ಪುತ್ತೂರು ಕಲಾವಿದನ ಕೈ ಚಳಕ, ಮೂಡಿಬಂದ ಬಗೆ-ಬಗೆಯ ಗಣಪ!
ಮಂಗಳೂರು, ಆಗಸ್ಟ್. 27 : ಗಣೇಶ ಚತುರ್ಥಿ ಬಂದರೆ ಸಂಭ್ರಮದ ವಾತಾವರಣ ನಿರ್ಮಾಣವಾಗುತ್ತದೆ. ಲಂಬೋದರನನ್ನು ಸಂಭ್ರಮದಿಂದಲೇ ಮನೆಗೆ ಬರ ಮಾಡಿಕೊಳ್ಳಲಾಗುತ್ತದೆ. ಚತುರ್ಥಿಯಂದು ವಿಘ್ನೇಶ್ವರ ಮೂರ್ತಿಯನ್ನು ತಂದು ಪೂಜಿಸಲಾಗುತ್ತದೆ. ಹಲವು ಸಂಘ ಸಂಸ್ಥೆಗಳು ಗಣಪತಿ ವಿಗ್ರಹವನ್ನು ಸ್ಥಾಪಿಸಿ ಪೂಜೆ ನೆರವೇರಿಸುವುದು ಹಿಂದಿನಿಂದಲೂ ಬಂದ ಸಂಪ್ರದಾಯ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಒಬ್ಬ ಯುವ ಕಲಾವಿದರೂಬ್ಬರು ಇಂತರ ಸಂಪ್ರದಾಯವನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಗಣೇಶ ಚತುರ್ಥಿಗಾಗಿಯೇ ಇವರು ವಿವಿಧ ವಸ್ತುಗಳನ್ನು ಬಳಸಿ ಗಣಪತಿಯ ಕಲಾಕೃತಿಯನ್ನು ಮಾಡುವ ಮೂಲಕ ವಿಶಿಷ್ಟವಾಗಿ ಚತುರ್ಥಿಯನ್ನು ಆಚರಿಸುತ್ತಾರೆ.
ಪುತ್ತೂರಿನಲ್ಲಿ ಕಲಾ ಶಿಕ್ಷಕರಾಗಿ ತನ್ನ ವೃತ್ತಿಯನ್ನು ನಡೆಸುತ್ತಿರುವ ಪ್ರವೀಣ್ ವರ್ಣಕುಟೀರ ಅವರು ವಿಶಿಷ್ಟವಾಗಿ ಗಣೇಶ ಚತುರ್ಥಿ ಆಚರಣೆ ಮಾಡುತ್ತಾರೆ. ಪ್ರವೀಣ್ ಅವರಿಗೂ ಗಣೇಶನಿಗೂ ಏನೋ ಒಂದು ರೀತಿಯ ಅವಿನಾಭಾವ ಸಂಬಂಧ. ಚತುರ್ಥಿ ಬಂತೆಂದರೆ ಸಾಕು ವಿಭಿನ್ನ ರೀತಿಯ ಗಣೇಶನ ಕಲಾಕೃತಿ ರಚಿಸುವ ಮೂಲಕ ಗಣೇಶನನ್ನು ಒಲಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ.

ಕ್ರಾಫ್ಟ್ ಶೀಟ್ ಗಣಪ
ಈ ಬಾರಿ ಪ್ರವೀಣ್ ಕೈಯಲ್ಲಿ ಮೂಡಿಬಂದಿರುವುದು ಕ್ರಾಫ್ಟ್ ಶೀಟ್ ಗಣಪತಿ. ಬೇರೆ ಕಾರ್ಯಕ್ಕೆ ಉಪಯೋಗಿಸಿ ಉಳಿದ ಕ್ರಾಫ್ಟ್ ಶೀಟನ್ನು ಬಳಸಿ ಸುಂದರವಾದ ಗಣಪತಿಯ ಕಲಾಕೃತಿಯನ್ನು ರಚಿಸಿದ್ದು, ಅದಕ್ಕೆ ಇನ್ನಷ್ಟು ಮೆರಗು ನೀಡುವ ಉದ್ದೇಶದಿಂದ ಅವುಗಳಿಗೆ ಹೊಳೆಯುವ ಕಲ್ಲುಗಳನ್ನೂ ಜೋಡಿಸಿದ್ದಾರೆ.

ಹಲವು ಬಗೆಯ ಗಣಪತಿ ಮೂಡಿದೆ ಇವರ ಕೈಯಲ್ಲಿ
ಪ್ರವೀಣ್ ಈ ಬಾರಿ ಕ್ರಾಫ್ಟ್ ಶೀಟ್ ಗಣಪತಿಯ ಮೂಲಕ ಗಮನ ಸೆಳೆದಿದ್ದಾರೆ. ಬಿದಿರಿನ ಗಣಪತಿ, ಐಸ್ ಕ್ಯಾಂಡಿ ಕಡ್ಡಿಯ ಗಣಪತಿ, ಪೆನ್ಸಿಲ್ ಮೊನೆಯಲ್ಲಿ ಗಣಪತಿ, ಬೆಂಕಿಕಡ್ಡಿಯಲ್ಲಿ ಗಣಪತಿ ಹೀಗೆ ಎಲ್ಲಾ ರೀತಿಯ ವಸ್ತುಗಳನ್ನು ಬಳಸಿ ಅತ್ಯಂತ ನಾಜೂಕಾದ ಗಣಪತಿಯನ್ನು ಪ್ರವೀಣ್ ಸೃಷ್ಟಿಸಿದ್ದಾರೆ.

ಕಲಾ ವಿದ್ಯಾರ್ಥಿಗಳಿಗೆ ಪಾಠ
ಪ್ರವೀಣ್ ತಾವು ಮಾತ್ರ ಕಲಾಕೃತಿ ರಚನೆ ಮಾಡುವುದಿಲ್ಲ. ತಮ್ಮಲ್ಲಿಗೆ ಬರುವ ಕಲಾ ವಿದ್ಯಾರ್ಥಿಗಳಿಗೂ ಅದನ್ನು ತಿಳಿಸುವ ಕಾರ್ಯದಲ್ಲಿ ಪ್ರವೀಣ ವರ್ಣಕುಟೀರ ಸದಾ ನಿರತರಾಗಿದ್ದಾರೆ.

ಪರಿಸರ ಸ್ನೇಹಿ ಗಣಪ
ಅತ್ಯಂತ ನಾಜೂಕಿನ ಕಲೆಯನ್ನೇ ಛಾಲೆಂಜ್ ಆಗಿ ತೆಗೆದುಕೊಂಡು, ಅದನ್ನು ಅತ್ಯಂತ ಸುಂದರವಾಗಿ ಪ್ರಸ್ತುತಪಡಿಸುವ ಪ್ರವೀಣ್ ವಿಶಿಷ್ಟ ಗಣಪತಿಯ ಕಲಾಕೃತಿ ತಯಾರಿಸುವವರ ಸಾಲಿನಲ್ಲಿ ಸೇರುತ್ತಾರೆ. ಪರಿಸರಕ್ಕೆ ಹಾನಿಯಾಗುವ ಯಾವುದೇ ವಸ್ತುಗಳನ್ನು ಬಳಸದೆ, ಪರಿಸರಸ್ನೇಹಿ ಗಣಪತಿಯನ್ನು ತಯಾರಿಸುವ ಮೂಲಕ ಎಲ್ಲರ ಪ್ರಸಂಶೆಗೂ ಪಾತ್ರರಾಗಿದ್ದಾರೆ.












Click it and Unblock the Notifications