ಮಂಗಳೂರು ಪಾಲಿಕೆ ಆಯುಕ್ತರಿಗೆ ಗನ್ಮ್ಯಾನ್ ಭದ್ರತೆ!
ಮಂಗಳೂರು, ಮೇ 6 : ತಮ್ಮ ಕಾರ್ಯವೈಖರಿ ಮೂಲಕ ಪಾಲಿಕೆ ಸದಸ್ಯರ ಕೆಂಗಣ್ಣಿಗೆ ಗುರಿಯಾಗಿರುವ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಾದ ಹೆಫ್ಸಿಬಾ ರಾಣಿ ಕೊರ್ಲಾಪತಿ ಅವರಿಗೆ ಗನ್ಮ್ಯಾನ್ ಭದ್ರತೆ ಒದಗಿಸಲಾಗಿದೆ.
ಏ.22ರಂದು ಹೆಫ್ಸಿಬಾ ರಾಣಿ ಕೊರ್ಲಾಪತಿ ಅವರು ತಮಗೆ ಜೀವ ಬೆದರಿಕೆ ಇದ್ದು ಗನ್ಮ್ಯಾನ್ ಭದ್ರತೆ ಒದಗಿಸಬೇಕು ಎಂದು ಮಂಗಳೂರು ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದರು. ಈ ಪತ್ರದ ಅನ್ವಯ ಭದ್ರತೆಯನ್ನು ಒದಗಿಸಲಾಗಿದೆ. [ಮಂಗಳೂರು ಪಾಲಿಕೆಗೆ ಕೊನೆಗೂ ಆಯುಕ್ತರ ನೇಮಕ]

ಹೆಫ್ಸಿಬಾ ರಾಣಿ ಕೊರ್ಲಾಪತಿ ಅವರು ಜನವರಿಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದರು. ಆಯುಕ್ತರ ಕಾರ್ಯವೈಖರಿ ಬಗ್ಗೆ ಪಾಲಿಕೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸುತ್ತಿದ್ದು, ಆಯುಕ್ತರನ್ನು ವರ್ಗಾವಣೆ ಮಾಡಿ ಎಂದು ಬೇಡಿಕೆ ಮುಂದಿಟ್ಟಿದ್ದರು. [ಅಧಿಕಾರ ಸ್ವೀಕರಿಸಿದ ಪಾಲಿಕೆ ಆಯುಕ್ತರು]
ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳೂರು ನಗರಕ್ಕೆ ಭೇಟಿ ನೀಡಿದ್ದಾಗ ಪಾಲಿಕೆ ಸದಸ್ಯರ ತಂಡವೊಂದು ಹೆಫ್ಸಿಬಾ ರಾಣಿ ಕೊರ್ಲಾಪತಿ ಅವರನ್ನು ವರ್ಗಾವಣೆ ಮಾಡುವಂತೆ ಅವರಿಗೆ ಮನವಿ ಮಾಡಿತ್ತು.
ಕಾನೂನಿನಂತೆ ಕೆಲಸ : 'ಹೆಫ್ಸಿಬಾ ರಾಣಿ ಕೊರ್ಲಾಪತಿ ಅವರು ಕಾನೂನು ಪ್ರಕಾರ ಕೆಲಸ ಮಾಡುತ್ತಿದ್ದಾರೆ. ಇದರಿಂದ ಶಾಸಕರು ಮತ್ತು ಪಾಲಿಕೆ ಸದಸ್ಯರಿಗೆ ತೊಂದರೆ ಉಂಟಾಗುತ್ತಿದೆ. ಕೆಲವರು ಜೀವ ಬೆದರಿಕೆ ಹಾಕಿರಬಹುದು' ಎಂದು ನಾಗರೀಕ ಹಿತರಕ್ಷಣಾ ಸಮಿತಿಯ ಹನುಮಂತ ಕಾಮತ್ ಹೇಳಿದ್ದಾರೆ.
'ಜೀವ ಬೆದರಿಕೆ ಇರುವುದರಿಂದ ಅವರು ಗನ್ಮ್ಯಾನ್ ಭದ್ರತೆ ಪಡೆದಿರುವುದು ತಪ್ಪಲ್ಲ. ಕಾನೂನು ಪ್ರಕಾರ ಕೆಲಸ ಮಾಡುವ ಆಯುಕ್ತರಿಗೆ ಬೆದರಿಕೆ ಹಾಕುವ ವ್ಯಕ್ತಿಗಳಿಗೆ ನಾಚಿಕೆಯಾಗಬೇಕು' ಎಂದು ಹನುಮಂತ ಕಾಮತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೀದರ್ ಜಿಲ್ಲೆ ಬಸವಕಲ್ಯಾಣದಲ್ಲಿ ಉಪ ವಿಭಾಗಾಧಿಕಾಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಹೆಫ್ಸಿಬಾ ರಾಣಿ ಕೊರ್ಲಾಪತಿ ಅವರನ್ನು ಮಂಗಳೂರು ಮಹಾನಗರಪಾಲಿಕೆಯ ಆಯುಕ್ತರನ್ನಾಗಿ ವರ್ಗಾವಣೆ ಮಾಡಲಾಗಿತ್ತು. ಅಂದಹಾಗೆ ಮಂಗಳೂರು ಪಾಲಿಕೆ ಇತಿಹಾಸದಲ್ಲಿಯೇ ಮೊದಲ ಬಾರಿ ಆಯುಕ್ತರಿಗೆ ಗನ್ಮ್ಯಾನ್ ಭದ್ರತೆ ನೀಡಲಾಗಿದೆ.












Click it and Unblock the Notifications