ರಸ್ತೆ ಕಬಳಿಕೆ: ಕುತ್ತೆತ್ತೂರು ನಾಗರಿಕರಿಂದ ಉಗ್ರ ಪ್ರತಿಭಟನೆ
ಮಂಗಳೂರು, : ಪೆರ್ಮುದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುತ್ತೆತ್ತೂರು ಗ್ರಾಮದ ಬೋರುಕಟ್ಟೆ - ನಾಯರ್ ಕೋಡಿ - ಬಾಜಾವು ರಸ್ತೆಯನ್ನು ಕೆಲವು ಖಾಸಗಿ ವ್ಯಕ್ತಿಗಳು ಅಭಿವೃದ್ಧಿಪಡಿಸುವ ನೆಪದಲ್ಲಿ ಸುಮಾರು ಎಂಭತ್ತರಿಂದ ನೂರು ಮನೆಯವರಿಗೆ ತೊಂದರೆ ಉಂಟುಮಾಡಿರುವುದನ್ನು ವಿರೋಧಿಸಿ ಭಾನುವಾರ ಕುತ್ತೆತ್ತೂರಿನ ನಾಗರಿಕರು ಪ್ರತಿಭಟನೆ ನಡೆಸಿದರು.
ಈ ರಸ್ತೆಯಲ್ಲಿ ಹೋಗುವ ಹೆಂಗಸರು, ಹಿರಿಯನಾಗರಿಕರು, ಶಾಲಾ ಮಕ್ಕಳು ಮತ್ತು ಸಾರ್ವಜನಿಕರಿಗೆ ಕನಿಷ್ಠ ಗೌರವ ಕೊಡುವ ಕೆಲಸವನ್ನು ಇಲ್ಲಿ ಕೆಲಸ ಮಾಡುತ್ತಿರುವವರು ಮಾಡುತ್ತಿಲ್ಲ.
ಎಲ್ಲಾ ಅಧಿಕಾರಿಗಳು ಯಾವುದೋ ಕಾರಣಕ್ಕಾಗಿ ಜನರನ್ನು ಮತ್ತು ಜನಪ್ರತಿನಿಧಿಗಳನ್ನು ತಪ್ಪು ಮಾಹಿತಿ ನೀಡಿ ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಪ್ರತಿಭಟನೆಕಾರರು ಆರೋಪಿಸಿದರು.
ಎರಡು ಖಾಸಗಿಯವರಿಗೆ ಸೇರಿದ ಸಂಸ್ಥೆಗಳು ಇಲ್ಲಿ ಸುಮಾರು ನಲುವತ್ತು ಎಕರೆ ಪ್ರದೇಶದಲ್ಲಿ ಭೂ ಆಭಿವೃದ್ಧಿಯನ್ನು ಮಾಡುತ್ತಿರುವುದು, ರಸ್ತೆಯನ್ನು ಕಬಳಿಸಿದ ಬಗ್ಗೆ ಸ್ಥಳೀಯರಿಂದ ಪ್ರತಿಭಟನೆ ವ್ಯಕ್ತವಾಗಿತ್ತು
ಇದರಿಂದ ಒಂದು ಸಂಸ್ಥೆಯವರು ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರ ಸಮಕ್ಷಮದಲ್ಲಿ ಕಂದಾಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಮುಂದಿನ ದಿನಗಳಲ್ಲಿ ರಸ್ತೆಯನ್ನು ನಿರ್ಮಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಮಾಡಲಾಗುವುದು ಎಂದು ಪಂಚನಾಮೆ ಮೂಲಕ ಬರೆದು ಕೊಟ್ಟಿದ್ದರು.
ಆದರೆ, ಇದರ ಪಕ್ಕದಲ್ಲಿ ಇನ್ನೊಂದು ಖಾಸಗಿ ಸಂಸ್ಥೆಗೆ ಸೇರಿದವರು ಭೂಮಿಯನ್ನು ಅಭಿವೃದ್ಧಿಪಡಿಸುತ್ತಿದ್ದು ಅವರು ಬೋರುಕಟ್ಟೆ - ಬಾಜಾವು ಡಾಮಾರು ರಸ್ತೆಯನ್ನು ಸಂಪೂರ್ಣವಾಗಿ ಕಬಳಿಸಿ ರಸ್ತೆಯೇ ಇಲ್ಲದಂತೆ ಮಾಡಿ ಬಿಟ್ಟಿದ್ದಾರೆ.
ಬೋರುಕಟ್ಟೆಯಿಂದ ನಾಯರ್ಕೋಡಿ ಮತ್ತು ಬಾಜಾವಿಗೆ ಇದ್ದ ಸರಕಾರಿ ರಸ್ತೆಯನ್ನು ಸಂಪೂರ್ಣವಾಗಿ ಹಾಳುಗೆಡವಿದ ಇವರು ಮೊದಲು ಇಲ್ಲಿ ಸುಸಜ್ಜಿತವಾದ ರಸ್ತೆಯನ್ನು ಮಾಡಿಕೊಡಬೇಕು.
ಅಲ್ಲಿಯವರೆಗೆ ನಮ್ಮ ಹೋರಾಟ ಮುಂದುವರಿಯುತ್ತದೆ. ಜನರನ್ನು ಎದುರು ಹಾಕಿಕೊಂಡು, ತೊಂದರೆ ನೀಡಿ ಖಾಸಗಿಯವರು ಯಾವುದೇ ಕೆಲಸ ಮಾಡುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ತಾಲೂಕು ಪಂಚಾಯ್ ಸದಸ್ಯೆ ಶಶಿಕಲಾ ಹೇಳಿದರು.
ಕುತ್ತೆತ್ತೂರಿನ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿ ರಸ್ತೆ ಧ್ವಂಸ ಮಾಡಿದವರ ವಿರುದ್ಧ ಘೋಷಣೆ ಕೂಗಿದರು.