ಬಹಿರಂಗವಾಗಿ ಕಚ್ಚಾಡಿಕೊಂಡ ಶಾಸಕ ಬಾವಾ, ಅಭಯಚಂದ್ರ ಜೈನ್
ಮಂಗಳೂರು, ಮಾರ್ಚ್ 2: ಕರಾವಳಿಯ ಶಾಸಕರಿಬ್ಬರು ಬಹಿರಂಗವಾಗಿ ಕಚ್ಚಾಡಿಕೊಂಡು ಕೈ ಕೈ ಮಿಲಾಯಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಮೊಯ್ದೀನ್ ಬಾವಾ ಹಾಗು ಮುಲ್ಕಿ-ಮೂಡಬಿದ್ರೆ ಶಾಸಕ ಅಭಯ ಚಂದ್ರ ಜೈನ್ 'ಅಪ್ಪ'ನ ವಿಚಾರವಾಗಿ ಬೈದಾಡಿಕೊಂಡಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ರಾಜ್ಯದ ಕರಾವಳಿ ಕಾಂಗ್ರೆಸ್ ಪಾಳಯದಲ್ಲಿ ಭಿನ್ನಮತ ಸ್ಪೋಟಗೊಂಡಿದೆ. ಮಂಗಳೂರಿನ ಪಿಲಿಕುಳ ನಿಸರ್ಗಧಾಮದಲ್ಲಿ ಗುರುವಾರ ನೂತನವಾಗಿ ನಿರ್ಮಾಣಗೊಂಡ ಸ್ವಾಮಿ ವಿವೇಕಾನಂದ ತಾರಾಲಯದ ಉದ್ಘಾಟನಾ ಕಾರ್ಯಕ್ರಮ ನಿಗದಿಯಾಗಿತ್ತು.
ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಎಂ.ಆರ್. ಸೀತಾರಾಮ್ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಲಾಗಿರುವ ಏಷ್ಯಾದ ಮೊದಲ ತಾರಾಲಯವನ್ನು ಉದ್ಘಾಟಿಸಿದರು.

ಶಾಸಕರ ಕಚ್ಚಾಟದ್ದೇ ಸುದ್ದಿ
ಆದರೆ ಸುದ್ದಿಯಾಗಿದ್ದು 3ಡಿ ತಾರಾಲಯವಲ್ಲ ಬದಲಿಗೆ ಶಾಸಕರ ಕಚ್ಚಾಟ. ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ ಸಚಿವ ಸೀತಾರಾಮ್ ಅವರ ಸಮ್ಮುಖದಲ್ಲೇ ಕಾಂಗ್ರೆಸ್ ನ ಈ ಇಬ್ಬರು ಶಾಸಕರು ಕೈ ಕೈ ಮಿಲಾಯಿಸಲು ಮುಂದಾಗಿದ್ದರು.

ಮೇಯರ್ ಅವಧಿ ಮುಗಿದರೆ ಏನು ಮಾಡ್ತೀರಿ?
ಕಾರ್ಯಕ್ರಮ ಆರಂಭಕ್ಕೂ ಮೊದಲು ಮಂಗಳೂರು ಮೇಯರ್ ಕವಿತಾ ಸನಿಲ್ ಜೊತೆ ಶಾಸಕ ಮೊಯ್ದೀನ್ ಬಾವಾ ಮಾತುಕತೆ ನಡೆಸುತ್ತಿದ್ದರು. ಶಾಸಕ ಬಾವಾ ಅವರ ಜೊತೆಗಿದ್ದವರು ಮೇಯರ್ ಅವಧಿ ಮುಗಿದ ಬಳಿಕ ಏನು ಮಾಡ್ತೀರೀ? ಎಂದು ಕವಿತಾ ಸನಿಲ್ ಅವರನ್ನು ಪ್ರಶ್ನಿಸಿದ್ದಾರೆ.

'ಆಕಾಂಕ್ಷಿ ನಿನ್ನ ಅಪ್ಪ'
ತಕ್ಷಣ ಮೊಯಿದ್ದೀನ್ ಬಾವಾ ವ್ಯಂಗ್ಯವಾಗಿ ಅವರು ಮುಂದೆ ಮುಲ್ಕಿ-ಮೂಡಬಿದ್ರೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಎಂದು ಕಿಚಾಯಿಸಿದ್ದಾರೆ. ಈ ವೇಳೆ ಬಾವಾ ಅವರ ಹಿಂದೆ ನಿಂತಿದ್ದ ಶಾಸಕ ಅಭಯಚಂದ್ರ ಜೈನ್ ಕೋಪಗೊಂಡು "ಆಕಾಂಕ್ಷಿ ನಿನ್ನ ಅಪ್ಪ"ಎಂದು ಹೇಳಿ ಆಕ್ರೋಶ ವ್ಯಕ್ತ ಪಡಿಸಿದರು.

"ನನ್ನ ಅಪ್ಪ ಅಲ್ಲ ನಿನ್ನ ಅಪ್ಪ"
ಇದರಿಂದ ಕೋಪಗೊಂಡ ಶಾಸಕ ಬಾವಾ, "ನನ್ನ ಅಪ್ಪ ಅಲ್ಲ ನಿನ್ನ ಅಪ್ಪ" ಎಂದು ಹೇಳಿದ್ದು ಕೈ ಕೈ ಮಿಲಾಯಿಸಲು ಮುಂದಾಗಿದ್ದರು. ತಕ್ಷಣ ಅಲ್ಲಿ ನೆರೆದಿದ್ದವರು ಹಾಗೂ ಸಚಿವ ಸೀತಾರಾಮ್ ಇಬ್ಬರನ್ನೂ ಸಮಾಧಾನ ಪಡಿಸಿದರು.

ಇದೆಲ್ಲಾ ತಮಾಷೆಗಾಗಿ
ಈ ವೇಳೆ ಚಿತ್ರೀಕರಣ ಮಾಡುತ್ತಿದ್ದ ಮಾಧ್ಯಮದವರನ್ನು ಸಚಿವರು ಇದೆಲ್ಲಾ ತಮಾಷೆಗಾಗಿಯಪ್ಪ ಶೂಟಿಂಗ್ ಮಾಡ್ಬೇಡಿ ಎಂದರು. ಬಳಿಕ ನಡೆದ ಕಾರ್ಯಕ್ರಮದಲ್ಲೂ ಶಾಸಕರಿಬ್ಬರ ಮುನಿಸು ಎದ್ದು ಕಾಣುತ್ತಿತ್ತು.

ಕೈ ಪಾಳಯದಲ್ಲಿ ಎಲ್ಲವೂ ಸರಿಯಿಲ್ಲ
ಕಾರ್ಯಕ್ರಮದಲ್ಲಿ ಬಹಿರಂಗವಾಗಿ ಶಾಸಕರಿಬ್ಬರು ಕಚ್ಚಾಡಿಕೊಂಡಿದ್ದು ಕರಾವಳಿ ಕೈ ಪಾಳಯದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ಸೂಚಿಸುತ್ತಿದೆ. ಮುಂಬರುವ ದಿನಗಳಲ್ಲಿ ಈ ಕಚ್ಚಾಟ ಭಿನ್ನಮತವಾಗಿ ಸ್ಪೋಟಗೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ.












Click it and Unblock the Notifications