ದಕ್ಷಿಣ ಕನ್ನಡ : ಮಳೆಗಾಗಿ ದೇವಾಲಯಗಳಲ್ಲಿ ಪ್ರಾರ್ಥನೆ
ಮಂಗಳೂರು, ಮೇ 10 : ದಕ್ಷಿಣ ಕನ್ನಡ ಜಿಲ್ಲೆಗೆ ಬರದ ಬಿಸಿ ತಟ್ಟಿದೆ. ಜೀವನದಿಗಳು ಬತ್ತಿ ಹೋಗಿದ್ದು, ನೀರಿನ ಅಭಾವ ಸೃಷ್ಟಿಯಾಗಿದೆ. ಮಳೆ ಬರಲಿ ಎಂದು ಜನರು ದೇವರ ಮೊರೆ ಹೋಗಿದ್ದಾರೆ. ಕುಕ್ಕೆ ಸುಬ್ರಮಣ್ಯ, ಉಡುಪಿ ದೇವಾಲಯಗಳಲ್ಲಿ ಮಳೆಗಾಗಿ ವಿಶೇಷ ಪೂಜೆ ನಡೆಯುತ್ತಿದೆ.
'ಜಿಲ್ಲೆಯಲ್ಲಿ ಪ್ರಸ್ತುತ ನೀರಿನ ಅಭಾವ ಸೃಷ್ಟಿಯಾಗಿದ್ದು, ಇದಕ್ಕೆ ನೀರಿನ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಿರುವುದೇ ಕಾರಣ. ಮುಂದಿನ ದಿನಗಳಲ್ಲಿ ಈ ರೀತಿಯ ಪರಿಸ್ಥಿತಿ ನಿರ್ಮಾಣವಾಗದಂತೆ ಎಚ್ಚರವಹಿಸಲು ಮೂವರು ತಜ್ಞರ ಸಮಿತಿಯನ್ನು ರಚಿಸಿ ವರದಿ ತಯಾರಿಸಿ, ನೀರಾವರಿ ಸಚಿವರಿಗೆ ಸಲ್ಲಿಸಲಾಗುವುದು' ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜಾ ಹೇಳಿದ್ದಾರೆ. [ನೀರಿನ ಅಭಾವ, ನೇತ್ರಾವತಿಗೆ ಕಾವಲು!]

ಸುಬ್ರಹ್ಮಣ್ಯದಲ್ಲಿ ಪ್ರಾರ್ಥನೆ : ನಾಡಿನೆಲ್ಲೆಡೆ ಸಮೃದ್ಧ ಮಳೆಯಾಗುವಂತೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ದೇವರಿಗೆ ಸೋಮವಾರ ವಿಶೇಷ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು ಮತ್ತು ಸೀಯಾಳದ ಅಭಿಷೇಕ ಮಾಡಲಾಯಿತು. ಅಕ್ಷಯ ತದಿಗೆ ಶುಭ ದಿನದಂದು ಕ್ಷೇತ್ರದ ಪ್ರಧಾನ ಅರ್ಚಕ ಸೀತಾರಾಮ ಎಡಪಡಿತ್ತಾಯ ಅವರು ವೈದಿಕ ವಿಧಾನಗಳೊಂದಿಗೆ ಸೀಯಾಳಾಭಿಷೇಕ ನಡೆಸಿದರು, ಮಳೆಗಾಗಿ ಪ್ರಾರ್ಥಿಸಿದರು. [ಮಂಗಳೂರಿನಲ್ಲಿ ಈಗಲೇ ನೀರಿಲ್ಲ, ಇಂಚಾಂಡ ಎಂಚ!]
ಉಡುಪಿಯಲ್ಲಿ ವಿಶೇಷ ಪೂಜೆ : ಉಡುಪಿಯಲ್ಲಿ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಮತ್ತು ಶ್ರೀ ವಿಶ್ವಪ್ರಸನ್ನ ತೀರ್ಥರು ನಾಡಿನ ಸುಭಿಕ್ಷೆಗಾಗಿ ಪ್ರಾರ್ಥಿಸಿ ತಂತ್ರ ಸಾರೋಕ್ತ ಮಂತ್ರಗಳ ವಿಶೇಷ ಜಪಾನುಷ್ಟಾನದಲ್ಲಿ ತೊಡಗಿದ್ದಾರೆ. ಇದೆ ವೇಳೆ ಬರ ಪರಿಸ್ಥಿತಿಯ ಕಾರಣದಿಂದಾಗಿ ಯಾರು ತಮ್ಮಲ್ಲಿರುವ ಗೋವುಗಳನ್ನು ಕಸಾಯಿಖಾನೆಗೆ ಮಾರಬಾರದೆಂದು ಶ್ರೀಗಳು ಮನವಿ ಮಾಡಿದ್ದಾರೆ. [ಉಡುಪಿಯಲ್ಲೂ ನೀರಿಗೆ ಬರ, ಟ್ಯಾಂಕರ್ ಮೂಲಕ ನೀರು ಪೂರೈಕೆ]
ಸಾಮೂಹಿಕ ಸೀಯಾಳಾಭಿಷೇಕ : ಮಂಗಳೂರು ನಗರದ ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥ ಮತ್ತು ಮಳೆಗಾಗಿ ವಿಶೇಷ ಸಾಮೂಹಿಕ ಸೀಯಾಳಾಭಿಷೇಕ ಸೋಮವಾರ ನಡೆಯಿತು.












Click it and Unblock the Notifications