ನಾಪತ್ತೆಯಾಗಿರುವ ಮೀನುಗಾರರ ಮೊಬೈಲ್ 46 ದಿನಗಳ ಬಳಿಕ ರಿಂಗಣಿಸಿತೆ?
ಮಂಗಳೂರು, ಫೆಬ್ರವರಿ 01: ಆಳ ಸಮುದ್ರ ಮೀನುಗಾರಿಕೆಗೆ ತೆರಳಿ ನಾಪತ್ತೆಯಾಗಿರುವ 7 ಜನ ಮೀನುಗಾರರು ಹಾಗೂ ಅವರಿದ್ದ ಸುವರ್ಣ ತ್ರಿಭುಜ ಬೋಟ್ ನ ಶೋಧ ಕಾರ್ಯ ಮುಂದುವರೆದಿದೆ. ಆಳ ಸಮುದ್ರದಲ್ಲಿ ಭಾರತೀಯ ನೌಕಾಪಡೆಯ ಹಡಗು ಶೋಧ ಕಾರ್ಯಾಚರಣೆ ಮುಂದುವರೆಸಿದ್ದು, ಈವರಗೆ ಯಾವುದೇ ಕುರುಹು ಪತ್ತೆಯಾಗಿಲ್ಲ.
ಈ ನಡುವೆ ನಾಪತ್ತೆಯಾಗಿರುವ ಮೀನುಗಾರ ಪೈಕಿ ಕುಮಟಾದ ಹೊಲನಗದ್ದೆಯ ಲಕ್ಷ್ಮಣ ಹರಿಕಂತ್ರ ಹಾಗೂ ಹೊನ್ನಾವರ ಮಂಕಿಯ ರವಿ ಅವರ ಮೊಬೈಲ್ ಕ್ರಮವಾಗಿ ಬುಧವಾರ ರಾತ್ರಿ ಮತ್ತು ಗುರುವಾರ ಬೆಳಗ್ಗೆ ರಿಂಗಣಿಸಿದೆ ಎಂದು ಹೇಳಲಾಗಿದೆ. ಇದು ನಾಪತ್ತೆಯಾಗಿರುವ ಮೀನುಗಾರರ ಕುಟುಂಬದ ಸದಸ್ಯರಲ್ಲಿ ಚಿಕ್ಕದೊಂದು ಆಶಾ ಕಿರಣ ಮೂಡಿಸಿದೆ.
ಹೈಡ್ರೊಗ್ರಾಫಿಕ್ಸ್ ಮೂಲಕ ಮುಂದುವರೆದ ನಾಪತ್ತೆಯಾದ ಮೀನುಗಾರರ ಪತ್ತೆ ಕಾರ್ಯಾಚರಣೆ
ಮೊಬೈಲ್ ರಿಂಗಣಿಸಿದ ಬಗ್ಗೆ ಲಕ್ಷ್ಮಣ ಹರಿಕಂತ್ರ ಅವರ ಮನೆಯವರು ಬಡಾನಿಡಿಯೂರು ಚಂದ್ರಶೇಖರ್ ಅವರ ಮನೆಯವರಿಗೆ ಮೊಬೈಲ್ ಕರೆ ಮಾಡಿ ತಿಳಿಸಿದ್ದಾರೆ. ನಾಪತ್ತೆಯಾದ ದಿನದಿಂದಲೂ ಲಕ್ಷ್ಮಣ ಹರಿಕಂತ್ರ ಮನೆಯವರು ಪ್ರತಿ ನಿತ್ಯ ಮೊಬೈಲ್ ಕರೆಗೆ ಪ್ರಯತ್ನಿಸುತ್ತಲೇ ಇದ್ದಾರೆ.
ಲಕ್ಷ್ಮಣರ ಮಗಳು ಬುಧವಾರ ರಾತ್ರಿ 7.24 ಹೊತ್ತಿಗೆ ಎರಡು ಸಲ ಪ್ರಯತ್ನಿಸಿದಾಗಲೂ ಮೊಬೈಲ್ ರಿಂಗ್ ಆಗಿದೆ.ನಂತರ ತಕ್ಷಣ ಸ್ವಿಚ್ ಆಫ್ ಆಗಿದೆ. ಅದೇ ರೀತಿ ಮಂಕಿಯ ರವಿ ಅವರ ಮೊಬೈಲ್ಗೂ ಗುರುವಾರ ಬೆಳಗ್ಗೆ ಕರೆ ಹೋಗಿದ್ದು, ರಿಂಗಣಿಸಿದ ಅನಂತರ ಸ್ವಿಚ್ ಆಫ್ಆಗಿದೆ ಎಂದು ಹೇಳಲಾಗಿದೆ.
ಮುಂದುವರೆದ ನಾಪತ್ತೆಯಾದ ಮೀನುಗಾರರ ಪತ್ತೆ ಕಾರ್ಯ:ಇನ್ನೆರೆಡು ದಿನಗಳಲ್ಲಿ ಸ್ಪಷ್ಟ ಚಿತ್ರಣ
ಮೊಬೈಲ್ ರಿಂಗಣಿಸಿದ ಕುರಿತು ಮೀನುಗಾರರ ಮನೆಯವರು ಪೊಲೀಸ್ ವರಿಷ್ಠರಿಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಮಾಹಿತಿ ಕಲೆ ಹಾಕಿದ ಪೊಲೀಸರು ಆ ಎರಡೂ ನಂಬರುಗಳಿಗೆ ಕರೆ ಹೋಗಿರುವುದು ಕಂಡುಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕ್ರಾಸ್ ಕನೆಕ್ಷನ್ ಆಗಿರವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.