ಕಡಲ್ಕೊರೆತ ಕಾಮಗಾರಿ ಪರಿಶೀಲಿಸಿದ ಚಿಂಚನಸೂರ್
ಮಂಗಳೂರು, ಜ. 25 : ಕಡಲ್ಕೊರೆತ ಶಾಶ್ವತ ತಡೆಗೋಡೆ ಕಾಮಗಾರಿ ಪ್ರದೇಶಗಳಾದ ಉಳ್ಳಾಲ ಮೊಗವೀರಪಟ್ಣ ಪ್ರದೇಶಕ್ಕೆ ರಾಜ್ಯ ಜವುಳಿ, ಬಂದರು ಮತ್ತು ಒಳನಾಡು ಸಾರಿಗೆ ಸಚಿವ ಬಾಬುರಾವ್ ಚಿಂಚನಸೂರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಂತರ ಮಾತನಾಡಿ, ಉಳ್ಳಾಲ ಕಡಲ್ಕೊರೆತ ಕಾಮಗಾರಿ ಸುಮಾರು 233 ಕೋಟಿ ರೂ. ಯೋಜನೆ. ಇಲ್ಲಿನ ಮೀನುಗಾರರ ಸಮಸ್ಯೆ ಏನು ಎಂಬುದು ನಮಗೆ ಗೊತ್ತು. ಮೀನುಗಾರರ ಸಮಸ್ಯೆ ದೂರವಾಗಬೇಕು. ನಾನು ಕೂಡ ಮೀನುಗಾರ ಸಮುದಾಯಕ್ಕೆ ಸೇರಿದವನಾಗಿರುವುದರಿಂದ ಅವರಿಗೆ ಏನು ಸಮಸ್ಯೆ ಇದೆ ಎಂಬುದು ನಮಗೆ ಗೊತ್ತು ಎಂದು ನುಡಿದರು.[ಎತ್ತಿನಹೊಳೆ 2 ವರ್ಷದಲ್ಲಿ ಪೂರ್ಣ: ವೀರಪ್ಪ ಮೊಯ್ಲಿ]

ದೊಡ್ಡ ಯೋಜನೆಯಿಂದ ಕೂಡಿರುವ ಕಡಲ್ಕೊರೆತ ಕಾಮಗಾರಿಯಿಂದ ಇಲ್ಲಿನ ಜನರ ಜೀವನಕ್ಕೆ ನೆಮ್ಮದಿ ಸಿಗಬೇಕು. ಸದಾ ಆತಂಕದಲ್ಲಿ ಬದುಕುವ ಇಲ್ಲಿನ ನಿವಾಸಿಗಳ ಬದುಕು ಹಸನಾಗಬೇಕು. ಅದಕ್ಕೆ ಸಕಲ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಮಂಗಳೂರಿನ ಇತಿಹಾಸದಲ್ಲಿಯೇ ಇದು ಬಲು ದೊಡ್ಡ ಯೋಜನೆ, ಮಹತ್ವದ ಕೆಲಸ. ಇಲ್ಲಿನ ಸಾಧಕ ಬಾಧಕಗಳನ್ನು ಗಮನಿಸಿ ಅಧಿಕಾರಿಗಳ ಗಮನಕ್ಕೆ ತರಲಾಗುವುದು. ಮೊಗವೀರ ಸಮುದಾಯದಿಂದ ಈ ಬಗ್ಗೆ ಮಾಹಿತಿ ಪಡೆದಿದ್ದು ಅನುಷ್ಠಾನಕ್ಕೆ ಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.[ಮಂಗಳೂರಿನ ಬಂದರಿನಲ್ಲಿ 23 ಹುದ್ದೆಗಳಿವೆ ಅರ್ಜಿ ಹಾಕಿ]

ಉಳ್ಳಾಲ ಬೀಚ್ ಉತ್ಸವ ಸಮಿತಿ ಅಧ್ಯಕ್ಷ ಭರತ್ ಕುಮಾರ್ ಉಳ್ಳಾಲ ಮಾತನಾಡಿ, ಕಡಲ್ಕೊರೆತ ಕಾಮಗಾರಿ ಬ್ರೇಕ್ ವಾಟರ್ಗೆ ಪ್ರಥಮ ಆದ್ಯತೆ ನೀಡಬೇಕಿತ್ತು. ಅದು ಮುಗಿದ ನಂತರ ಈ ಕಾಮಗಾರಿ ನಡೆಸಬೇಕಿತ್ತು. ಇಲ್ಲಿ ಮೂರನೇ ಸ್ಟೇಜ್ ಕಾಮಗಾರಿ ಮೊದಲಿಗೆ ಮಾಡುತ್ತಿದ್ದು ಮೊದಲ ಕಾಮಗಾರಿ ನಡೆದೇ ಇಲ್ಲ. ಸ್ಥಳೀಯ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಸರ್ಕಾರ ಮಣ್ಣೆರಚುವ ತಂತ್ರ ಮಾಡುತ್ತಿದೆ ಎಂದು ಆರೋಪಿಸಿದರು.

ಇದಕ್ಕೆ ಉತ್ತರಿಸಿದ ಸಚಿವರು ಎಲ್ಲ ಸಮಸ್ಯೆಗಳಿಗೆ ಸೂಕ್ತ ಪರಿಗಹಾರ ಕಲ್ಪಿಸಿಕೊಡಲಾಗುವುದು ಎಂದು ತಿಳಿಸಿದರು. ಮೊಗವೀರ ಸಂಘದ ಅಧ್ಯಕ್ಷ ಸದಾನಂದ ಬಂಗೇರ, ಮೊಗವೀರ ಶಾಲಾ ಸಮೂಹ ಸಂಸ್ಥೆಗಳ ಸಂಚಾಲಕ ಬಾಬು ಬಂಗೇರ. , ಮೊಗವೀರ ಮುಖಂಡ ಲಕ್ಷ್ಮಣ ಅಮೀನ್, ಬಾಬು ಸಾಲ್ಯಾನ್, ಕೌನ್ಸಿಲರ್ ಯು.ಕೆ. ಮೊಯ್ಯುದ್ದಿನ್ ಹಾಜರಿದ್ದರು.











Click it and Unblock the Notifications