ನೀರಿನ ಸಮಸ್ಯೆಗೆ ಪರಿಹರಿಸಿದ ಪಣಪಿಲದ ಚಿಣ್ಣರು!
ಮೂಡಬಿದಿರೆ, ನವೆಂಬರ್ 18 : ಈ ಗ್ರಾಮದಲ್ಲಿ ಹಲವು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಇತ್ತು. ಕುಡಿಯಲು ನೀರು ಕೊಡಿ ಎಂಬ ಜನರ ಭಾವನೆಗೆ ಸ್ಥಳೀಯ ಆಡಳಿತ ಸ್ಪಂದಿಸಿರಲಿಲ್ಲ. ಜನಪ್ರತಿನಿಧಿಗಳು, ಸ್ಥಳೀಯ ಆಡಳಿತ ಮಾಡದ ಕೆಲಸವನ್ನು ತಮ್ಮ ಸಾಮರ್ಥ್ಯ ಮೀರಿ ಮಾಡಿ ತೋರಿಸಿದ್ದಾರೆ ಮಕ್ಕಳು.
ದರೆಗುಡ್ಡೆ ಗ್ರಾಮ ಪಂಚಾಯಿತಿ ಪಣಪಿಲ ಗ್ರಾಮದ 9 ಜನ ಮಕ್ಕಳು ಕೇವಲ ಎರಡು ದಿನದಲ್ಲಿ 18 ಅಡಿ ಆಳದ ಬಾವಿ ತೋಡಿ ಗ್ರಾಮದ ನೀರಿನ ಸಮಸ್ಯೆ ಬಗೆಹರಿಸಿದ್ದಾರೆ. ಈ ಪ್ರದೇಶದಲ್ಲಿ 10 ಮನೆಗಳಿದ್ದು, ಕಳೆದ ಹಲವಾರು ವರ್ಷಗಳಿಂದ ಗ್ರಾಮದಲ್ಲಿ ನೀರಿನ ಸಮಸ್ಯೆ ಇತ್ತು. [ಮಕ್ಕಳ ಸಂಸತ್ : ಸಿದ್ದರಾಮಯ್ಯಗೆ ಪ್ರಶ್ನೆಗಳ ಸುರಿಮಳೆ]

ಕಳೆದ ಒಂದು ವರ್ಷದಿಂದ ಸ್ಥಳೀಯರು ಈ ಪ್ರದೇಶದಲ್ಲಿ ಬಾವಿ ತೋಡಬೇಕು ಎಂದು ಮೌಖಿಕವಾಗಿ ಹೇಳುತ್ತಿದ್ದರು. ಆದರೆ, ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ. ಜನರ ಸಂಕಷ್ಟವನ್ನು ಅರಿತ 9 ಮಂದಿ ಮಕ್ಕಳು ಬಾವಿ ತೋಡಲು ಮುಂದಾಗಿದ್ದರು. ಇದನ್ನು ನೋಡಿದ ಸ್ಥಳೀಯರು ಇದು ಮಕ್ಕಳಾಟ ಎಂದು ಲೇವಡಿ ಮಾಡಿದ್ದರು. ಮಕ್ಕಳು ಮಾತ್ರ ತಮ್ಮ ಕೆಲಸವನ್ನು ಮಾಡಿ ಮುಗಿಸಿದ್ದಾರೆ. [ಪಂಚಕ್ಷೇತ್ರದ ಸಾಧಕಿ 'ಪಂಚಮಿ'ಗೆ ಪ್ರಪಂಚವೇ ಬೆರಗು]
ಈ ಯೋಜನೆಯ ರೂವಾರಿಗಳು : 15 ವರ್ಷದ ಪ್ರಸಾದ್, 9ನೇ ತರಗತಿಯಲ್ಲಿ ಓದುತ್ತಿರುವ ದೀಕ್ಷಿತ್ ಈ ಯೋಜನೆಯ ರೂವಾರಿಗಳು. ಇವರ ಜೊತೆ 7ನೇ ತರಗತಿಯ ದೀಕ್ಷಾ, 6 ತರಗತಿಯ ನಾಗೇಶ್, ಭವ್ಯ, 5ನೇ ತರಗತಿಯ ಸುಲೋಚನಾ, 4ನೇ ತರಗತಿಯ ದೀಕ್ಷಿತ್ ಹಾಗೂ 3ನೇ ತರಗತಿಯ ಸುಹಾನ್ ಕೈಜೋಡಿಸಿದ್ದಾರೆ. [ವಿದ್ಯಾರ್ಥಿಗಳ ಪರಿಸರ ಕಾಳಜಿಗೆ ನಮ್ಮದೊಂದು ಸಲಾಂ!]
ಸ್ಥಳೀಯರೊಬ್ಬರು ಈ ಜಾಗದಲ್ಲಿ ನೀರು ಬರುತ್ತದೆ ಎಂದು ಹೇಳಿದ್ದನ್ನು ಗಮನಿಸಿದ್ದ ಮಕ್ಕಳು ಕಳೆದ ಭಾನುವಾರ ಹಾಗೂ ದೀಪಾವಳಿ ರಜಾ ದಿನವಾದ ಮಂಗಳವಾರ ಬಾವಿ ತೋಡಿದ್ದಾರೆ. ಜೇಡಿ ಮಣ್ಣು ಇದ್ದ ಕಾರಣ ಮಕ್ಕಳ ಕೆಲಸಕ್ಕೆ ಅನುಕೂಲವಾಗಿದೆ. ಬಹುತೇಕ ಕೆಲಸ ಮುಗಿದ ನಂತರ ನೀರು ಸಿಕ್ಕಿದ ಮೇಲೆ ಸ್ಥಳೀಯ ಹಿರಿಯರಿಬ್ಬರು ಇವರ ಕಾರ್ಯಕ್ಕೆ ಕೈ ಜೋಡಿಸಿ ಬಾವಿಯನ್ನು ಪೂರ್ಣಗೊಳಿಸಿದ್ದಾರೆ.












Click it and Unblock the Notifications