ಮಂಗಳೂರು : ಖಾಸಗಿ ಬಸ್ ಪ್ರಯಾಣದರ ಕಡಿತ
ಮಂಗಳೂರು, ಜ. 9 : ರಾಜ್ಯ ಸರ್ಕಾರ ಕೆಎಸ್ಆರ್ಟಿಸಿ ಬಸ್ ಪ್ರಯಾಣದರ ಕಡಿಮೆ ಮಾಡಿದೆ. ಇತ್ತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್ ದರವನ್ನು ಕಡಿತಗೊಳಿಸಲು ಸಾಗಿಗೆ ಪ್ರಾಧಿಕಾರದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರ ಅಧ್ಯಕ್ಷತೆಯಲ್ಲಿ ಖಾಸಗಿ ಬಸ್ ದರ ಇಳಿಕೆ ಕುರಿತು ಬಸ್ ಮಾಲೀಕರು ಹಾಗೂ ಸಾರ್ವಜನಿಕರ ಸಭೆ ನಡೆಯಿತು. ಜಿಲ್ಲೆಯಲ್ಲಿ ಖಾಸಗಿ ಬಸ್ಗಳಿಗೆ 2014ರ ಪರಿಷ್ಕೃತ ದರ ರದ್ದುಪಡಿಸಿ 2013ರಲ್ಲಿದ್ದ ದರ ನಿಗದಿ ಮಾಡಲು ನಿರ್ಧರಿಸಲಾಯಿತು. [ಮಂಗಳೂರು : ಖಾಸಗಿ ಬಸ್ ನಿಲ್ದಾಣ ಯೋಜನೆಗೆ ಮರುಜೀವ]

2013ರ ದರ ಪಟ್ಟಿ ಅನ್ವಯ 2 ಮತ್ತು ಆರನೇ ಸ್ಟೇಜ್ ಹೊರತು ಪಡಿಸಿ ಉಳಿದ ಎಲ್ಲಾ ಸ್ಟೇಜ್ಗಳ ಪ್ರಯಾಣದರ 1 ರೂ. ಕಡಿಮೆಯಾಗಲಿದೆ. 2014ರ ಜು. 1ರಂದು ಮಾಡಲಾಗಿದ್ದ ಪರಿಷ್ಕರಣೆ ಆದೇಶವನ್ನು ರದ್ದುಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. [ಬಸ್ ದರ ಕಡಿತ : ಯಾವ ನಗರಗಳಿಗೆ ಎಷ್ಟು ರೂ.]
ಸಭೆಯಲ್ಲಿ ಈ ನಿರ್ಧಾರವನ್ನು ಸಾರ್ವಜನಿಕ ಸಂಘಟನೆಗಳ ಪ್ರತಿನಿಧಿಗಳು ಸ್ವಾಗತಿಸಿದರು. ಆದರೆ, ಖಾಸಗಿ ಬಸ್ ಮಾಲೀಕರು ಈ ದರದಿಂದ ನಷ್ಟ ಅನುಭವಿಸಬೇಕಾಗುತ್ತದೆ ಎಂದರು. ನೂತನ ದರ ಜಾರಿ ಕುರಿತು 1 ವಾರದೊಳಗೆ ಅಧಿಸೂಚನೆ ಹೊರಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
ಪರಿಷ್ಕರಣೆ ಭರವಸೆ : 54.25 ರೂ. ಇರುವ ಡೀಸೆಲ್ ದರ 60 ರೂ.ಗಳಿಗೆ ಏರಿಕೆಯಾದರೆ, ಪ್ರಯಾಣ ದರ ಹೆಚ್ಚಿಸುವ ಮತ್ತು 45 ರೂ.ಗಳಿಗೆ ಇಳಿಕೆಯಾದರೆ, ದರ ಇಳಿಕೆ ಬೇಡಿಕೆ ಬಗ್ಗೆ ಚರ್ಚಿಸಲು ಸಭೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.

ಆಟೋ ಪ್ರಯಾಣ ದರವೂ ಇಳಿಕೆ : ಆಟೋರಿಕ್ಷಾ ಪ್ರಯಾಣ ದರ ಪ್ರಯಾಣ ಪರಿಷ್ಕರಿಸುವ ಕುರಿತು ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಜಿಲ್ಲೆಯಲ್ಲಿ ಆಟೋ ರಿಕ್ಷಾ ಪ್ರಯಾಣದರವೂ ಕಡಿತಗೊಳ್ಳುವ ಸಾಧ್ಯತೆ ಇದೆ. [ಚಿತ್ರ : ಐಸಾಕ್ ರಿಚರ್ಡ್, ಮಂಗಳೂರು]












Click it and Unblock the Notifications