ಮೂಡಬಿದಿರೆ : ಪ್ರಶಾಂತ್ ಹತ್ಯೆ ಮತ್ತೆ ನಾಲ್ವರ ಬಂಧನ
ಮೂಡಬಿದಿರೆ, ಅಕ್ಟೋಬರ್ 20 : ಭಜರಂಗದಳ ಕಾರ್ಯಕರ್ತ ಪ್ರಶಾಂತ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇದುವರೆಗೂ 8 ಆರೋಪಿಗಳನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ.
ಮೊಹಮ್ಮದ್ ಶರೀಫ್ (42), ಮುಸ್ತಾಫ ಕಾವೂರು (28), ಮೊಹಮ್ಮದ್ ಮುಸ್ತಾಫ (25) ಹಾಗೂ ಕಬೀರ್ (28) ಅವರನ್ನು ಬಂಧಿಸಲಾಗಿದ್ದು, ಮಂಗಳವಾರ ಮೂಡಬಿದರೆ ನ್ಯಾಯಾಲಯಕ್ಕೆ ಪೊಲೀಸರು ಆರೋಪಿಗಳನ್ನು ಹಾಜರುಪಡಿದ್ದಾರೆ. ಪ್ರಶಾಂತ್ ಹತ್ಯೆಗೆ ಬಳಸಿದ್ದ ಕತ್ತಿಯನ್ನು ಹಂಡೇಲು ಬಳಿ ಪೊದೆಗೆ ಎಸೆದು ಹೋಗಿದ್ದೆವು ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ. [ಪ್ರಶಾಂತ್ ಕೊಲೆ 4 ಆರೋಪಿಗಳ ಬಂಧನ]

ಆರೋಪಿಗಳನ್ನು ಪೊಲೀಸರು ಸ್ಥಳಕ್ಕೆ ಕರೆದುಕೊಂಡು ಹೋಗಿ ಪರಿಶೀಲನೆ ನಡೆಸಿದ್ದು, ಕತ್ತಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳು ಪೊಲೀಸರಿಗೆ ನೀಡಿದ ಮಾಹಿತಿ ಅನ್ವಯ ಇನ್ನೂ 6 ಆರೋಪಿಗಳು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಅವರಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. [ಮೂಡಬಿದಿರೆ : ಪ್ರಶಾಂತ್ ಪೂಜಾರಿ ಹತ್ಯೆ]
ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ ಎಲ್ಲಾ ಆರೋಪಿಗಳನ್ನು ಅಕ್ಟೋಬರ್ 26ರ ತನಕ ನ್ಯಾಯಾಲಯ ಪೊಲೀಸರ ವಶಕ್ಕೆ ನೀಡಿದೆ. ಆರೋಪಿಗಳು ನೀಡಿದ ಮಾಹಿತಿಯಂತೆ ಇನ್ನೂ 6 ಆರೋಪಿಗಳಿಗಾಗಿ ಹುಡುಕಾಟ ಮುಂದುವರೆದಿದೆ.
ಮೂಡಬಿದಿರೆಯಲ್ಲಿ ಹೂವಿನ ವ್ಯಾಪಾರ ಮಾಡಿಕೊಂಡಿದ್ದ ಪ್ರಶಾಂತ್ ಪೂಜಾರಿ ಹಿಂದೂಪರ ಸಂಘಟನೆಯಲ್ಲಿ ಸಕ್ರಿಯನಾಗಿ ಗುರುತಿಸಿಕೊಂಡಿದ್ದ. ಆದ್ದರಿಂದ ಅವರನ್ನು ಆರೋಪಿಗಳು ಅಕ್ಟೋಬರ್ 9ರಂದು ಮೂಡಬಿದಿರೆ ಪೇಟೆಯ ಸಮಾಜಮಂದಿರ ಗೇಟ್ ಬಳಿ ಹತ್ಯೆ ಮಾಡಿ ಪರಾರಿಯಾಗಿದ್ದರು.











Click it and Unblock the Notifications