ಮಂಗಳೂರಲ್ಲಿ ಮಾಜಿ ಸಿಎಂ ಎಚ್ಡಿಕೆಗೆ ತಿರುಗೇಟು ಕೊಟ್ಟ ಶ್ರೀರಾಮುಲು
ಮಂಗಳೂರು, ಫೆಬ್ರವರಿ 06: ಬಿಜೆಪಿ ಸರ್ಕಾರ 5 ವರ್ಷ ಪೂರ್ಣಗೊಳಿಸಲ್ಲ ಎಂಬ ಮಾಜಿ ಮುಖ್ಯಮಂತ್ರಿ ಹೇಳಿಕೆಗೆ ಆರೋಗ್ಯ ಸಚಿವ ಬಿ.ಶ್ರೀರಾಮುಲು, ಕುಮಾರಸ್ವಾಮಿ ಅಧಿಕಾರ ಕಳೆದುಕೊಂಡ ಹತಾಶಕ್ಕೆ ಈ ರೀತಿ ಮಾತನಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಮಂಗಳೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಬಿ.ಶ್ರೀರಾಮುಲು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಎಲ್ಲಿ ಸಿರಿಯಸ್ ಆಗಿ ಇರಬೇಕೋ ಅಲ್ಲಿ ಜೋಕ್ ಮಾಡುತ್ತಾರೆ. ಎಲ್ಲಿ ಜೋಕ್ ಮಾಡಬೇಕೋ ಅಲ್ಲಿ ಸಿರಿಯಸ್ ಆಗುತ್ತಾರೆ ಎಂದು ವ್ಯಂಗ್ಯವಾಡಿದರು.
ತಾನು ಏನು ಮಾತಾನಾಡುತ್ತಿದ್ದೇನೆ ಅಂತಾ ಕುಮಾರಸ್ವಾಮಿಗೆ ಗೊತ್ತಿರುವುದಿಲ್ಲ. ಅಧಿಕಾರ ಇಲ್ಲದ್ದಕ್ಕೆ ಹೀಗೆಲ್ಲಾ ಆಡುತ್ತಿದ್ದಾರೆ ಎಂದು ತಿರಗೇಟು ನೀಡಿದರು.

ಇದೇ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಹುದ್ದೆ ಕುರಿತು ಮಾತನಾಡಿದ ಸಚಿವ ಶ್ರೀರಾಮುಲು, ಈಗಾಗಲೇ ಸರ್ಕಾರದಲ್ಲಿ ಮೂರು ಜನ ಉಪಮುಖ್ಯಮಂತ್ರಿಗಳು ಇದ್ದಾರೆ. ಅವರೇ ಉಪಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ, ನನಗೂ ಆಸೆ ಇತ್ತು ಆದರೆ ಪಕ್ಷ ಅವಕಾಶ ಕೊಟ್ಟಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಬಹಳಷ್ಟು ಮಂದಿಗೆ ಸಚಿವ ಸ್ಥಾನದ ಆಸೆ ಇದೆ, ಆದರೆ ಎಲ್ಲರಿಗೂ ಸಿಗುವುದಿಲ್ಲ. ಅವಕಾಶಕ್ಕಾಗಿ ಕಾಯಬೇಕು, ಬಿಜೆಪಿ ಎಲ್ಲರಿಗೂ ಅವಕಾಶ ಮಾಡಿಕೊಡುತ್ತದೆ ಎಂದರು.

ಕರಾವಳಿ ಪ್ರದೇಶದ ಅಭಿವೃದ್ಧಿ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಿಲ್ಲ, ನಾನು ಮಗಳ ಮದುವೆ ಕಾರ್ಯದ ಒತ್ತಡದಲ್ಲಿದ್ದೇನೆ. ಹೀಗಾಗಿ ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಹೋಗಿಲ್ಲ, ಪಕ್ಷದ ಅನುಮತಿ ಪಡೆದೇ ಬಂದಿದ್ದೇನೆ ಎಂದು ಹೇಳಿದರು.
ಸಿದ್ಧರಾಮಯ್ಯ ಓರ್ವ ನಿರುದ್ಯೋಗಿ, ಅವರಿಗೆ ಮಾಡೋಕೆ ಬೇರೆ ಕೆಲಸ ಇಲ್ಲ. ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರು ನಿರುದ್ಯೋಗಿಗಳಾಗಿದ್ದಾರೆ. ನೂತನ ಸಚಿವರು ಅನರ್ಹರಲ್ಲ ಅಂತಾ ಜನ ಹೇಳಿದ್ದಾರೆ, ಜನರು ಅವರನ್ನು ಕಮಲದ ಚಿಹ್ನೆ ಮೇಲೆ ಗೆದ್ದು ಕಳುಹಿಸಿದ್ದಾರೆ ಎಂದು ತಿಳಿಸಿದರು.












Click it and Unblock the Notifications