ಕೊರೊನಾ ಎಫೆಕ್ಟ್; ಮಂಗಳೂರು ಯುವಕನ ಮದುವೆ ಮುಂದಕ್ಕೆ...

ಮಂಗಳೂರು, ಫೆಬ್ರವರಿ 08: ನಿನ್ನೆವರೆಗೂ ಸಂಭ್ರಮ ಮನೆಮಾಡಿದ್ದ ಆ ಮನೆಯಲ್ಲೀಗ ಆತಂಕ ತುಂಬಿದೆ. ಇನ್ನೇನು ಮಗ ಬರ್ತಾನೆ, ನಾಳೆಯ ಮದುವೆಗೆ ಮನೆ ಶೃಂಗರಿಸಬೇಕು ಅಂದುಕೊಂಡಿದ್ದ ತಾಯಿ ಕಣ್ಣೀರು ಹಾಕುತ್ತಿದ್ದಾರೆ. ಹೌದು... ಚೀನಾದಲ್ಲಿ ಆತಂಕ ಸೃಷ್ಟಿಸಿರುವ ಕೊರೊನಾ ವೈರಸ್, ಮದುವೆಗೆ ಅಣಿಯಾಗಿದ್ದ ಈ ಮನೆ ಮಂದಿಯ ಸಂಭ್ರಮವನ್ನೇ ಕಸಿದುಬಿಟ್ಟಿದೆ.

ಚೀನಾ ದೇಶದಾದ್ಯಂತ ಭೀತಿ ಸೃಷ್ಟಿಸಿರುವ ಕೊರೊನಾ ವೈರಸ್ ಕರಾವಳಿ ಜನರಲ್ಲಿ ಭಯ ತಂದಿದೆ. ಸಿಂಗಾಪುರ, ಹಾಂಕಾಂಗ್, ಚೀನಾದಲ್ಲಿ ನೌಕರಿ ಕಂಡುಕೊಂಡಿರುವ ಕರಾವಳಿಯ ಹಲವರ ಬಗ್ಗೆ ಆತಂಕ ಎದುರಾಗಿದ್ದು, ಅವರನ್ನು ಸುರಕ್ಷಿತವಾಗಿ ಮರಳಿ ಕರೆ ತರುವಂತೆ ಕುಟುಂಬಸ್ಥರು ಸರ್ಕಾರದ ಮೊರೆ ಇಟ್ಟಿದ್ದಾರೆ. ಇದೇ ವೇಳೆ, ಹಾಂಕಾಂಗ್ ನಲ್ಲಿ ಸಿಕ್ಕಿಬಿದ್ದಿರುವ ಮಂಗಳೂರು ಮೂಲದ ಗೌರವ್ ಎಂಬ ಯುವಕನ ಮದುವೆಯನ್ನು ಮನೆಯವರು ರದ್ದು ಮಾಡಿದ್ದು, ಮದುವೆ ಮನೆಯಲ್ಲಿ ಆತಂಕ ಮೂಡಿಸಿದೆ.

 ಹಡಗಿಗೆ ತಡೆಯೊಡ್ಡಿರುವ ಹಾಂಕಾಂಗ್

ಹಡಗಿಗೆ ತಡೆಯೊಡ್ಡಿರುವ ಹಾಂಕಾಂಗ್

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಮದುವೆ ಗಂಡು ಗೌರವ್ ನಾಲ್ಕು ದಿನಗಳ ಹಿಂದೆ ಮನೆ ತಲುಪಬೇಕಿತ್ತು. ಆದರೆ, ಗೌರವ್ ಕೆಲಸಕ್ಕಿರುವ ಹಾಂಕಾಂಗ್, ಸಿಂಗಾಪುರ, ಥೈವಾನ್ ಮಧ್ಯೆ ಸಂಚರಿಸುವ ಐಷಾರಾಮಿ ಹಡಗು ಹಾಂಕಾಂಗ್ ಸಮುದ್ರ ಮಧ್ಯೆ ಸಿಕ್ಕಿಬಿದ್ದಿದೆ. ಭಾರತ, ಮಲೇಷ್ಯಾ, ಚೀನಾ, ಸಿಂಗಾಪುರ ಹೀಗೆ ಹಲವು ದೇಶಗಳ 1700ಕ್ಕೂ ಹೆಚ್ಚು ಪ್ರವಾಸಿಗರನ್ನು ಹೊಂದಿರುವ ಹಡಗನ್ನು ಬಂದರಿಗೆ ಬರದಂತೆ ಹಾಂಕಾಂಗ್ ತಡೆ ಹೇರಿದ್ದು, ಹಡಗು ಸಮುದ್ರದಲ್ಲಿ ಜಲ ದಿಗ್ಬಂಧನದಲ್ಲಿ ಸಿಲುಕಿದೆ.

 ಮದುವೆ ರದ್ದು ಮಾಡಿದ ಕುಟುಂಬಸ್ಥರು

ಮದುವೆ ರದ್ದು ಮಾಡಿದ ಕುಟುಂಬಸ್ಥರು

ಹಡಗಿನಲ್ಲಿರುವ ಪ್ರವಾಸಿಗರಿಗೆ ಕೊರೊನಾ ಸೋಂಕು ತಗುಲಿರುವ ಶಂಕೆಯಿಂದ ಒಂದಷ್ಟು ದಿನ ಸಮುದ್ರದಲ್ಲೇ ಇರುವಂತೆ ಹಾಂಕಾಂಗ್ ಆಡಳಿತ ಸೂಚನೆ ನೀಡಿದೆ. ಹೀಗಾಗಿ ಗೌರವ್ ಸಕಾಲದಲ್ಲಿ ಹಿಂತಿರುಗಲು ಸಾಧ್ಯವಾಗದ್ದರಿಂದ ನಾಳೆ ನಿಗದಿಯಾಗಿದ್ದ ಆತನ ಮದುವೆಯನ್ನು ಕುಟುಂಬಸ್ಥರು ರದ್ದುಪಡಿಸಿದ್ದಾರೆ. ಮಂಗಳೂರು ಹೊರವಲಯದ ತೊಕ್ಕೊಟ್ಟು ಬಳಿಯ ಕುಂಪಲ ನಿವಾಸಿಯಾಗಿರುವ ಗೌರವ್, ಎಂಟು ವರ್ಷಗಳ ಹಿಂದೆ ಸಿಂಗಾಪುರಕ್ಕೆ ತೆರಳಿ ಹಡಗಿನಲ್ಲಿ ಕೆಲಸಕ್ಕೆ ಸೇರಿದ್ದರು.

 ಶುಭಕಾರ್ಯ ತಡೆದ ಕೊರೊನಾ

ಶುಭಕಾರ್ಯ ತಡೆದ ಕೊರೊನಾ

ಎರಡು ವರ್ಷಗಳ ಹಿಂದೆ ಮನೆ ಕಟ್ಟಿ, ಮದುವೆಗೆ ರೆಡಿಯಾಗುವಷ್ಟರಲ್ಲಿ ತಂದೆ ತೀರಿಕೊಂಡಿದ್ದರು. ಇದೀಗ ಮದುವೆ ಕಾರ್ಯಕ್ಕೆ ಮುಹೂರ್ತ ಹತ್ತಿರ ಆಗುತ್ತಿದ್ದಂತೆ ಕೊರೊನಾ ಕಾರಣಕ್ಕೆ ಶುಭಕಾರ್ಯವನ್ನು ಮನೆಯವರು ಮುಂದೂಡಿದ್ದಾರೆ. ಗೌರವ್ ಸೇರಿದಂತೆ ಹಡಗಿನಲ್ಲಿರುವ ಯಾರಿಗೂ ಕೊರೊನಾ ಸೋಂಕು ಇರುವ ಬಗ್ಗೆ ಇನ್ನೂ ದೃಢಪಟ್ಟಿಲ್ಲ. ಈ ಬಗ್ಗೆ ದಿನವೂ ಮನೆಯವರ ಜೊತೆ ಸಂಪರ್ಕದಲ್ಲಿರುವ ಗೌರವ್ ಖಚಿತಪಡಿಸಿದ್ದಾರೆ. ಹೀಗಾಗಿ ಜಿಲ್ಲಾಡಳಿತ ಮತ್ತು ಭಾರತ ಸರಕಾರ ಗೌರವನ್ನು ಸುರಕ್ಷಿತವಾಗಿ ಕರೆತರಲು ಶ್ರಮಿಸಬೇಕೆಂದು ಮನೆಯವರು ಒತ್ತಾಯಿಸಿದ್ದಾರೆ.

 ಕರಾವಳಿಯಲ್ಲಿ ತೀವ್ರ ನಿಗಾ

ಕರಾವಳಿಯಲ್ಲಿ ತೀವ್ರ ನಿಗಾ

ಚೀನಾದಿಂದ ಆಗಮಿಸುವ ಭಾರತೀಯರ ಬಗ್ಗೆ ಕರಾವಳಿಯಲ್ಲಿ ತೀವ್ರ ನಿಗಾ ಇಡಲಾಗಿದೆ. ಏರ್ ಪೋರ್ಟ್ ಮತ್ತು ಬಂದರಿನಲ್ಲಿ ವಿಶೇಷ ತಪಾಸಣೆಗೆ ಪ್ರತ್ಯೇಕ ವ್ಯವಸ್ಥೆ ಏರ್ಪಡಿಸಲಾಗಿದೆ. ಕೊರೊನಾ ಸೋಂಕು ದೃಢಪಟ್ಟಲ್ಲಿ ಅವರ ಚಿಕಿತ್ಸೆಗೆಂದು ಮಂಗಳೂರಿನ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್ ರಚಿಸಲಾಗಿದೆ. ಒಟ್ಟಿನಲ್ಲಿ ಮದುವೆ ಗಂಡು ಗೌರವ್ ಸೇರಿದಂತೆ ಎಲ್ಲ ಭಾರತೀಯರು ಸುರಕ್ಷಿತವಾಗಿ ಮರಳಿ ಬರಲಿ ಅನ್ನುವ ಹಾರೈಕೆ ಎಲ್ಲರದ್ದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+