ಬೈದ್ಯೆತಿ ಔಷಧಿ ವನಕ್ಕೆ ಭೇಟಿ ನೀಡಿದ ಅರಣ್ಯ ಸಚಿವ ರಮಾನಾಥ್ ರೈ
ಮಂಗಳೂರು, ಸೆಪ್ಟೆಂಬರ್ 21: ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ಮುಡಿಪಿನಡ್ಕದಲ್ಲಿರುವ ದೇಯಿ ಬೈದ್ಯೆತಿ ಔಷಧಿ ವನಕ್ಕೆ ಇಂದು ಸಚಿವ ರಮಾನಾಥ್ ರೈ ಭೇಟಿ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು ದೇಯಿ ಬೈದ್ಯೆತಿ ಪ್ರತಿಮೆಗೆ ಅವಮಾನ ಮಾಡಿದ ಅಹಿತರ ಘಟನೆಯೊಂದು ನಡೆದು ಹೋಗಿದೆ. ಇದು ಖಂಡನೀಯ ಎಂದು ಹೇಳಿದರು.

"ತಪ್ಪು ಯಾರೇ ಮಾಡಿದರೂ ಅದು ತಪ್ಪೇ. ಅದನ್ನು ತಪ್ಪು ಎಂದು ಹೇಳಲು ಯಾವುದೇ ಮುಜುಗರವಿಲ್ಲ. ಇದನ್ನು ನಾವೆಲ್ಲ ಬಲವಾಗಿ ಖಂಡಿಸುತ್ತೇವೆ. ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಕಾನೂನು ಪ್ರಕಾರ ಮುಂದಿನ ವಿಧಾನಗಳು ನಡೆಯುತ್ತವೆ. ಆದರೆ ಈ ಘಟನೆಯ ಹೆಸರಿನಲ್ಲಿ ಜಿಲ್ಲೆ ಸಾಮರಸ್ಯ ಕದಡುವ ಕೆಲಸ ಆಗಬಾರದು," ಎಂದು ಹೇಳಿದರು.
ಇತ್ತೀಚೆಗೆ ಕೆಲವು ಸಂಘಟನೆಗಳ ಮುಖಂಡರು, ಕಾರ್ಯಕರ್ತರು ದೇಯಿ ಬೈದ್ಯೆತಿ ಮೂರ್ತಿಯನ್ನು ಶುದ್ಧೀಕರಣ ಮಾಡಲು ಹೊರಟಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು, "ಇದರ ಬಗ್ಗೆ ನಾನೇನೂ ಪ್ರತಿಕ್ರಿಯೆ ನೀಡಲಾರೆ. ಅವರು ಶುದ್ಧೀಕರಣ, ಅಭಿಷೇಕ ಮಾಡುವಾಗ ಅವರ ಮನಸ್ಸಿನಲ್ಲಿ ಏನಿತ್ತು? ಅವರ ಉದ್ದೇಶ ಏನು ಎಂಬುದನ್ನು ಜನರ ವಿವೇಚನೆಗೆ ಬಿಡುತ್ತೇನೆ. ನಾನು ಏನೂ ಹೇಳುವುದಿಲ್ಲ. ಮಾತೆ ದೇಯಿ ಬೈದ್ಯೆತಿ ಓರ್ವ ಮಹಾನ್ ವೈದ್ಯ ಪಂಡಿತೆ. ಅವರ ಗರ್ಭ ಸಂಜಾತರಾದ ಕೋಟಿ ಚೆನ್ನಯರು ಅತುಲ ಪರಾಕ್ರಿಮಿಗಳು. ಶೋಷಣೆ, ದಬ್ಬಾಳಿಕೆ ವಿರುದ್ಧ ಹೋರಾಡಿದವರು. ಅವರ ಬಗ್ಗೆ ನಮಗೆಲ್ಲ ಅಪಾರ ಗೌರವವಿದೆ," ಎಂದರು.

Recommended Video

"ಕೋಟಿ ಚೆನ್ನಯರ ತಾಯಿ, ಮಹಾಮಾತೆ ದೇಯಿ ಬೈದ್ಯೆತಿ ಹೆಸರಿನಲ್ಲಿ ರಾಜ್ಯ ಸರಕಾರ ನಿರ್ಮಿಸಿದ ಔಷಧಿ ವನದ ಮೊದಲ ಹಂತದ ಅಭಿವೃದ್ಧಿ ಮುಗಿದಿದ್ದು, ಕೆಲವೇ ದಿನಗಳಲ್ಲಿ ಎರಡನೇ ಹಂತದ ಅಭಿವೃದ್ಧಿ ಯೋಜನೆ ಜಾರಿಗೆ ತರಲಾಗುವುದು. ಈ ಬಗ್ಗೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ," ಎಂದವರು ಮಾಹಿತಿ ನೀಡಿದರು.
ಔಷಧಿ ವನಕ್ಕೆ ಭೇಟಿ ನೀಡಿದ ಸಚಿವ ರಮಾನಾಥ ರೈ ಅವರು ಬಳಿಕ ದೇಯಿ ಬೈದೆತಿ - ಕೋಟಿ ಚೆನ್ನಯರ ಮೂಲಸ್ಥಾನವಾದ ಗೆಜ್ಜೆಗಿರಿ ನಂದನ ಬಿತ್ತಲ್ಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಇದೇ ವೇಳೆ ಸಚಿವರು ಪಡುಮಲೆಯ ಕಿನ್ನಿಮಾಣಿ ಪೂಮಾಣಿ ದೈವಸ್ಥಾನ ಮತ್ತು ಪಡುಮಲೆ ಮಸೀದಿಗೆ ಭೇಟಿ ನೀಡಿದರು.
ಪುತ್ತೂರು ಶಾಸಕಿ ಶಕುಂತಳಾ ಟಿ. ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಮತ್ತಿತರರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.












Click it and Unblock the Notifications