ಆರಕ್ಷಕರಿಗೊಂದು ಶುಭಾಶಯ ಹೇಳಲು ನಮ್ಮೊಂದಿಗೆ ಬನ್ನಿ
ಮಂಗಳೂರು, ನವೆಂಬರ್, 25: ನೀವು ನಿತ್ಯ ಬೆಳಿಗ್ಗೆ ಎದ್ದಕೂಡಲೇ ಸೈನಿಕರ ಮುಖ ನೋಡಲಾಗುವುದಿಲ್ಲ. ಆದರೆ ದಿನನಿತ್ಯ ಒಂದಲ್ಲ ಒಂದು ಸಾರಿ ಯಾರಾದರೂ ಒಬ್ಬ ಪೊಲೀಸ್ ಕಾನ್ ಸ್ಟೇಬಲ್ ಅಥವಾ ಪೊಲೀಸ್ ಅಧಿಕಾರಿಯನ್ನು ನೋಡಿಯೇ ನೋಡಿರುತ್ತಿರಿ ಅಥವಾ ಕನಿಷ್ಠ ರಸ್ತೆಯಲ್ಲಿ ಹೋಗುವಾಗ ಎಲ್ಲಿಯಾದರೂ ಒಂದು ಕಡೆ ಟ್ರಾಫಿಕ್ ಪೊಲೀಸರ ಮುಖದರ್ಶನವಾದರೂ ಆಗುತ್ತದೆ.
ಸೈನಿಕರು ನಮ್ಮ ದೇಶದ ಗಡಿಯನ್ನು ಕಾಯುತ್ತಿದ್ದರೆ ಪೊಲೀಸರು ನಮ್ಮ ಊರಿನ ಗಡಿಯನ್ನು ಕಾಯುತ್ತಲೆ ಇರುತ್ತಾರೆ. ನಾವು ನೀವು ನಿತ್ಯ ರಾತ್ರಿ ನೆಮ್ಮದಿಯಿಂದ ನಿದ್ರೆ ಮಾಡಬೇಕಾದರೆ ಸೈನಿಕರಷ್ಟೇ, ಪೊಲೀಸರು ಕೂಡ ಕಾರಣ. ಊರಿನಲ್ಲಿ ಅಥವಾ ನಿಮ್ಮ ಬೀದಿಯಲ್ಲಿ ಏನಾದರೂ ಘರ್ಷಣೆ ಅಥವಾ ಅಪರಾಧಗಳು ನಡೆದಾಗ ಅಥವಾ ನಡೆಯಬಹುದು ಎನ್ನುವ ಆತಂಕ ನಿಮ್ಮಲ್ಲಿ ಕಂಡುಬಂದಾಗ ನೀವು ಮೊದಲು ನೆನಪಿಸಿಕೊಳ್ಳುವುದು ಪೊಲೀಸರನ್ನು.[ಉಗ್ರರು ಮುಂಬೈ ಮೇಲೆ ದಾಳಿ ಮಾಡಿದ್ದೇಕೆ?]

ಇಂಥ ಪೊಲೀಸರಿಗೆ ನಮನ ಸಲ್ಲಿಕೆ ಮಾಡುವುದು ನಮ್ಮೆಲ್ಲರ ಕರ್ತವ್ಯ. ಪೊಲೀಸ್ ಪೇದೆಗಳಿಗೆ ಸಿಹಿ ಹಂಚಿ ಶುಭಾಶಯ ವಿನಿಮಯ ಮಾಡಿಕೊಳ್ಳಲು ಯುವ ಬ್ರೀಗೇಡ್ ಒಂದು ದಿನವನ್ನು ಮೀಸಲಿಟ್ಟಿದೆ. ನವೆಂಬರ್ 26 ರಂದು ಮಂಗಳೂರಿನ ಪೊಲೀಸ್ ಠಾಣೆಗಳಿಗೆ ಹೋಗಿ ಅಲ್ಲಿ ಪೊಲೀಸ್ ಸಿಬ್ಬಂದಿಗಳಿಗೆ ಮತ್ತು ಅಧಿಕಾರಿಗಳಿಗೆ ಹೂ, ಸಿಹಿ ತಿಂಡಿಯನ್ನು ಕೊಟ್ಟು ನಿಮ್ಮ ನಮ್ಮ ಬಾಂಧ್ಯವ್ಯ ಹೀಗೆ ಮುಂದುವರೆಯಲಿ ಎಂದು ಹಾರೈಸಿ ಬರಲಿದ್ದೇವೆ.
ನವೆಂಬರ್ 26 ಏಕೆ?
ಅಷ್ಟಕ್ಕೂ ನವೆಂಬರ್ 26 ಅನ್ನೇ ಪೊಲೀಸರಿಗೆ ವಿಶ್ ಮಾಡುವ ದಿನವನ್ನಾಗಿ ಆಚರಿಸಬೇಕು, ಯಾಕೆ ಎನ್ನುವ ಯೋಚನೆ ನಿಮ್ಮಲ್ಲಿ ಬರಬಹುದು. ಆವತ್ತು ತುಕಾರಾಮ್ ಒಂಬ್ಲೆ ಅವರು ದೇಶಕ್ಕಾಗಿ ಮಡಿದ ದಿನ. ಹೌದು, ಉಗ್ರ ಕಸಬ್ ನನ್ನು ಕೈಯಾರೆ ಹಿಡಿದು ಮತ್ತಷ್ಟು ಸಾವು, ನೋವುಗಳನ್ನು ನಿಲ್ಲಿಸುವ ಮೂಲಕ, ಪಾಕಿಸ್ತಾನದ ಉಗ್ರಚಟುವಟಿಕೆಗಳಿಗೆ ಉತ್ತರ ನೀಡುವಂತೆ ನಮ್ಮ ಕೈಯಲ್ಲಿ ಸಾಕ್ಷ್ಯ ಕೊಟ್ಟು ಹುತಾತ್ಮರಾದವರು ಪೊಲೀಸ್ ಕಾನ್ಸ್ ಟೇಬಲ್ ತುಕಾರಾಮ್ ಒಂಬ್ಲೆ.[ಮುಂಬೈ ದಾಳಿ: ಸಿಕ್ಕಿಬಿದ್ದ್ ಉಗ್ರ ಕಸಬ್ ಯಾರು?]
ತುಕಾರಾಮ್ ದೇಶಕ್ಕಾಗಿ ಮಾಡಿದ ತ್ಯಾಗವನ್ನು ದೇಶ ನೆನೆಯಲೇ ಬೇಕು. ಯುವಬ್ರೀಗೇಡ್ ಪ್ರತಿಯೊಬ್ಬ ಪೊಲೀಸರಲ್ಲೂ ತುಕಾರಾಮ್ ಒಂಬ್ಲೆ ಅವರನ್ನು ಕಾಣುತ್ತದೆ. ಅದೇ ಕಿಚ್ಚು, ಅದೇ ಹುಮ್ಮಸ್ಸು, ಅದೇ ನ್ಯಾಯಪರತೆ, ಅದೇ ವೃತ್ತಿನಿಷ್ಠತೆ, ಅದೇ ಪ್ರಾಮಾಣಿಕತೆ ಎಲ್ಲ ಪೊಲೀಸರಲ್ಲಿಯೂ ಇನ್ನಷ್ಟು ಹೆಚ್ಚಾಗಲಿ ಎಂದು ಕೋರುತ್ತಾ, ಒಬ್ಬ ಸಹೃದಯಿ ನಾಗರಿಕರಾಗಿ ನೀವು ನವೆಂಬರ್ 26 ರಂದು ನಮ್ಮೊಂದಿಗೆ ಸೇರಿಕೊಳ್ಳಿ, ಪೊಲೀಸರಿಗೊಂದು ಶುಭಾಶಯ ಹೇಳಿ ಬರೋಣ...












Click it and Unblock the Notifications