ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೈದ್ಯಕೀಯ ಮಂಡಳಿ ಅಸ್ತಿತ್ವಕ್ಕೆ
ಮಂಗಳೂರು, ಅಕ್ಟೋಬರ್ 5: ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ವಿಧಿಸುವ ದುಬಾರಿ ಚಿಕಿತ್ಸಾ ದರ ಹಾಗೂ ಚಿಕಿತ್ಸೆಯಲ್ಲಿ ವೈದ್ಯರ ನಿರ್ಲಕ್ಷ್ಯದ ಬಗ್ಗೆ ಸಾರ್ವಜನಿಕರ ದೂರು, ಅಹವಾಲುಗಳನ್ನು ಆಲಿಸಲು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೈದ್ಯಕೀಯ ಮಂಡಳಿ ಅಸ್ತಿತ್ವಕ್ಕೆ ಬಂದಿದೆ.
ಇತ್ತೀಚೆಗೆ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ವೈದ್ಯರು ಹಾಗೂ ಶುಶ್ರೂಷ ಸಿಬ್ಬಂದಿಗಳ ಮೇಲೆ ಸಾರ್ವಜನಿಕರು ನಡೆಸುತ್ತಿರುವ ದೈಹಿಕ ಹಲ್ಲೆಯನ್ನು ತಡೆಗಟ್ಟುವ ಕುರಿತು ಸಭೆ ನಡೆಸಲಾಗಿತ್ತು. ಈ ನಿಟ್ಟಿನಲ್ಲಿ ಜಿಲ್ಲೆಯ ಹಿರಿಯ ವೈದ್ಯರು, ಐಎಂಎ ಜಿಲ್ಲಾ ಅಧ್ಯಕ್ಷರು, ಕಾರ್ಯದರ್ಶಿಗಳ ಜತೆ ಚರ್ಚಿಸಿ ಜಿಲ್ಲಾಮಟ್ಟದಲ್ಲಿ ವೈದ್ಯಕೀಯ ಮಂಡಳಿ ರಚಿಸಲಾಗಿದೆ.
ಈ ಸಮಿತಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ, ಐಎಂಎ ಜಿಲ್ಲಾ ಅಧ್ಯಕ್ಷರು, ಮಕ್ಕಳ, ಸ್ತ್ರೀರೋಗ ಸೇರಿದಂತೆ ವಿವಿಧ ವೈದ್ಯಕೀಯ ಸಂಘಟನೆಗಳ ಅಧ್ಯಕ್ಷರು ಹಾಗೂ ಜಿಲ್ಲೆಯ ಐದು ತಾಲೂಕಿನ ತಾಲೂಕು ಆರೋಗ್ಯಾಧಿಕಾರಿಯವರನ್ನು ಒಳಗೊಂಡಂತೆ ಸಮಿತಿಯನ್ನು ರಚಿಸಲಾಗಿದೆ.
ಸಮಿತಿಯು ವೈದ್ಯರ ನಿರ್ಲಕ್ಷ್ಯತೆ, ದುಬಾರಿ ಚಿಕಿತ್ಸಾ ವೆಚ್ಚದ ಕುರಿತು ಸಾರ್ವಜನಿಕರಿಂದ ದೂರುಗಳು ಬಂದಲ್ಲಿ ಕೂಲಂಕುಷವಾಗಿ ಪರಿಶೀಲನೆ,ವಿಚಾರಣೆ ನಡೆಸಿ ಸಂಪೂರ್ಣ ವರದಿಯನ್ನು ಜಿಲ್ಲಾಧಿಕಾರಿಯವರಿಗೆ ಒಪ್ಪಿಸಲಿದೆ.