ಮದುವೆಯಾಗಿದ್ದೇವೆ ಬದುಕಲು ಬಿಡಿ, ಬಿಬಿಎಂ ವಿದ್ಯಾರ್ಥಿನಿ
ಮಂಗಳೂರು, ನ.23 : ಮಂಗಳೂರಿನ ಉಳ್ಳಾಲದ ಪ್ರಥಮ ವರ್ಷದ ಬಿಬಿಎಂ ವಿದ್ಯಾರ್ಥಿನಿ ನಾಪತ್ತೆ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ತಾನು ಪ್ರೀತಿಸುತ್ತಿದ್ದ ಬಸ್ ಕಂಡಕ್ಟರ್ ಜೊತೆ ಆಕೆ ಮೈಸೂರಿನಲ್ಲಿ ವಿವಾಹವಾಗಿದ್ದಾಳೆ. ವಿದ್ಯಾರ್ಥಿನಿ ಪೋಷಕರು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಅಪಹರಣದ ದೂರು ದಾಖಲಿಸಿದ್ದಾರೆ.
ಬಿಬಿಎಂ ವಿದ್ಯಾರ್ಥಿನಿ ಕೋಟೆಕಾರು ನಿವಾಸಿ ಇನ್ಸಾ ಖಲೀಲ್ (19) ಹಿಂದೂ ಸಂಘಟನೆಗಳ ನೆರವಿನೊಂದಿಗೆ ಮೈಸೂರಿನಲ್ಲಿ ಇರಾ ನಿವಾಸಿ ಭರತ್ ರಾಜ್ (28) ಎಂಬಾತನನ್ನು ಮದುವೆಯಾಗಿದ್ದಾಳೆ. ಇಬ್ಬರ ಮದುವೆಯ ಫೋಟೋಗಳನ್ನು ಸ್ಥಳೀಯ ಪತ್ರಿಕೆಗಳಿಗೆ ಕಳುಹಿಸಿದ್ದು, ನಮ್ಮನ್ನು ಹುಡುಕಿದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಪತ್ರ ಬರೆದಿದ್ದಾರೆ.

ಘಟನೆ ವಿವರ : ಹಲವು ವರ್ಷಗಳಿಂದ ಇನ್ಸಾ ಖಲೀಲ್ ಮತ್ತು ಭರತ್ ರಾಜ್ ಪ್ರೀತಿಸುತ್ತಿದ್ದರು ಎಂದು ತಿಳಿದುಬಂದಿದೆ. ಭರತ್ ಮಂಗಳೂರು-ತಲಪಾಡಿ ನಡುವೆ ಸಂಚರಿಸುವ ಬಸ್ ನಂಬರ್ 42ರಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಪ್ರೀತಿಯ ವಿಚಾರವನ್ನು ಖಲೀಲ್ ಮನೆಯವರಿಗೆ ತಿಳಿಸಿರಲಿಲ್ಲ. [ನಟ ಫೈಜಲ್ ನನಗಿಷ್ಟ : ಉಡುಪಿಯ ಇಶಿಕಾ ಪತ್ರ]
ನ.19ರಂದು ಕಾಲೇಜಿಗೆ ತೆರಳಿದ್ದ ಖಲೀಲ್ ನಾಪತ್ತೆಯಾಗಿದ್ದಳು. ಅಂದೇ ಭರತ್ ರಾಜ್ ಸಹ ನಾಪತ್ತೆಯಾಗಿದ್ದ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಖಲೀಲ್ ಪೋಷಕರು ಆಕೆ ನಾಪತ್ತೆಯಾದ ಕುರಿತು ದೂರು ನೀಡಿದ್ದರು. ಮಗಳನ್ನು ಯಾರೋ ಅಪಹರಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದರು.
ಭರತ್ ಹಿಂದೂ ಸಂಘಟನೆಗಳ ಪ್ರಮುಖರಲ್ಲಿ ತಮ್ಮ ಪ್ರೀತಿಯ ವಿಷಯವನ್ನು ಹೇಳಿಕೊಂಡಿದ್ದು, ಮದುವೆ ಮಾಡಿಸುವಂತೆ ಮನವಿ ಮಾಡಿದ್ದರು. ಮೈಸೂರಿನ ದೇವಸ್ಥಾನವೊಂದರಲ್ಲಿ ಹಿಂದೂ ಪದ್ಧತಿ ಪ್ರಕಾರ ಸಂಘಟನೆಗಳು ಇಬ್ಬರ ಮದುವೆ ಮಾಡಿಸಿವೆ.
ಬಂತು ಫೋಟೋ, ಪತ್ರ : ಶನಿವಾರ ಮಂಗಳೂರಿನ ಪತ್ರಿಕಾ ಕಚೇರಿಗಳಿಗೆ ಪತ್ರವನ್ನು ಕಳುಹಿಸಿರುವ ಜೋಡಿ ತಮ್ಮನ್ನು ಬದುಕಲು ಬಿಡಿ, ಹುಡುಕುವ ಪ್ರಯತ್ನ ಮಾಡಿದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಬರೆದಿದ್ದಾರೆ.
ಜೋಡಿಗಳು ವಿವಾಹವಾಗಿರುವ ಭಾವಚಿತ್ರ ಮತ್ತು ಪತ್ರವನ್ನು ಕಳುಹಿಸಿದ್ದು, ನಮ್ಮ ಮದುವೆಗೆ ಯಾರೂ ಸಹಕರಿಸಿಲ್ಲ. ಆತನನ್ನು ತುಂಬಾ ಪ್ರೀತಿಸುತ್ತಿದ್ದರಿಂದ ಸ್ವ ಇಚ್ಛೆಯಿಂದ ತೆರಳಿ ವಿವಾಹವಾಗಿದ್ದೇನೆ. ಹುಡುಕುವ ಪ್ರಯತ್ನ ಮಾಡಬೇಡಿ. ಬದುಕಲು ಬಿಡಿ ಎಂದು ಮನವಿ ಮಾಡಿದ್ದಾರೆ. [ಚಿತ್ರ : ಐಸಾಕ್ ರಿಚರ್ಡ್, ಮಂಗಳೂರು]











Click it and Unblock the Notifications