ನನ್ನ ಮಗ ಉಗ್ರನಲ್ಲ, ಅಮಾಯಕ : ತಾಯಿಯ ಕರುಳು
ಮಂಗಳೂರು, ಜನವರಿ 22 : 'ನನ್ನ ಮಗ ಅಮಾಯಕ, ಪೊಲೀಸರು ಆತನನ್ನು ವಿನಾಕಾರಣ ಬಂಧಿಸಿ ಮುಂಬೈ ಕರೆದುಕೊಂಡು ಹೋಗಿದ್ದಾರೆ' ಎಂದು ಶಂಕಿತ ಉಗ್ರ ನಜಮುಲ್ ಹೂಡಾ ತಾಯಿ ಮಹಿರಾ ಖಾತೂನ್ ಹೇಳಿದರು.
ಪುತ್ರನ ಬಂಧನವಾದ ಬಳಿಕ ಮಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಮಹಿರಾ ಅವರು, 'ನನ್ನ ಮಗ ಐಎಸ್ಐಎಸ್ ಸಂಬಂಧಿತ ಯಾವುದೇ ಚಟುವಟಿಕೆಗಳಲ್ಲಿ ಪಾಲ್ಗೊಂಡಿಲ್ಲ. ಅವನು ಅಮಾಯಕ, ಪೊಲೀಸರು ನನ್ನ ಮಗನನ್ನು ಕಾರಣವಿಲ್ಲದೇ ಬಂಧಿಸಿದ್ದಾರೆ' ಎಂದು ಕಣ್ಣೀರಿಟ್ಟರು. [ಮಂಗಳೂರು : ಶಂಕಿತ ISIS ಉಗ್ರ ಸೆರೆ]

'ನನ್ನ ಮಗ ವ್ಯಾಸಂಗಕ್ಕೆಂದು ಬೆಂಗಳೂರಿಗೆ ಹೋಗಿದ್ದ, ಬೇರೆ ಯಾವುದೇ ಕೃತ್ಯಗಳಲ್ಲಿ ತೊಡಗಿಸಿಕೊಂಡಿಲ್ಲ. ಮಗನ ಮೇಲೆ ಬಂದಿರುವ ಆರೋಪಗಳು ಸುಳ್ಳು' ಎಂದು ಮಹಿರಾ ಹೇಳಿದರು. [ದೇಶಾದ್ಯಂತ 25 ಉಗ್ರರು ವಶಕ್ಕೆ]
ಇಂದು ಮುಂಜಾನೆ ಬಂಧಿಸಲಾಗಿದೆ : ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಸಿರಿಯ (ಐಎಸ್ಐಎಸ್) ಉಗ್ರರ ಪರವಾಗಿ ಪ್ರಚಾರ ಮಾಡುತ್ತಿದ್ದ ಮತ್ತು ಯುವಕರನ್ನು ಉಗ್ರ ಸಂಘಟನೆ ಸೇರುವಂತೆ ಪ್ರೇರೆಪಿಸುತ್ತಿದ್ದ ಎಂಬ ಆರೋಪದ ಮೇಲೆ ಇಂಜಿನಿಯರಿಂಗ್ ವಿದ್ಯಾರ್ಥಿ ನಜಮುಲ್ ಹೂಡಾ (25) ನನ್ನು ಬಂಧಿಸಲಾಗಿದೆ.
ಮಂಗಳೂರಿನ ಬಜ್ಪೆ ಸಮೀಪದ ಪೆರ್ಮದೆಯಲ್ಲಿರುವ ನಜಮುಲ್ ನಿವಾಸದ ಮೇಲೆ ತಡರಾತ್ರಿ 2 ಗಂಟೆ ಸುಮಾರಿಗೆ ದಾಳಿ ನಡೆಸಿದ ಎನ್ಐಎ ಅಧಿಕಾರಿಗಳು ಹೂಡಾನನ್ನು ಬಂಧಿಸಿ, ವಿಚಾರಣೆಗಾಗಿ ಮುಂಬೈಗೆ ಕರೆದುಕೊಂಡು ಹೋಗಿದ್ದಾರೆ.












Click it and Unblock the Notifications