MRPL ಉದ್ಯೋಗ ನೇಮಕಾತಿಯಲ್ಲಿ ಮತ್ತೆ ವಂಚನೆ-ಮುನೀರ್ ಕಾಟಿಪಳ್ಳ ಆರೋಪ
ಮಂಗಳೂರು, ಡಿಸೆಂಬರ್ 23: ಸ್ಥಳೀಯರನ್ನು ಸಂಪೂರ್ಣ ಕಡೆಗಣಿಸಿ ಎಂಆರ್ಪಿಎಲ್ ಸಂಸ್ಥೆಯಲ್ಲಿ 96 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಈ ಮೂಲಕ ರಾಜ್ಯ ಸರಕಾರ ಅಂಗೀಕಾರದ ಸರೋಜಿನಿ ಮಹಿಷಿ ವರದಿಯ ಆಶಯಗಳನ್ನು ಕಂಪನಿ ಮತ್ತೊಮ್ಮೆ ಸಂಪೂರ್ಣ ಕಡೆಗಣಿಸಿ ಕನ್ನಡಿಗರನ್ನು ದೂರವಿಟ್ಟಿದೆ ಎಂದು ಜೋಕಟ್ಟೆ ನಾಗರಿಕ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.
ನಗರದ ಡಿವೈಎಫ್ಐ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2019-20 ರಲ್ಲಿ ನಡೆದ 234 ಹುದ್ದೆಗಳ ನೇಮಕಾತಿಯಲ್ಲಿ ಸ್ಥಳೀಯರಿಗೆ ಆದ್ಯತೆ ಒದಗಿಸದೆ ಪೂರ್ಣವಾಗಿ ಹೊರಗಿಟ್ಟ ವೇಳೆ ದೊಡ್ಡ ಹೋರಾಟ ನಡೆದಿತ್ತು. ಆ ಸಂದರ್ಭ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ವೇದವ್ಯಾಸ ಕಾಮತ್ ಎಂಆರ್ ಪಿಎಲ್ ನ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು ಎಂದರು.
ಈ ವೇಳೆ ನಡೆದಿದ್ದ ನೇಮಕಾತಿ ಪ್ರಕ್ರಿಯೆಯನ್ನು ರದ್ದುಗೊಳಿಸಿ ಸ್ಥಳೀಯರಿಗೆ ಆದ್ಯತೆ ಒದಗಿಸಿ ಹೊಸದಾಗಿ ನೇಮಕಾತಿ ಪ್ರಕ್ರಿಯೆ ನಡೆಸುವುದಾಗಿ ಪ್ರಕಟಿಸಿದ್ದರು. ಮುಂದಿನ ಎಲ್ಲಾ ನೇಮಕಾತಿ ಪ್ರಕ್ರಿಯೆಯಲ್ಲಿ ಸರೋಜಿನಿ ಮಹಿಷಿ ಶಿಫಾರಸುಗಳನ್ನು ಅಳವಡಿಸಲಾಗುತ್ತದೆ ಎಂದು ಅಧಿಕಾರಿಗಳು ಘೋಷಿಸಿದ್ದರು ಎಂದು ಹೇಳಿದರು.

ಸ್ಥಳೀಯರನ್ನು ಸಂಸ್ಥೆಗೆ ನೇಮಕ ಮಾಡಿಕೊಳ್ಳುವಂತೆ ಪಟ್ಟು
ಇನ್ನು ರಾಜ್ಯ ಸರಕಾರವೂ ಅದೇ ಭರವಸೆ ನೀಡಿತ್ತು. ಆದರೆ ಇದೀಗ ಮತ್ತೆ ಮಂಗಳೂರು ಮಾತ್ರವಲ್ಲದೆ ಕನ್ನಡಿಗರಿಗೂ ಅವಕಾಶ ನಿರಾಕರಣೆಯ ಸೂತ್ರ ಅಳವಡಿಸಿ ನೇಮಕಾತಿ ಪ್ರಕ್ರಿಯೆ ನಡೆಸಲಾಗುತ್ತಿದೆ. ಈ ಪ್ರಕ್ರಿಯೆ ತಕ್ಷಣ ರದ್ದುಗೊಳಿಸಿ ಸರೋಜಿನಿ ಮಹಿಷಿ ಶಿಫಾರಸುಗಳ ಆಧಾರದಲ್ಲಿ ಹೊಸದಾಗಿ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು. ಕಂಪನಿಯ ಮಾಲಿನ್ಯದ ನೇರ ಸಂತ್ರಸ್ತರಾದ ಸುತ್ತಮುತ್ತಲಿನ ಗ್ರಾಮದಲ್ಲಿ ಅರ್ಹತೆ ವಿದ್ಯಾಭ್ಯಾಸ ಹೊಂದಿರುವ ದೊಡ್ಡ ಸಂಖ್ಯೆಯ ಯುವಜನತೆಯಿದ್ದು, ಅಂಥವರಿಗೆ ಸೂಕ್ತ ತರಬೇತಿ ನೀಡಿ ಕಂಪನಿಯ ಉದ್ಯೋಗಗಳಿಗೆ ನೇಮಕಗೊಳ್ಳುವಂತೆ ವ್ಯವಸ್ಥೆ ಮಾಡಬೇಕು ಎಂದು ಬಲವಾಗಿ ಆಗ್ರಹಿಸುತ್ತಿದ್ದೇವೆ ಎಂದು ಮುನೀರ್ ಕಾಟಿಪಳ್ಳ ಹೇಳಿದ್ದಾರೆ.

ಎಂಆರ್ಪಿಎಲ್ 5 ಪರಿಹಾರ ಕ್ರಮಗಳನ್ನು ಅರೆಬರೆ ಪಾಲಿಸಿದೆ
ಮತ್ತೊಂದೆಡೆ ರಾಜ್ಯ ಸರಕಾರ 2016ರಲ್ಲಿ ಹೊರಡಿಸಿರುವ ಆರು ಅಂಶಗಳ ಪರಿಹಾರ ಕ್ರಮಗಳಲ್ಲಿ 27 ಎಕರೆ ಪ್ರದೇಶದಲ್ಲಿ ಹಸಿರು ವಲಯ ನಿರ್ಮಿಸಬೇಕೆಂಬ ಆದೇಶವನ್ನು ಪಾಲಿಸದ ಎಂಆರ್ಪಿಎಲ್ ಸಂಸ್ಥೆಯ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.
ಮಾತು ಮುಂದುವರಿಸಿದ ಅವರು, ಎಂಆರ್ ಪಿಎಲ್ ಮೂರನೇ ಹಂತದ ಕೋಕ್ ಸಲ್ಫರ್ ಘಟಕದ ಮಾಲಿನ್ಯದಿಂದ ಜೋಕಟ್ಟೆ, ಕಳವಾರು, ಕೆಂಜಾರು ಪ್ರದೇಶದ ನಾಗರಿಕರುಶಬ್ದಮಾಲಿನ್ಯ,ಅಂತರ್ಜಲ ಕಲುಷಿತ, ವಾಯುಮಾಲಿನ್ಯದಿಂದ ತತ್ತರಿಸುತ್ತಿದ್ದಾರೆ. ಇದನ್ನು ವಿರೋಧಿಸಿ ಜೋಕಟ್ಟೆ ನಾಗರಿಕ ಹೋರಾಟ ಸಮಿತಿ ಎರಡು ವರ್ಷಗಳ ಕಾಲ ತೀವ್ರ ಹೋರಾಟ ನಡೆಸಿತ್ತು. ಅದರ ಫಲವಾಗಿ ರಾಜ್ಯ ಸರಕಾರ 2016ರಲ್ಲಿ ಆರು ಅಂಶಗಳ ಪರಿಹಾರ ಕ್ರಮ ಕೈಗೊಳ್ಳುವಂತೆ ಅದ್ಯಾದೇಶ ಹೊರಡಿಸಿತ್ತು. ಆದರೆ ಎಂಆರ್ಪಿಎಲ್ 5 ಪರಿಹಾರ ಕ್ರಮಗಳನ್ನು ಅರೆಬರೆ ಪಾಲಿಸಿತ್ತು ಎಂದು ಆರೋಪಿಸಿದರು.

ಎಂಆರ್ಪಿಎಲ್ ಯಾವುದೇ ಕ್ರಮ ಕೈಗೊಂಡಿಲ್ಲ
ಇನ್ನು ಪ್ರಮುಖ ಪರಿಹಾರ ಕ್ರಮವಾದ ಅತೀ ಹೆಚ್ಚು ಹಾನಿಗೊಳಗಾದ ಪ್ರದೇಶದಲ್ಲಿ 27 ಎಕರೆ ಜಮೀನನ್ನು ವಶಪಡಿಸಿಕೊಂಡು ಅಲ್ಲಿ ಹಸಿರು ವಲಯ ನಿರ್ಮಾಣ ಮಾಡಲು ಸರಕಾರ ಸೂಚಿಸಿತ್ತು. ಅದಕ್ಕಾಗಿ ಜಮೀನು ಗುರುತಿಸಿ ಅಲ್ಲಿಂದ ಹಲವಾರು ಕುಟುಂಬವನ್ನು ಒಕ್ಕಲೆಬ್ಬಿಸಲಾಗಿತ್ತು. ಭೂಸ್ವಾಧೀನಕ್ಕಾಗಿ ಮೊದಲ ಕಂತಿನಲ್ಲಿ 180 ಕೋಟಿ ರೂ. ಹಣವನ್ನು ಡೆಪಾಸಿಟ್ ಇಡಬೇಕೆಂದು ಕೆಐಎಡಿಬಿ ನೋಟಿಸ್ ಜಾರಿ ಮಾಡಿ ವರ್ಷಗಳು ದಾಟಿದರೂ ಎಂಆರ್ಪಿಎಲ್ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಂಆರ್ಪಿಎಲ್ನಿಂಧ ಫಲ್ಗುಣಿ ನದಿಯೂ ಕಲುಷಿತಗೊಳ್ಳುತ್ತಿದೆ
ಇಲ್ಲಿ ಅನಾರೋಗ್ಯದ ಭೀತಿ ಬೇರೆ ಕಡೆಗಳಿಗಿಂತ ಅಧಿಕವಾಗಿದೆ. ಎಂಆರ್ ಪಿಎಲ್ ತ್ಯಾಜ್ಯದಿಂದ ತೋಕೂರು ಹಳ್ಳದಲ್ಲಿ ಸಾವಿರಾರು ಟನ್ ಮೀನುಗಳ ಮಾರಣ ಹೋಮ ನಡೆದಿತ್ತು. ಫಲ್ಗುಣಿ ನದಿಯೂ ಕಲುಷಿತಗೊಳ್ಳುತ್ತಿದೆ. ಇಷ್ಟೆಲ್ಲಾ ಇದ್ದರೂ, ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾಡಳಿತ ಕಣ್ಣು ಮುಚ್ಚಿ ಕುಳಿತಿದೆ. ಇದೀಗ ಮತ್ತೆ ಸರಕಾರ ಕಂಪನಿಯ ವಿಸ್ತಾರಕ್ಕೆ ಸಾವಿರಾರು ಎಕರೆ ಭೂಮಿಯನ್ನು ಪೆರ್ಮುದೆ, ಎಕ್ಕಾರು ಭಾಗದಲ್ಲಿ ಕೊಟ್ಟಿದೆ ಇದು ಎಷ್ಟು ಸರಿ. ಆದ್ದರಿಂದ ಎಂಆರ್ ಪಿಎಲ್ ಸಂಸ್ಥೆ ಆದೇಶವನ್ನು ಪಾಲಿಸಲು ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಮುನೀರ್ ಕಾಟಿಪಳ್ಳ ಒತ್ತಾಯಿಸಿದ್ದಾರೆ.












Click it and Unblock the Notifications