ಶ್ರೀ ಕ್ಷೇತ್ರ ಕಟೀಲಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ 71 ಜೋಡಿ
ಮಂಗಳೂರು, ಮೇ 20: ದಕ್ಷಿಣ ಕನ್ನಡ ಜಿಲ್ಲೆಯ ಶಕ್ತಿ ಕೇಂದ್ರಗಳಲ್ಲಿ ಒಂದಾಗಿರುವ ಶ್ರೀ ಕಟೀಲು ದುರ್ಗಾಪರಮೇಶ್ವರಿ ದೇವಿಯ ಪುಣ್ಯ ಸನ್ನಿಧಿಯಲ್ಲಿ ಭಾನುವಾರ 71 ಜೋಡಿಗಳು ಸರಳ ಸಾಮೂಹಿಕ ವಿವಾಹ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದೆ. ಶುಭ ಭಾನುವಾದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶುಭಕಾರ್ಯಗಳು ನಡೆದಿವೆ.
ಬೆಳಗ್ಗೆ ಆರಂಭವಾದ ವಿವಾಹ ಮುಹೂರ್ತಗಳು ಮಧ್ಯಾಹ್ನ 1ರ ತನಕವೂ ಇದ್ದವು. ಸುಮಾರು 25 ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ದೇವಸ್ಥಾನಕ್ಕೆ ಭೇಟಿ ನೀಡಿದ್ದು, ಸುಮಾರು 10 ಸಾವಿರ ಮಂದಿ ಅನ್ನ ಪ್ರಸಾದ ಸ್ವೀಕರಿಸಿದ್ದಾರೆ. ಮದುವೆಗೆ ಎರಡು ಕೌಂಟರ್ ಸಾಮೂಹಿಕ ವಿವಾಹಗಳನ್ನು ಸುವ್ಯವಸ್ಥಿತವಾಗಿ ನಡೆಸುವುದಕ್ಕಾಗಿ 4 ಮಂದಿ ಅರ್ಚಕ ಪುರೋಹಿತರು, 2 ಕೌಂಟರ್ ಮತ್ತು ನೋಂದಣಿಗೆ ಪ್ರತ್ಯೇಕ ಸಿಬಂದಿ ನೇಮಕ ಮಾಡಲಾಗಿತ್ತು.

ಶ್ರೀ ಕ್ಷೇತ್ರದಲ್ಲಿ ಮದುವೆಗಳಿಗೆ ಬಂದ ದಿಬ್ಬಣಗಳು, ಜನರ ಜತೆಗೆ ರವಿವಾರ ರಜಾದಿನವೂ ಆದುದರಿಂದ ಕಟೀಲು ಪೇಟೆ ಮತ್ತು ರಥಬೀದಿಯ ಪರಿಸರದಲ್ಲಿ ಸಾಕಷ್ಟು ಜನ ಮತ್ತು ವಾಹನ ಸಂದಣಿ ಇತ್ತು. ಸುಗಮ ಸಂಚಾರಕ್ಕಾಗಿ ಕಿನ್ನಿಗೋಳಿ ಕಡೆಯಿಂದ ಬರುವ ವಾಹನಗಳಿಗೆ ಕಾಲೇಜು ಮೈದಾನ ಮತ್ತು ಬಜಪೆ ಕಡೆಯಿಂದ ಬರುವ ವಾಹನಗಳಿಗೆ ಪ್ರೌಢ ಶಾಲೆ, ಹಳೆ ಪ್ರಾಥಮಿಕ ಶಾಲೆಯ ವಠಾರದಲ್ಲಿ ವ್ಯವಸ್ಥೆ ಮಾಡಲಾಗಿತ್ತು.












Click it and Unblock the Notifications