ಗೋವುಗಳ ಪಾಲಿನ ಆಪದ್ಭಾಂಧವ ಮಂಗಳೂರಿನ ಪ್ರಕಾಶ್ ಶೆಟ್ಟಿ
ಮಂಗಳೂರು, ಫೆಬ್ರವರಿ 05: ಇತ್ತೀಚಿನ ದಿನಗಳಲ್ಲಿ ಹೈನುಗಾರಿಕೆ ಅಂದರೆ ಮೂಗು ಮುರಿಯೋರೆ ಹೆಚ್ಚು. ಆದರೆ ಮಂಗಳೂರಿನ ಯುವಕನೊಬ್ಬ ಹೈನುಗಾರಿಕೆ ಜೊತೆಗೆ ಗೋ ರಕ್ಷಣೆಯ ಕಾರ್ಯದಲ್ಲೂ ತೊಡಗಿದ್ದಾರೆ. ತಮ್ಮ ಸಾಕು ಹಸುಗಳಿಗೆ ಇವರು ನೀಡಿರೋ ಸ್ವಾತಂತ್ರ್ಯ ಕಂಡರೆ ನಿಮಗೆ ಅಚ್ಚರಿಯಾಗುತ್ತದೆ. ಗೋ ಸಾಕಾಣಿಕೆಯಲ್ಲಿ ಇವರದ್ದು ಶತಕ ಮೀರಿದ ಸಾಧನೆ.
ಹೌದು, ಮಂಗಳೂರಿನ ಪ್ರಕಾಶ್ ಶೆಟ್ಟಿ ಐದು ವರುಷಗಳ ಹಿಂದೆ ಸಾಕಲೆಂದು ಕರುವೊಂದನ್ನು ತಂದಿದ್ದರು. ಆ ಬಳಿಕ ಒಂದು, ಮತ್ತೊಂದು ಅಂಥ ಹಸುಗಳನ್ನು ಸಾಕುತ್ತಲೇ ಬಂದಿದ್ದಾರೆ. ತನ್ನ ಸ್ವಂತ ಉದ್ದಿಮೆಯ ಜೊತೆಗೆ ಬಿಡುವಿನ ವೇಳೆಯಲ್ಲಿ ಹಸುಗಳ ಜೊತೆಗೆ ಬೆರೆಯುತ್ತಾ ಬಂದರು.
ಈ ಹಸುಗಳ ಮೇಲಿನ ಮೋಹ ಅದೆಲ್ಲಿ ತನಕ ಮುಂದುವರೆಯುತ್ತಾ ಬಂತೆಂದರೆ ಇದೀಗ ಹಸುಗಳ ಸಂಖ್ಯೆ ಶತಕದ ಗಡಿ ದಾಟಿದೆ. 150 ಕ್ಕೂ ಅಧಿಕ ಹಸುಗಳನ್ನು ಹೊಂದಿರೋ ಉದ್ಯಮಿ ಪ್ರಕಾಶ್ ಶೆಟ್ಟಿ ಇದೀಗ ಫುಲ್ ಟೈಂ ಹೈನುಗಾರಿಕೆಯಲ್ಲಿಯೇ ತೊಡಗಿಕೊಂಡಿದ್ದಾರೆ.
ಮಂಗಳೂರು ನಗರದಲ್ಲಿ ವಾಸವಾಗಿರೋ ಇವರು ನಗರದ ಹೊರವಲಯ ಮರವೂರಿನಲ್ಲಿ ಹಸುಗಳ ವಾಸ್ತವ್ಯಕ್ಕಾಗಿ 'ಕಪಿಲ ಪಾರ್ಕ್' ಅಂತಲೇ ಗೋಸಾಕಾಣಿಕೆ ಕೇಂದ್ರವೊಂದನ್ನು ನಿರ್ಮಿಸಿದ್ದಾರೆ. ಮುಂದೆ ಓದಿ...

ಕಪಿಲ ಪಾರ್ಕ್ ಕೊಟ್ಟಿಗೆ ಸೇರುವ ಹಸುಗಳು
ದೇಶಿ ತಳಿಯ ಹಸುಗಳನ್ನು ಸಾಕೋ ಪ್ರಕಾಶ್ ಶೆಟ್ಟಿ ಅವರ ಬಳಿ ಜಗತ್ತಿನಲ್ಲಿಯೇ ಅತೀ ಕಡಿಮೆ ಸಂಖ್ಯೆಯಲ್ಲಿರುವ ಕಪಿಲ, ಅಮೃತ್ ಮಹಲ್, ಜವಾರಿ, ಗೀರ್, ಮಲೆನಾಡು ಗಿಡ್ಡ, ಕಾಸರಗೋಡು ಗಿಡ್ಡ, ಕೃಷ್ಣವೇಣಿ ಯಂತಹ ಹಲವು ತಳಿಯ ಹಸುಗಳಿವೆ. ಅಲ್ಲದೇ, ಇಲ್ಲಿ ಸಾಕುವ ಒಂದೆರಡು ಗೋವುಗಳ ಹೊರತು ಹೆಚ್ಚಿನ ಗೋವುಗಳಿಗೆ ಮೂಗುದಾರವಾಗಲೀ, ಹಗ್ಗವಾಗಲೀ ಹಾಕದೇ ಸ್ವತಂತ್ರವಾಗಿ ಬಿಡಲಾಗುತ್ತದೆ. ಬೆಳಗ್ಗೆ ಮೇಯಲು ಹೋಗುವ ಹಸುಗಳು ಸಂಜೆಯಾಗುತ್ತಲೇ ಅವುಗಳಾಗಿಯೇ ಕಪಿಲ ಪಾರ್ಕ್ ನ ಕೊಟ್ಟಿಗೆ ಸೇರುತ್ತವೆ.

ಲಾಭದ ಲೆಕ್ಕಾಚಾರ ಹಾಕುವುದಿಲ್ಲ
ಇವುಗಳನ್ನು ನೋಡಿಕೊಳ್ಳಲು ಇಬ್ಬರಷ್ಟೇ ಕಾರ್ಮಿಕರಿದ್ದು, ಖುದ್ದು ಪ್ರಕಾಶ್ ಶೆಟ್ಟಿಯವರು ಗೋಸೇವೆಯಲ್ಲಿ ತೊಡಗುತ್ತಾರೆ. ದೇಶಿ ತಳಿಯ ಈ ಹಸುಗಳ ಹಾಲಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದೆ. ಆದರೆ ಯಾವುದನ್ನೂ ಕಮರ್ಷಿಯಲ್ ದೃಷ್ಟಿಯಲ್ಲಿ ನೋಡದ ಪ್ರಕಾಶ್ ಶೆಟ್ಟಿಯವರು, ಲಾಭ ಲೆಕ್ಕಾಚಾರ ಮಾಡೋ ಬದಲು ನೈಜ ಗೋರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಕಸಾಯಿಖಾನೆ ಸೇರಬೇಕಿದ್ದ ಹಸುಗಳು ಕೊಟ್ಟಿಗೆಗೆ
ಗೋರಕ್ಷಣೆ ವಿಚಾರದಲ್ಲಿ ಪ್ರಕಾಶ್ ಶೆಟ್ಟಿಯವರದ್ದು ಯಾವ ಸಂಘಟನೆ ಮುಖಂಡರೂ ಮಾಡದೆ ಇರೋದನ್ನು ಮಾಡಿ ತೋರಿಸಿದ್ದಾರೆ. ಕಸಾಯಿಖಾನೆ ಸೇರಬೇಕಿದ್ದ ಅದೆಷ್ಟೋ ದನ ಕರುಗಳು ಇವರ ಕೊಟ್ಟಿಗೆ ಸೇರಿ ಈಗಲೂ ಸ್ವಚ್ಛಂದವಾಗಿ ಉಸಿರಾಡುತ್ತಿವೆ.

ಗೋಶಾಲೆಯ ಗೋವುಗಳಿಗೂ ಆಶ್ರಯ
ಕಸಾಯಿಖಾನೆಗೆ ತೆರಳುತ್ತಿದ್ದ ಇವರು ಅಲ್ಲಿ ವಧೆಯಾಗಬಹುದಾದ ಆಕಳನ್ನು ಖರೀದಿಸಿ ತರುತ್ತಿದ್ದರು.ಮಂಗಳೂರು ಪರಿಸರದಲ್ಲಿ ಎಲ್ಲೇ ಗೋ ರಕ್ಷಣೆ ಮಾಡಿದಾಗ ಪೊಲೀಸರು ಆ ಗೋವುಗಳನ್ನು ತಂದು ಇದೇ ಕಪಿಲ ಪಾರ್ಕ್ ಗೆ ತಂದು ಬಿಡುತ್ತಾರೆ. ಸರಕಾರದ ಯಾವುದೇ ಅನುದಾನ ಪಡೆಯದ ಪ್ರಕಾಶ್ ಶೆಟ್ಟಿಯವರು ಒಂದೊಮ್ಮೆ ಗೋಶಾಲೆಗಳು ವಾಪಾಸ್ ಕಳಿಸಿದ ಗೋವುಗಳಿಗೂ ತಮ್ಮ ಕೊಟ್ಟಿಗೆಯಲ್ಲಿ ಆಶ್ರಯ ನೀಡಿದ್ದಾರೆ.












Click it and Unblock the Notifications