ಹಿಂದೂಗಳೇ, ಕಾನೂನು ಕೈಗೆತ್ತಿಕೊಳ್ಳಬೇಡಿ: ಉಮಾನಾಥ ಕೋಟ್ಯಾನ್ ಕರೆ
ಮಂಗಳೂರು, ಸೆಪ್ಟೆಂಬರ್. 25: ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾದ ಹಿಂದೂ ಸಂಘಟನೆಯ ಮುಖಂಡ ಹರೀಶ್ ಶೆಟ್ಟಿ ನೋಡಲು ಸೋಮವಾರ ರಾತ್ರಿ (ಸೆ.25) ಬಿಜೆಪಿ ಶಾಸಕರು ತೆರಳಿದರು.
ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ ಭರತ್ ಶೆಟ್ಟಿ , ದಕ್ಷಿಣ ಕ್ಷೇತ್ರದ ಶಾಸಕ ಡಿ ವೇದವ್ಯಾಸ್ ಕಾಮತ್ ಹಾಗೂ ಮುಲ್ಕಿ ಮೂಡಬಿದರೆ ಶಾಸಕ ಉಮಾನಾಥ ಕೋಟ್ಯಾನ್ ಭೇಟಿ ನೀಡಿ ಹರೀಶ್ ಶೆಟ್ಟಿ ಆರೋಗ್ಯ ವಿಚಾರಿಸಿದರು.
ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶಾಸಕ ಡಾ ಭರತ್ ಶೆಟ್ಟಿ , ದುಷ್ಕರ್ಮಿಗಳ ದಾಳಿಗೆ ಒಳಗಾದ ಹರೀಶ್ ಶೆಟ್ಟಿ ಅಪಾಯದಿಂದ ಪಾರಾಗಿದ್ದಾರೆ. ಅವರಿಗೆ ಚಿಕಿತ್ಸೆ ನಡೆಸಲಾಗುತ್ತಿದೆ. ದ್ವಿಚಕ್ರ ವಾಹನದಲ್ಲಿ ಬಂದಿದ್ದ ದುಷ್ಕರ್ಮಿಗಳು ಹರೀಶ್ ಶೆಟ್ಟಿ ಅವರ ಮೇಲೆ ದಾಳಿ ನಡೆಸಿದ್ದಾರೆ.

ಘಟನೆಯಲ್ಲಿ ಕೈ ಎಲುಬು ತುಂಡಾಗಿದ್ದು, ತಲೆಗೆ ಗಾಯವಾಗಿದೆ. ಪ್ಲಾಸ್ಟಿಕ್ ಸರ್ಜರಿ ಮೂಲಕ ಶಸ್ತ್ರಚಿಕಿತ್ಸೆ ನಡೆಯಲಿದೆ. ಆರೋಪಿಗಳನ್ನು ತಕ್ಷಣ ಬಂಧಿಸುವ ಭರವಸೆಯನ್ನು ಪೊಲೀಸರು ನೀಡಿದ್ದಾರೆ ಎಂದು ಅವರು ತಿಳಿಸಿದರು.
ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಅಮಾಯಕ ವ್ಯಕ್ತಿ ಮೇಲೆ ದುಷ್ಕರ್ಮಿಗಳಿಂದ ಹಲ್ಲೆಯಾಗಿದೆ. ಇಂತಹ ಕೃತ್ಯಗಳು ನಡೆಯದಂತೆ ಪೊಲೀಸರು ಕ್ರಮ ಕೈಗೊಳ್ಳಬೇಕು. ಆದರೆ ಪೊಲೀಸರು ಮೂಡಬಿದ್ರೆಯಲ್ಲಿ ನಡೆದ ಇಮ್ತಿಯಾಜ್ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಅಮಾಯಕ ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.

ಪೊಲೀಸರು ಕೃತ್ಯ ಎಸಗಿದ ನಿಜವಾದ ದುಷ್ಕರ್ಮಿಗಳನ್ನು ಬಂಧಿಸಿ ಶಿಕ್ಷೆ ನೀಡಲಿ. ಆದರೆ ಅಮಾಯಕರಿಗೆ ತೊಂದರೆ ಕೊಡುವುದು ಸರಿಯಲ್ಲ. ವಿಚಾರಣೆ ನಡೆಸುತ್ತೇವೆಂದು ಪೊಲೀಸರು ಕರೆದುಕೊಂಡು ಹೋಗಿ ಇನ್ನೂ ಕೆಲವರನ್ನು ಬಿಟ್ಟಿಲ್ಲ. ಯಾವುದೇ ಹಿಂದೂಗಳು ಕಾನೂನು ಕೈಗೆತ್ತಿಕೊಳ್ಳಬಾರದು.
ಹರೀಶ್ ಶೆಟ್ಟಿ ಕೊಲೆ ಯತ್ನ ಪ್ರಕರಣದಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸುವ ಆಶ್ವಾಸನೆ ನೀಡಿದ್ದಾರೆ. ಜನರು ಶಾಂತಿ ಕದಡುವಂತಹ ಯಾವುದೇ ಕೃತ್ಯಕ್ಕೆ ಕೈಹಾಕಬೇಡಿ ಎಂದು ಕರೆ ನೀಡಿದರು.

ಶಾಸಕ ಡಿ.ವೇದವ್ಯಾಸ್ ಕಾಮತ್ ಮಾತನಾಡಿ, ಹರೀಶ್ ಶೆಟ್ಟಿ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಈ ಕೂಡಲೇ ಬಂಧಿಸಬೇಕು. ಜಿಲ್ಲೆಯ ಜನರು ಶಾಂತಿ ಕಾಪಾಡಬೇಕು. ಮೂಡಬಿದ್ರೆಯಲ್ಲಿ ಇಮ್ತಿಯಾಝ್ ಮೇಲಿನ ಹಲ್ಲೆಗೆ ಪ್ರತೀಕಾರವೆಂಬ ಮಾತು ಕೇಳಿಬರುತ್ತಿದ್ದು, ಅಮಾಯಕರ ಮೇಲೆ ಹಲ್ಲೆ ನಡೆಯುತ್ತಿದೆ.
ಪೊಲೀಸರು ಕೂಡಲೇ ತನಿಖೆ ನಡೆಸಿ ನೈಜ ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ಈ ನಡುವೆ ಕಾಂಗ್ರೆಸ್ ಮುಖಂಡ ಮಿಥುನ್ ರೈ ಕೂಡ ಆಸ್ಪತ್ರೆಗೆ ಆಗಮಿಸಿ ಹರೀಶ್ ಶೆಟ್ಟಿ ಆರೋಗ್ಯದ ಬಗ್ಗೆ ವೈದ್ಯರಲ್ಲಿ ವಿಚಾರಿಸಿದರು. ನಂತರ ಹರೀಶ್ ಶೆಟ್ಟಿಯನ್ನು ಭೇಟಿ ಮಾಡಿ ಆರೋಗ್ಯ ಸ್ಥಿತಿ ವಿಚಾರಿಸಿದರು. ಮಿಥುನ್ ರೈ ಆಸ್ಪತ್ರೆಗೆ ಆಗಮಿಸಿದ್ದು ಹಲವರನ್ನು ಚಕಿತಗೊಳಿಸಿತು.












Click it and Unblock the Notifications