಾರತೀಯ ಕಾರ್ಮಿಕ ಸೇನೆ ಜಿಲ್ಲಾಧ್ಯಕ್ಷ ಸುದತ್ತ ಜೈನ್ ವಿರುದ್ಧ ಬಂದರ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತನ್ನವರೇ ನನಗೆ ಮುಳ್ಳಾಗುತ್ತಿದ್ದಾರೆ. ಯಾರನ್ನು ನಂಬುವುದು ಯಾರನ್ನು ಬಿಡುವುದು ಎನ್ನುತ್ತಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ನಳೀನ್ ಕುಮಾರ್ ಕಟೀಲು ಅವರು ಏ.17 ರಂದು ಪಿ.ಪಿ ಹೆಗ್ಡೆ ಹಾಗೂ ಸುದತ್ತ ಜೈನ್ ವಿರುದ್ಧ ದೂರು ನೀಡಿದ್ದರು. ಬಂದರು ಠಾಣೆ ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.
ಚುನಾವಣೆಯ ಎರಡು ದಿನ ಮೊದಲು ತನ್ನ ಖಾಸಗಿ ಮೊಬೈಲ್ ನಂಬರ್ ನಿಂದ ಮಾಡಿದ ಕರೆಯ ಮಾಹಿತಿ ಸಂಗ್ರಹಿಸಿ ಪಕ್ಷೇತರ ಅಭ್ಯರ್ಥಿ ಸುದತ್ತ ಜೈನ್ ಹಾಗೂ ಕ್ರಿಮಿನಲ್ ವಕೀಲರೊಬ್ಬರು ಚುನಾವಣೆ ಸಮಯದಲ್ಲಿ ಅಪಪ್ರಚಾರಕ್ಕೆ ಬಳಸಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಅವರು ಇವರಿಬ್ಬರ ಮೇಲೆ ಕಳೆದ ವಾರ ದೂರು ದಾಖಲಿಸಿದ್ದರು. ಖಾಸಗಿ ದೂರವಾಣಿ ಕರೆಗಳ ವಿವರಗಳನ್ನು ಸೋರಿಕೆ ಮಾಡಿರುವ ಭಾರ್ತಿ ಏರ್ ಟೆಲ್ ಸಂಸ್ಥೆಗೆ ಬಂದರು ಠಾಣೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು.

ಜೈನ್ ಏನು ಹೇಳುತ್ತಾರೆ?: ಭಾರ್ತಿ ಏರ್ ಟೆಲ್ ಸಂಸ್ಥೆಯ ಹುಡುಗರಿಂದ ನಳಿನ್ ಕುಮಾರ್ ಕಟೀಲು ಅವರ ಕಾಲ್ ಡೀಟೈಲ್ಸ್ ಸಿಕ್ಕಿದ್ದು ನಿಜ. ಆದರೆ, ಇದು ಬಿಜೆಪಿ, ಸಂಘಪರಿವಾರದಲ್ಲಿರುವ ನಳಿನ್ ವಿರೋಧಿ ಬಣದವರ ಕೃತ್ಯ ಎಂದು ಸುದತ್ತ ಜೈನ್ ಹೇಳಿದ್ದಾರೆ. ನಳಿನ್ ಕುಮಾರ್ ಅವರು ಅದ್ಯಾರ್ ಮೂಲದ ಬಿಲ್ಲವ ಹುಡುಗಿಯೊಬ್ಬಳಿಗೆ ಕಳೆದ ಮೂರು ವರ್ಷಗಳಲ್ಲಿ ಸುಮಾರು 3,642 ಕರೆಗಳನ್ನು ಮಾಡಿದ್ದಾರೆ ಎಂದು ತಿಳಿದು ಬಂದಿತ್ತು.ಈ ಬಗ್ಗೆ ಖಾಸಗಿ ವಾಹಿನಿಯೊಂದು ಸುದ್ದಿಯನ್ನೂ ಒಂದು ಬಾರಿ ಪ್ರಸಾರ ಮಾಡಿತ್ತು.
ನಳಿನ್ ಬದಲು ಬಂಟ್ವಾಳದ ಬಿಜೆಪಿ ನಾಯಕರೊಬ್ಬರನ್ನು ಲೋಕಸಭಾ ಅಭ್ಯರ್ಥಿಯನ್ನಾಗಿ ಮಾಡಬೇಕೆಂದು ಜಿಲ್ಲೆಯ ಸಂಘ ಪರಿವಾರದ ಪ್ರಭಾವಿ ಮುಖಂಡರೊಬ್ಬರು ಬಯಸಿದ್ದರು. ಆದರೆ, ಇದು ಸಾಧ್ಯವಾಗದ ಕಾರಣ, ನಳೀನ್ ಕುಮಾರ್ ಕಟೀಲ್ ವಿರುದ್ಧ ಈ ರೀತಿ ಸಂಚು ರೂಪಿಸಲಾಗಿದೆ ಎಂಬ ಸುದ್ದಿ ಇದೆ.[ನಳಿನ್ ವಿರುದ್ದ ಕುಡ್ಲದಲ್ಲಿ ನಡೆದ ಸಂಚು!]












Click it and Unblock the Notifications