ಮಂಗಳೂರು; ಅಫ್ಘಾನ್ನಿಂದ ಮರಳಿದವರ ಭೇಟಿಯಾದ ಪೊಲೀಸ್ ಆಯುಕ್ತ
ಮಂಗಳೂರು, ಆಗಸ್ಟ್ 25; ಅಫ್ಘಾನಿಸ್ತಾನದಲ್ಲಿ ಸಿಲುಕಿಹಾಕಿಕೊಂಡಿದ್ದ 7 ಮಂದಿ ಮಂಗಳೂರಿಗರು ಮನೆ ತಲುಪಿದ್ದಾರೆ. ಮನೆ ಮಂದಿಯೊಂದಿಗೆ ಅಫ್ಘಾನಿಸ್ತಾನದ ಕರಾಳ ನೆನಪನ್ನು ಹಂಚುತ್ತಾ, ರಿಲ್ಯಾಕ್ಸ್ ಆಗುತ್ತಿದ್ದಾರೆ. ಹಿಂದಿನ ಜೀವನವನ್ನು ಮರೆತು ಮಂದಿನ ಜೀವನವನ್ನು ಊರಿನಲ್ಲೇ ಏನಾದರೂ ಉದ್ಯೋಗ ಮಾಡುತ್ತಾ, ಕುಟುಂಬ ಸದಸ್ಯರೊಂದಿಗೆ ಕಳೆಯಬೇಕೆಂದು ನಿರ್ಧರಿಸಿದ್ದಾರೆ.
ಅಫ್ಘಾನಿಸ್ತಾನದಿಂದ ಮಂಗಳೂರಿಗೆ ಬಂದ 7 ಮಂದಿಯನ್ನು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಮ್ಮ ಕಚೇರಿಗೆ ಕರೆಸಿಕೊಂಡು ಸಮಾಲೋಚನೆ ನಡೆಸಿದರು. ಬಿಜೈ ನಿವಾಸಿ ಶ್ರವಣ್ ಅಂಚನ್, ಮೂಡಬಿದಿರೆಯ ಜಗದೀಶ್ ಪೂಜಾರಿ, ಬಜಪೆಯ ದಿನೇಶ್ ರೈ, ಉಳ್ಳಾದ ಕೊಲ್ಯ ಕನ್ನೀರ್ ತೋಟ ನಿವಾಸಿ ಪ್ರಸಾದ್ ಆನಂದ್, ಕಿನ್ನಿಗೋಳಿ ಪಕ್ಷಿಕೆರೆಯ ಡೆಸ್ಮಂಡ್ ಡೇವಿಡ್ ಡಿಸೋಜಾ, ಉಳ್ಳಾಲದ ಮೆಲ್ವಿನ್ ಮೆಂತೆರೋ, ಡೆನ್ಸಿ ಮೆಂತೋರೋ ಜೊತೆ ಆಯುಕ್ತರು ಸಂವಾದ ನಡೆಸಿದರು.
ಏಳು ಮಂದಿಯ ಯೋಗ ಕ್ಷೇಮ ವಿಚಾರಿಸಿದ ಬಳಿಕ ಮುಂದಿನ ವೃತ್ತಿ ಜೀವನದ ಬಗ್ಗೆಯೂ ಚರ್ಚೆ ನಡೆಸಿದ್ದಾರೆ. ಅಲ್ಲದೇ ಏಳು ಮಂದಿಯ ಪರಿಚಯಸ್ಥರು, ಬೇರೆ ಯಾರಾದರೂ ಅಫ್ಘಾನಿಸ್ತಾನದಲ್ಲಿ ಸಿಲುಕಿದ್ದಾರಾ? ಅಂತಾ ಮಾಹಿತಿ ಕೇಳಿದ ಆಯುಕ್ತರು, ಬಳಿಕ ಯಾರಾದರೂ ಸಂಪರ್ಕಕ್ಕೆ ಸಿಲುಕಿದರೆ ರಾಜ್ಯದ ನೊಡೆಲ್ ಆಫೀಸರ್ ಅನ್ನು ಸಂಪರ್ಕ ಮಾಡುವಂತೆ ಎನ್. ಶಶಿ ಕುಮಾರ್ ಸೂಚನೆ ನೀಡಿದ್ದಾರೆ.

ಆಗಸ್ಟ್ 19 ರಂದು ಉಳ್ಳಾದ ಉಳಿಯ ಗ್ರಾಮದ ಮೆಲ್ವಿನ್ ಮೆಂತೋರೋ ಅಫ್ಘಾನಿಸ್ತಾನದಿಂದ ಮಂಗಳೂರಿಗೆ ಆಗಮಿಸಿದ್ದರು. ಆಗಸ್ಟ್ 23ರಂದು ಜಗದೀಶ್ ಪೂಜಾರಿ, ಶ್ರವಣ್ ಅಂಚನ್, ದಿನೇಶ್ ರೈ, ಪ್ರಸಾದ್ ಆನಂದ್ ಮತ್ತು ಡೆಸ್ಮಂಡ್ ಪೂಜಾರಿ ಮಂಗಳೂರಿಗೆ ಆಗಮಿಸಿದ್ದರು. ಆಗಸ್ಟ್24 ರಂದು ಉಳಿಯ ಗ್ರಾಮದ ಡೆನ್ಸಿ ಮೆಂತೆರೋ ತವರಿಗೆ ಮರಳಿದ್ದಾರೆ.
ಅಫ್ಘಾನಿಸ್ತಾನ ದಿಂದ ಬಂದ ಏಳು ಮಂದಿಯ ಜೊತೆ ಸಮಾಲೋಚನೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಆಯಿಕ್ತ ಎನ್. ಶಶಿಕುಮಾರ್, "ಮಂಗಳೂರಿನ ಏಳು ಮಂದಿ ಈಗಾಗಲೇ ಸುರಕ್ಷಿತವಾಗಿ ಮರಳಿದ್ದಾರೆ. ಎಲ್ಲರನ್ನೂ ಕರೆದು ಮಾತನಾಡಿದ್ದೇನೆ. ಏಳು ಮಂದಿಯೂ ಅಮೆರಿಕ ಸೇನಾ ನೆಲೆಯಲ್ಲಿ ಕೆಲಸ ಮಾಡುತ್ತಿದ್ದರು" ಎಂದರು.
"ಸೇನಾ ನೆಲೆಯಲ್ಲಿ ಇದ್ದ ಕಾರಣ ತಾಲಿಬಾನಿಗಳಿಂದ ಯಾವುದೇ ತೊಂದರೆಯಾಗಿಲ್ಲ. ಏಳು ಮಂದಿಯಲ್ಲಿ ಕೆಲವರು ಅಕೌಂಟೆಂಟ್, ಎಲೆಕ್ಟ್ರೀಷಿಯನ್ ಮತ್ತು ವಿವಿಧ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಏಳು ಮಂದಿಯೂ ಒಂದೇ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರಿಂದ ಎಲ್ಲರೂ ಸುರಕ್ಷಿತವಾಗಿದ್ದಾರೆ. ಇವರ ಸಂಪರ್ಕದಲ್ಲಿ ಬೇರೆ ಯಾರಾದರೂ ಇರುವವರ ಬಗ್ಗೆ ಮಾಹಿತಿ ಕೇಳಿದ್ದೇನೆ. ಅವರು ಕೊಟ್ಟ ಮಾಹಿತಿಯ ಪ್ರಕಾರ ಬೇರೆ ಮಂಗಳೂರಿನ ಯಾರೂ ಅಫ್ಘಾನಿಸ್ತಾನದಲ್ಲಿ ಸಿಲುಕಿಹಾಕಿಕೊಂಡಿಲ್ಲ" ಎಂದು ಆಯುಕ್ತರು ಹೇಳಿದರು.
ಇನ್ನು ಆಯುಕ್ತರನ್ನು ಭೇಟಿಯಾದ ಬಳಿಕ ಮಾತನಾಡಿದ ದಿನೇಶ್ ರೈ, "ಮನೆಗೆ ಬಂದು ಎರಡು ದಿನವಾಗಿದೆ. ತುಂಬಾ ಖುಷಿಯಾಗುತ್ತಿದೆ. ಸದ್ಯ ಮನೆಯವರ ಜೊತೆ ಸಮಯ ಕಳೆಯುತ್ತಿದ್ದೇವೆ. ಮುಂದಿನ ವೃತ್ತಿ ಜೀವನದ ಬಗ್ಗೆ ಸ್ವಲ್ಪ ದಿನ ಕಳೆದ ಬಳಿಕ ನಿರ್ಧಾರ ಮಾಡುತ್ತೇನೆ. ಪೊಲೀಸ್ ಕಮೀಷನರ್ ಎಲ್ಲಾ ಮಾಹಿತಿಯನ್ನು ಕೇಳಿದ್ದಾರೆ. ಅಫ್ಘಾನಿಸ್ತಾನದ ಪರಿಸ್ಥಿತಿಯ ಬಗ್ಗೆ ಹೇಳಿದ್ದೇವೆ. ಸದ್ಯ ಅಲ್ಲಿನ ಯಾರೂ ನಮ್ಮ ಸಂಪರ್ಕದಲ್ಲಿ ಇಲ್ಲ" ಎಂದರು.
ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಇತ್ತೀಚೆಗೆ ಮಂಗಳೂರಿನಲ್ಲಿ ವಾಸವಿರುವ 48 ಮಂದಿ ಅಫ್ಫಾನ್ ಪ್ರಜೆಗಳನ್ನು ಕಚೇರಿಗೆ ಕರೆಯಿಸಿಕೊಂಡು ಮಾತನಾಡಿದ್ದರು. ಅಫ್ಘಾನಿಸ್ತಾನದ ಬೆಳವಣಿಗೆಯ ಬಗ್ಗೆ ದಂಗಾಗಿದ್ದ ಅಫ್ಘಾನಿಸ್ತಾನದ ಪ್ರಜೆಗಳಿಗೆ ಧೈರ್ಯ ತುಂಬಿದ್ದರು. ಈ ವೇಳೆ ಅಫ್ಘಾನ್ ವಿದ್ಯಾರ್ಥಿಗಳು ತಮ್ಮ ವೀಸಾ ವಿಸ್ತರಣೆಗೆ ಸರ್ಕಾರಕ್ಕೆ ಮನವಿ ಮಾಡಿದ್ದರು.












Click it and Unblock the Notifications