ಸಾರಿಗೆ ನೌಕರರು ಕೋಡಿಹಳ್ಳಿ ನಾಯಕತ್ವವನ್ನು ಬಿಟ್ಟು ಬಂದು ಮಾತನಾಡಲಿ: ಸಚಿವ ಕೆ.ಎಸ್ ಈಶ್ವರಪ್ಪ
ಮಂಗಳೂರು, ಏಪ್ರಿಲ್ 8: ರಾಜ್ಯ ರಸ್ತೆ ಸಾರಿಗೆ ನೌಕರರ ಎಲ್ಲ ಬೇಡಿಕೆಯನ್ನು ಈಡೇರಿಸುವುದಕ್ಕೆ ಸಾಧ್ಯವೇ ಇಲ್ಲ, ನೌಕರರು ಕೋಡಿಹಳ್ಳಿ ಚಂದ್ರಶೇಖರ್ ನಾಯಕತ್ವವನ್ನು ಬಿಟ್ಟು, ಸರ್ಕಾರದ ಜೊತೆ ಮಾತುಕತೆ ನಡೆಸಲಿ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಈಶ್ವರಪ್ಪ, ಸಾರಿಗೆ ನೌಕರರ ಬೇಡಿಕೆ ಒಂದು ಪರ್ಸೆಂಟ್ ಕೂಡಾ ನ್ಯಾಯ ಸಮ್ಮತವಾಗಿಲ್ಲ. ಸರ್ಕಾರ ಈ ಬೇಡಿಕೆಯನ್ನು ಒಪ್ಪುವುದಕ್ಕೂ ಸಾಧ್ಯವಿಲ್ಲ. ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಿದರೆ ಎಲ್ಲಾ ಇಲಾಖೆಗಳ ನೌಕರರೂ ಇದೇ ಮನವಿಯನ್ನು ಮಾಡುತ್ತಾರೆ. ಅದು ಖಂಡಿತವಾಗಿಯೂ ಸಾಧ್ಯವಿಲ್ಲ ಎಂದು ಹೇಳಿದರು.
ಶಿವಮೊಗ್ಗ; ಸರ್ಕಾರಿ ಬಸ್ ನಿಲ್ದಾಣ ಖಾಲಿ, ಖಾಸಗಿ ಬಸ್ ದರ್ಬಾರ್!
ಇದೇ ವೇಳೆ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಹರಿಹಾಯ್ದ ಈಶ್ವರಪ್ಪ, "ಕೋಡಿಹಳ್ಳಿ ಸರ್ವಾಧಿಕಾರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಡೆಯೋದಿಲ್ಲ. ಕೋಡಿಹಳ್ಳಿ ಉದ್ದೇಶ ಕೇವಲ ರಾಜ್ಯದ ಆರ್ಥಿಕ ವ್ಯವಸ್ಥೆಯನ್ನು ಕುಂಠಿತಗೊಳಿಸುವುದಾಗಿದೆ.''
"ಕೋಡಿಹಳ್ಳಿ ಕಡೆಗೆ ಸಾರಿಗೆ ನೌಕರರು ಹೋದರೆ ಅನ್ಯಾಯವಾಗೋದು ನೌಕರರಿಗೇ ಅನ್ನುವುದನ್ನು ಪ್ರತಿಭಟನಾಕಾರರು ಅರ್ಥ ಮಾಡಿಕೊಳ್ಳಬೇಕು. ಕೋಡಿಹಳ್ಳಿಯ ಮೊಂಡುವಾದವನ್ನು ಹೇಗೆ ಮಟ್ಟ ಹಾಕಬೇಕೆಂದು ಸರ್ಕಾರಕ್ಕೆ ಗೊತ್ತಿದೆ'' ಎಂದು ಸಚಿವ ಈಶ್ವರಪ್ಪ ಕಿಡಿಕಾರಿದ್ದಾರೆ.
ಸಾರಿಗೆ ನೌಕರರ ಮುಷ್ಕರದಿಂದ ಜನಸಾಮಾನ್ಯರಿಗೆ ತೊಂದರೆಯಾದರೆ ಸರ್ಕಾರ ಪರ್ಯಾಯ ವ್ಯವಸ್ಥೆಯನ್ನು ಮಾಡುತ್ತೇವೆ. ಜನರಿಗೆ ತೊಂದರೆಯಾದಾಗ ಸರ್ಕಾರ ಸುಮ್ಮನೆ ಕೂರಲು ಸಾಧ್ಯವೇ ಇಲ್ಲ. ಸಾರಿಗೆ ನೌಕರರು ಕೋಡಿಹಳ್ಳಿ ನಾಯಕತ್ವವನ್ನು ಬಿಟ್ಟು ಬಂದು ರಾಜ್ಯ ಸರ್ಕಾರದ ಜೊತೆ ಮಾತುಕತೆ ನಡೆಸಬಹುದೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್ ಈಶ್ವರಪ್ಪ ಮನವಿ ಮಾಡಿದ್ದಾರೆ.