ಕುವೈತ್ ನಲ್ಲಿ ಗೃಹ ಬಂಧನದಲ್ಲಿದ್ದ ಮಂಗಳೂರಿನ ಮಹಿಳೆ ರಕ್ಷಣೆ
ಮಂಗಳೂರು ಜುಲೈ 5: ಕುವೈತ್ನಲ್ಲಿ ಗೃಹ ಬಂಧನದಲ್ಲಿದ್ದು, ನರಕ ಯಾತನೆ ಅನುಭವಿಸುತ್ತಿದ್ದ ಮಂಗಳೂರು ಮೂಲದ ಮಹಿಳೆಯೊಬ್ಬರನ್ನು ರಕ್ಷಿಸಲಾಗಿದೆ. ಮಂಗಳೂರಿನ ಕಸಬಾ ಬೆಂಗ್ರೆ ನಿವಾಸಿ ರೇಷ್ಮಾ ಸುವರ್ಣ ಅವರನ್ನು ಗೃಹ ಬಂಧನದಲ್ಲಿರಿಸಿದ್ದ ಕೆಲಸದ ಸ್ಥಳದಿಂದ ಬಿಡುಗಡೆಗೊಳಿಸಲಾಗಿದೆ. ಸದ್ಯ ಕುವೈತ್ನ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಆಕೆಗೆ ಪುನರ್ವಸತಿ ಕೇಂದ್ರದಲ್ಲಿ ಆಶ್ರಯ ನೀಡಿದ್ದಾರೆ. ಜತೆಗೆ ಭಾರತಕ್ಕೆ ವಾಪಸ್ ಕಳುಹಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ.
ಕುವೈತ್ನಲ್ಲಿ ಕೆಲಸ ಒದಗಿಸುವುದಾಗಿ ಮೋಸ ಮಾಡಿದ್ದ ಏಜೆಂಟ್ ಜಬ್ಬಾರ್ ಹಾಗೂ ಮೂಡುಬಿದಿರೆಯ ಅನ್ವರ್ ವಿರುದ್ಧ ರಾಯಭಾರ ಕಚೇರಿಯಲ್ಲಿ ದೂರು ದಾಖಲಾಗಿದೆ. ಜಬ್ಬಾರ್ ಕುವೈತ್ನಲ್ಲೇ ವಾಸವಾಗಿದ್ದು, ಆತ 1 ಸಾವಿರ ದಿನಾರ್ ಪಡೆದು ಮಹಿಳೆಯನ್ನು ವೃದ್ಧ ದಂಪತಿ ಮನೆಯಲ್ಲಿ ಬಿಟ್ಟು ಬಂದಿದ್ದ ಎಂದು ಆರೋಪಿಸಲಾಗಿದೆ.
ಕುವೈತ್ ನಲ್ಲಿನ 35 ಯುವಕರು ಶೀಘ್ರ ಮಂಗಳೂರಿಗೆ-ವೇದವ್ಯಾಸ್ ಕಾಮತ್
ರೇಷ್ಮಾ ಸುವರ್ಣ ಅವರನ್ನು ಸಿನಿಮೀಯ ರೀತಿಯಲ್ಲಿ ರಕ್ಷಿಸುವಲ್ಲಿ ಮಂಗಳೂರು ಮೂಲದ ರಾಜ್ ಭಂಡಾರಿ, ಮಾಧವ ನಾಯ್ಕ, ದಿನೇಶ್ ಸುವರ್ಣ ಹಾಗೂ ಮೋಹನ್ದಾಸ್ ಕಾಮತ್ ಯಶಸ್ವಿಯಾಗಿದ್ದಾರೆ.
ರೇಷ್ಮಾ ಸುವರ್ಣ ಕೆಲಸಕ್ಕೆ ಇದ್ದ ಪ್ರದೇಶದಲ್ಲಿ ಶ್ರೀಮಂತರೇ ಹೆಚ್ಚಿದ್ದು, ಟ್ಯಾಕ್ಸಿ ಓಡಾಟ ಕಡಿಮೆ. ಹೀಗಾಗಿ ರಾಜ್ ಭಂಡಾರಿ ನೇತೃತ್ವದಲ್ಲಿ ಕಾರಿನಲ್ಲಿ ತೆರಳಿ, ಮಹಿಳೆಯನ್ನು ಭಾರತೀಯ ರಾಯಭಾರ ಕಚೇರಿಗೆ ಕರೆತಂದು ರಕ್ಷಿಸಲಾಗಿದೆ.
ಪುತ್ತೂರಿನಲ್ಲಿ ಅತ್ಯಾಚಾರ ಪ್ರಕರಣ; ಬೆದರಿಕೆ ಹಾಕಿದ್ದ ಆರೋಪಿಗಳು
ರೇಷ್ಮಾ ಸುವರ್ಣ ಪಾಸ್ಪೋರ್ಟ್, ದಂಪತಿ ಬಳಿ ಇದ್ದು, ಅದನ್ನು ಏಜೆಂಟ್ ಮೂಲಕ ತರಿಸುವ ವ್ಯವಸ್ಥೆಯನ್ನು ರಾಯಭಾರ ಕಚೇರಿ ನಡೆಸಲಿದೆ. ಸಿಗದಿದ್ದರೆ ಔಟ್ಪಾಸ್ ಮೂಲಕ ಆಕೆಯನ್ನು ಭಾರತಕ್ಕೆ ಕಳುಹಿಸಲು ರಾಯಭಾರ ಕಚೇರಿಗೆ ಅಧಿಕಾರವಿದೆ. ಈ ಕುರಿತ ಮುಂದಿನ ವಿಚಾರಣೆ ಭಾನುವಾರ ನಡೆಯಲಿದೆ ಎಂದು ತಿಳಿದುಬಂದಿದೆ.