ಲಂಚ ಕೇಳಿದ ಮಂಗಳೂರು ತಹಶಿಲ್ದಾರ್ಗೆ ನ್ಯಾಯಾಂಗ ಬಂಧನ
ಮಂಗಳೂರು, ಅಕ್ಟೋಬರ್ 1: ಲಂಚ ಸ್ವೀಕಾರದ ಆರೋಪದಲ್ಲಿ ಬಂಧನಕ್ಕೊಳಗಾದ ಮಂಗಳೂರು ತಹಶಿಲ್ದಾರ್ ಪುರಂದರ ಹೆಗ್ಡೆ ಹಾಗೂ ಆತನ ಸಹಾಯಕ ಶಿವಾನಂದ ನಾಟೇಕರ್ಗೆ ಜಾಮೀನು ನಿರಾಕರಿಸಿರುವ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.
ದಕ್ಷಿಣ ಕನ್ನಡ ಜಿಲ್ಲಾ ಲೋಕಾಯುಕ್ತ ಪೊಲೀಸರು ಮಂಗಳೂರು ಮಿನಿ ವಿಧಾನಸೌಧಕ್ಕೆ ದಾಳಿ ನಡೆಸಿ ಲಂಚ ಸ್ವೀಕಾರ ಮಾಡುತ್ತಿರುವಾಗಲೇ ತಹಶಿಲ್ದಾರ್ ಸಹಾಯಕ ಅಧಿಕಾರಿಯನ್ನು ಶುಕ್ರವಾರ ಬಂಧಿಸಿತ್ತು. ಶಿವಾನಂದ್ನನ್ನು ವಶಕ್ಕೆ ಪಡೆದು ಲೋಕಾಯುಕ್ತ ಪೊಲೀಸರು ವಿಚಾರಣೆ ನಡೆಸುತ್ತಿದ್ದಂತೆ ತಹಶೀಲ್ದಾರ್ ಪರವಾಗಿ ತಾನು ಲಂಚ ಪಡೆದಿದ್ದಾಗಿ ಬಾಯ್ದಿಟ್ಟಿದ್ದಾನೆ. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ಪುರಂದರ ಮತ್ತು ಶಿವಾನಂದ್ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
PAYCM ಟೀ ಶರ್ಟ್ ಧರಿಸಿದ್ದ ಯುವಕನ ಬಂಧನ: ಪೊಲೀಸ್ ಅಧಿಕಾರಿ ಅಮಾನತ್ತಿಗೆ ಆಗ್ರಹ
ಹಿರಿಯ ನಾಗರಿಕರೊಬ್ಬರು ತಮ್ಮ ಜಾಗ ಮಾರಾಟ ಮಾಡುವುದಕ್ಕಾಗಿ ಎನ್ಒಸಿ ಪಡೆಯಲು ಆಗಮಿಸಿದ ವೇಳೆ ಆರೋಪಿ ಶಿವಾನಂದ ನಾಟೆಕರ್ 2,000 ರೂ. ಲಂಚ ಪಡೆದು ಹೆಚ್ಚಿನ 10 ಸಾವಿರ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದ. ಬಳಿಕ ಅವರ ಮನವಿಯಂತೆ 5,000 ರೂ. ಗೆ ಒಪ್ಪಿಗೆ ಸೂಚಿಸಿದ್ದ. ಈ ಬಗ್ಗೆ ಹಿರಿಯ ನಾಗರಿಕರು ಲೋಕಾಯುಕ್ತಕ್ಕೆ ಮಾಹಿತಿ ನೀಡಿದ್ದರು. ಅದರಂತೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಶಿವಾನಂದ ನಾಟೇಕರ್ ಲಂಚ ಸ್ವೀಕರಿಸುತ್ತಿರುವಾಗಲೇ ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.
ಆರೋಪಿ ಶಿವಾನಂದ್ ಮೂಲ್ಕಿಯಲ್ಲಿ ಗ್ರಾಮ ಕರಣಿಕರಾಗಿ ಸೇವೆ ಸಲ್ಲಿಸುತ್ತಿದ್ದ.ಈತ ಈ ಹಿಂದೆ ಕೂಡಾ ಲಂಚಕ್ಕೆ ಕೈಯೊಡ್ಡಿ ಸಿಕ್ಕಿಬಿದ್ದು ಅಮಾನತುಗೊಂಡಿದ್ದ. 9 ತಿಂಗಳ ಹಿಂದೆಯಷ್ಟೇ ಈತನಿಗೆ ಪದೋನ್ನತಿಯಾಗಿದ್ದು, ಬಳಿಕ ಮಂಗಳೂರು ಮಿನಿ ವಿಧಾನ ಸೌಧದದಲ್ಲಿ ತಹಸೀಲ್ದಾರ್ ಸಹಾಯಕನಾಗಿ ನಿಯೋಜನೆಗೊಂಡಿದ್ದ. ತಹಸೀಲ್ದಾರ್ ಪುರಂದರ್ ಬಂಟ್ವಾಳ, ಕಾರ್ಕಳದಲ್ಲಿ ಕರ್ತವ್ಯ ನಿರ್ವಹಿಸಿ 3 ತಿಂಗಳ ಹಿಂದೆಯಷ್ಟೇ ಮಂಗಳೂರಿಗೆ ವರ್ಗಾವಣೆಯಾಗಿ ಬಂದಿದ್ದರು. ಮಿನಿ ವಿಧಾನಸೌಧದಲ್ಲಿ ಲಂಚಾವತಾರದ ಬಗ್ಗೆ ಪದೇ ಪದೇ ದೂರುಗಳು ಬರುತ್ತಿದ್ದು, ಈಗ ಆರೋಪಿಗಳಿಬ್ಬರು ರೆಡ್ ಹ್ಯಾಂಡ್ ಸಿಕ್ಕಿರುವುದು ಆಪಾದನೆಗಳಿಗೆ ಪುಷ್ಠಿ ಸಿಕ್ಕಂತಾಗಿದೆ.
ಲೋಕಾಯುಕ್ತ ಎಸ್ಪಿ ಲಕ್ಷ್ಮೀಗಣೇಶ್ ಮಾರ್ಗದರ್ಶನ ದಂತೆ ಡಿವೈಎಸ್ಪಿ ಕಲಾವತಿ ಮತ್ತು ಚೆಲುವರಾಜ, ಇನ್ಸ್ಪೆಕ್ಟರ್ಗಳಾದ ಅಮಾನುಲ್ಲಾ ಎ.ಜಯರಾಮ ಡಿ.ಗೌಡ ಮತ್ತು ಸಿಬ್ಬಂದಿ ಕಾರ್ಯಾಚರಣೆ ಯಲ್ಲಿ ಭಾಗವಹಿಸಿದ್ದರು.