ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡಿದ ಮಂಗಳೂರು ಮೇಯರ್
ಮಂಗಳೂರು, ನವೆಂಬರ್ 2: ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಕವಿತಾ ಸನಿಲ್ ಗೆ ವಿವಾದ ಭೂತ ಬೆನ್ನು ಬಿಡುತ್ತಿಲ್ಲ.
ತನ್ನ ಅಪಾರ್ಟ್ಮೆಂಟ್ ನ ವಾಚ್ ಮ್ಯಾನ್ ಹೆಂಡತಿಯ ಮೇಲೆ ಕವಿತಾ ಸನಿಲ್ ಕೊಲೆ ಯತ್ನ ಕೇಸ್ ದಾಖಲಿಸಿರುವುದು ಇದೀಗ ಜನಾಕ್ರೋಶಕ್ಕೆ ಕಾರಣವಾಗಿದೆ.

ಬಡಪಾಯಿ ಕುಟುಂಬದ ಮೇಲೆ ಅಧಿಕಾರ ಬಳಸಿ ಬ್ರಹ್ಮಾಸ್ತ್ರ ಹೂಡಿರೋದು ಮೇಯರ್ ಗೆ ತಿರುಗುಬಾಣವಾಗಿ ಮಾರ್ಪಟ್ಟಿದೆ.
ಅಪಾರ್ಟ್ಮೆಂಟ್ ನ ವಾಚ್ ಮ್ಯಾನ್ ಹೆಂಡತಿಗೆ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಕವಿತಾ ಸನಿಲ್ ಹಲ್ಲೆ ನಡೆಸಿದ್ದು ವಿವಾದವಾಗಿತ್ತು. ಇದೀಗ ಇದೇ ಪ್ರಕರಣದಲ್ಲಿ ವಾಚ್ ಮ್ಯಾನ್ ಪುಂಡಲೀಕ ಪತ್ನಿ ಕಮಲಾ ವಿರುದ್ದ ಮೇಯರ್ ಕವಿತಾ ಸನಿಲ್ ಕೊಲೆ ಯತ್ನ ಕೇಸ್ ಹಾಕಿದ್ದಾರೆ.
ತನ್ನ ಮಗಳನ್ನು ಕಮಲಾ ಕೊಲೆ ಮಾಡೋಕೆ ಯತ್ನಿಸಿದ್ದಾಳೆ ಅಂತಾ ಮೇಯರ್ ಕವಿತಾ ಸನಿಲ್ ಬರ್ಕೆ ಠಾಣೆಯಲ್ಲಿ 8 ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಪ್ರಕರಣ ದಾಖಲಾಗುತಿದ್ದಂತೆ ಪೊಲೀಸರು ಕಮಲಾ ಅವರನ್ನು ಹುಡುಕಲು ಆರಂಭಿಸಿದ್ದಾರೆ. ಈ ಪರಿಣಾಮ ಕಮಲಾ ಹೆದರಿ ತನ್ನ ಕುಟುಂಬದೊಂದಿಗೆ ತಲೆಮರೆಸಿಕೊಂಡಿದ್ದು ಈಗ ಇಡೀ ಕುಟುಂಬವೇ ಜೈಲು ಪಾಲಾಗುವ ಆತಂಕದಿಂದಿದೆ.
ಪ್ರಕರಣ ನಡೆದು ಮೂರು ದಿನದ ಬಳಿಕ ಕವಿತಾ ಸನಿಲ್ ಕಮಲಾ ವಿರುದ್ದ ದೂರು ನೀಡಿದರೂ ಪೊಲೀಸರು ಸಣ್ಣ ಪರಿಶೀಲನೆ, ತನಿಖೆ ಒಂದನ್ನೂ ನಡೆಸದೆ ಮೇಯರ್ ವಿರುದ್ಧ ದೂರು ನೀಡಿದ ಕಮಲಾ ವಿರುದ್ಧವೇ ಕೊಲೆ ಯತ್ನ ಕೇಸ್ ಹಾಕಿದ್ದಾರೆ.
ಕೊಲೆ ಯತ್ನ ಕೇಸ್ ದಾಖಲಿಸುವಾಗ ಕಾನೂನು ಪ್ರಕಾರ ಸಂತ್ರಸ್ತರು ಆಸ್ಪತ್ರೆ ಗೆ ದಾಖಲಾಗಿರಬೇಕು. ಆದರೆ ಈ ಪ್ರಕರಣದಲ್ಲಿ ಮೇಯರ್ ಅಧಿಕಾರ ದುರ್ಬಳಕೆ ಮಾಡಿ ಪೊಲೀಸರ ಮೇಲೆ ಒತ್ತಡ ತಂದು ಕೇಸ್ ಹಾಕಿಸಿದ್ದಾರೆ ಅನ್ನುವ ಆರೋಪ ಕೂಡಾ ಕೇಳಿ ಬಂದಿದೆ.

ವಾಚ್ ಮ್ಯಾನ್ ಹೆಂಡತಿ ಕಮಲಾ ಗೆ ಮೂರು ಪುಟ್ಟ ಮಕ್ಕಳಿದ್ದು, ಮಕ್ಕಳೂ ತಾಯಿಯ ಜತೆ ಜೈಲು ಪಾಲಾಗುವ ಸಾಧ್ಯತೆಗಳಿವೆ. ಮೇಯರ್ ಕವಿತಾ ಸನಿಲ್ ಅವರ ಈ ನಿಹೃದಯಿ ವರ್ತನೆ ಬಗ್ಗೆ ಮಂಗಳೂರು ನಾಗರಿಕರೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಪ್ರಕರಣದಲ್ಲಿ ಕಾನೂನು ಮತ್ತು ಅಧಿಕಾರ ದುರ್ಬಳಕೆ ಎರಡನ್ನೂ ಮೇಯರ್ ಕವಿತಾ ಸನಿಲ್ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದು ಮೇಯರ್ ಕಮಲಾ ಅವರ ವಿರುದ್ಧ ದಾಖಲಿಸಿರುವ ಕೇಸ್ ವಾಪಾಸು ಪಡೆಯಬೇಕು ಎಂದು ಆಗ್ರಹಿಸಿದ್ದಾರೆ. ಮಾತ್ರವಲ್ಲ ಮೇಯರ್ ಸ್ಥಾನಕ್ಕೆ ರಾಜೀನಾಮೆ ಕೊಡಬೇಕೆಂದು ಬಿಜೆಪಿಯವರು ಆಗ್ರಹಿಸಿದ್ದಾರೆ












Click it and Unblock the Notifications