ನಲವತ್ತು ವರ್ಷದ ನಂಟು; ಸಿದ್ಧಾರ್ಥ್ ಸಾವಿಗೆ ಕಣ್ಣೀರಾದ ಶಾಸಕ ರಾಜೇಗೌಡ
Recommended Video
ಮಂಗಳೂರು, ಜುಲೈ 31: ಮಂಗಳೂರು-ಉಳ್ಳಾಲ ರಸ್ತೆಯ ನೇತ್ರಾವತಿ ಸೇತುವೆ ಬಳಿ ನಾಪತ್ತೆಯಾಗಿದ್ದ ಉದ್ಯಮಿ ವಿ. ಜಿ ಸಿದ್ದಾರ್ಥ ಅವರ ಮೃತ ದೇಹ ಬುಧವಾರ ಬೆಳಗ್ಗೆ ನದಿಯ ಹಿನ್ನೀರು ಪ್ರದೇಶ ಹೊಯ್ಗೆ ಬಜಾರ್ ಎಂಬ ಪ್ರದೇಶದಲ್ಲಿ ಪತ್ತೆಯಾಗಿದ್ದು, ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಸುಮಾರು ಒಂದು ಗಂಟೆಗಳ ಕಾಲ ಮರಣೋತ್ತರ ಪರೀಕ್ಷೆ ಪ್ರಕ್ರಿಯೆ ನಡೆಯಿತು. ಮೃತ ದೇಹ ದೊರೆತಾಗಿನಿಂದಲೂ ಸ್ಥಳದಲ್ಲೇ ಇದ್ದ ಶೃಂಗೇರಿ ಶಾಸಕ ರಾಜೇಗೌಡ ಅವರು ಆಂಬುಲೆನ್ಸ್ ಬರುತ್ತಿದ್ದಂತೆ ಶವಾಗಾರದ ಮುಂಭಾಗ, ಭಾವೋದ್ರೇಕಗೊಂಡು ಅಳಲು ಆರಂಭಿಸಿದರು. ವೆನ್ಲಾಕ್ ಆಸ್ಪತ್ರೆಯಿಂದ ಚಿಕ್ಕಮಗಳೂರಿಗೆ ಪಾರ್ಥಿವ ಶರೀರವನ್ನು ರವಾನಿಸುವ ಮುನ್ನ ದುಃಖ ತಡೆಯಲಾರದೆ ಕಣ್ಣೀರಾದರು.
ಸಿದ್ದಾರ್ಥ ಅವರೊಂದಿಗೆ ರಾಜೇಗೌಡ ಅವರದ್ದು ಸುದೀರ್ಘ 40 ವರ್ಷಗಳ ಒಡನಾಟ. ಸಿದ್ಧಾರ್ಥ್ ಅವರ ಹಿತೈಷಿ, ಸ್ನೇಹಿತರಾಗಿದ್ದ ರಾಜೇಗೌಡ ಅವರಿಗೆ ಸಿದ್ಧಾರ್ಥ್ ಅವರ ಸರಳ ಜೀವನದ ಬಗ್ಗೆ ತುಂಬು ಅಭಿಮಾನ. ಈ ಅಭಿಮಾನ, ಗೌರವ ಅವರಲ್ಲಿ ಕಣ್ಣೀರು ತರಿಸಿದೆ.

"ಆದಷ್ಟು ಬೇಗ ಅಂತಿಮ ದರ್ಶನ ಏರ್ಪಡಿಸಿ, ಅಂತ್ಯಕ್ರಿಯೆ ನಡೆಸಬೇಕಾಗಿದೆ. ಈಗಾಗಲೇ ಮೃತದೇಹ ಕೊಳೆತಿರುವ ಕಾರಣ ಹೆಚ್ಚು ಹೊತ್ತು ಇಡಬಾರದು" ಎಂದು ವೈದ್ಯರು ಸೂಚಿಸಿದ ಮೇರೆಗೆ ಚಿಕ್ಕಮಗಳೂರಿಗೆ ಪಾರ್ಥಿವ ಶರೀರವನ್ನು ತೆಗೆದುಕೊಂಡು ಹೋಗಿದ್ದು, ಚಿಕ್ಕಮಗಳೂರಿನ ಎಬಿಸಿ ಎಸ್ಟೇಟ್ ಮತ್ತು ಚೇತನಹಳ್ಳಿಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಈ ವೇಳೆ ಸಾರ್ವಜನಿಕರು, ಅಭಿಮಾನಿಗಳು ಸಹಕರಿಸಬೇಕೆಂದು ರಾಜೇಗೌಡ ವಿನಂತಿಸಿದ್ದಾರೆ.












Click it and Unblock the Notifications