ಮಂಗಳೂರು ರಥೋತ್ಸವ: ಕಾಶೀ ಮಠಾಧೀಶರಿಗೆ ಭವ್ಯ ಸ್ವಾಗತ
ಮಂಗಳೂರು, ಫೆ 7: ಪ್ರಸಿದ್ಧ ಮಂಗಳೂರು ರಥೋತ್ಸವ ಪ್ರಯುಕ್ತ ವಿಳಂಬಿ ನಾಮ ಸಂವತ್ಸರದ ಶ್ರೀ ದೇವರ ರಥೋತ್ಸವ ನಗರದ ರಥಬೀದಿಯಲ್ಲಿ ನಡೆಯಲಿದೆ.
ಶ್ರೀ ಕಾಶೀ ಮಠ ಸಂಸ್ಥಾನದ ಪೀಠಾಧಿಪತಿಗಳಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರು ಗುರುವಾರದಂದು ತಮ್ಮ ಹುಬ್ಬಳ್ಳಿ ಮೊಕ್ಕಾಂ ನಿಂದ ಮಂಗಳೂರಿಗೆ ಆಗಮಿಸಿದರು. ಈ ಪ್ರಯುಕ್ತ ರಥಬೀದಿಯಲ್ಲಿರುವ ಸ್ವದೇಶೀ ಸ್ಟೋರ್ಸ್ ಬಳಿಯಿಂದ ಶ್ರೀ ಸಂಸ್ಥಾನದ ಆರಾಧ್ಯ ದೇವರಾದ ಶ್ರೀ ವ್ಯಾಸ ರಘುಪತಿ ನರಸಿಂಹ ದೇವರ ಸಹಿತ ಪರಮ ಪೂಜ್ಯ ಗುರುವರ್ಯರನ್ನು ಭವ್ಯವಾಗಿ ಸ್ವಾಗತಿಸಲಾಯಿತು.
ವಿವಿಧ ಬಿರುದು ಬಾವಳಿಗಳನ್ನೊಳಗೊಂಡ ವೇದ ಘೋಷ, ಪೂರ್ಣ ಕುಂಭ ಕಲಶ ಹಾಗೂ ವಿವಿಧ ವಾದ್ಯ ಘೋಷಗಳೊಂದಿಗೆ ವಿಶೇಷವಾಗಿ ಅಲಂಕರಿಸಲಾದ ಅಡ್ಡ ಪಲ್ಲಕಿಯಲ್ಲಿ ಶ್ರೀಗಳವರು ವಿರಾಜಮಾನರಾಗಿದ್ದು ಭವ್ಯ ಸ್ವಾಗತ ನೀಡಲಾಯಿತು.

ಇದೇ ಬರುವ ರಥಸಪ್ತಮಿ ಮಂಗಳವಾರ (ಫೆ 12) ದಂದು ಮಂಗಳೂರು ರಥೋತ್ಸವ ಶ್ರೀಗಳವರ ಮಾರ್ಗದರ್ಶನ ಹಾಗೂ ದಿವ್ಯ ಉಪಸ್ಥಿತಿಯಲ್ಲಿ ಜರುಗಲಿರುವುದು, ದಿನಾಂಕ 15-02-2019 ರ ಪರ್ಯಂತ ಶ್ರೀಗಳವರು ಶ್ರೀದೇವಳದ ಮೊಕ್ಕಾಂ ನಲ್ಲಿದ್ದು ನಡೆಯುವ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಶ್ರೀಗಳವರ ಆಜ್ಞಾನುಸಾರ ನಡೆಯಲಿದೆ .
ಈ ರಥೋತ್ಸವ ಸಂದರ್ಭದಲ್ಲಿ ದೇವಳದಲ್ಲಿ ದಿನ ನಿತ್ಯ ವಿವಿಧ ಉತ್ಸವಗಳು , ಯಜ್ಞ -ಹವನಾದಿಗಳು ವೈದಿಕರಿಂದ ನಡೆಯಲಿರುವುದು, ದೇಶ ವಿದೇಶಗಳಿಂದ ಸಾವಿರಾರು ಜಿ . ಎಸ್ . ಬಿ ಸಮಾಜ ಭಾಂದವರು ಪಾಲ್ಗೊಳ್ಳಲಿರುವರು. (ಚಿತ್ರ: ಮಂಜು ನೀರೇಶ್ವಾಲ್ಯ)












Click it and Unblock the Notifications