ಕುಮಾರಸ್ವಾಮಿ ಭೇಟಿ ಬಗ್ಗೆ ಮಂಗಳೂರು ಪೊಲೀಸ್ ಆಯುಕ್ತ ಹರ್ಷ ಟ್ವೀಟ್
ಮಂಗಳೂರು, ಜನವರಿ 21: ಮಂಗಳೂರು ಪೊಲೀಸರ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ಮತ್ತು ಅನುಮಾನ ವ್ಯಕ್ತಪಡಿಸಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಇಂದು ಮಂಗಳೂರು ಪೊಲೀಸ್ ಆಯುಕ್ತ ಹರ್ಷ ಭೇಟಿ ಮಾಡಿದರು.
ಶೃಂಗೇರಿಯಿಂದ ಮಂಗಳೂರಿಗೆ ಬಂದ ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಹರ್ಷಾ ಭೇಟಿ ಮಾಡಿ ಕೆಲ ಕಾಲ ಮಾತುಕತೆ ನಡೆಸಿದ್ದಾರೆ. ತಮ್ಮ ಭೇಟಿಯ ಬಗ್ಗೆ ಟ್ವಿಟ್ಟರ್ನಲ್ಲಿ ಮಾಹಿತಿಯನ್ನೂ ಹಂಚಿಕೊಂಡಿದ್ದಾರೆ.
'ಇಂದು ಭದ್ರತೆ ಕಾರ್ಯದ ನಿಮಿತ್ತ ಮಂಗಳೂರಿಗೆ ಬಂದಿದ್ದ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದೆ. ಅವರಿಗೆ ಭದ್ರತೆ ಇರುವ ಕಾರಣ ಈ ಭೇಟಿ ಅಷ್ಟೆ' ಎಂದು ಹೇಳಿದ್ದಾರೆ.

ಮುಂದುವರೆದು, 'ಪ್ರಸಕ್ತ ವಿಷಯಗಳ ಬಗ್ಗೆ ಕುಮಾರಸ್ವಾಮಿ ಅವರ ಬಳಿ ಕೆಲ ವಿಷಯ ಚರ್ಚಿಸಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ಸಹಕಾರಕ್ಕಾಗಿ ಮನವಿ ಮಾಡಿದೆ' ಎಂದು ಹೇಳಿದ್ದಾರೆ.
ನಿನ್ನೆ ಬಜ್ಪೆ ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿದ್ದ ಬಾಂಬ್ ಬಗ್ಗೆಯೂ ಟ್ವೀಟ್ ಮಾಡಿರುವ ಹರ್ಷ ಅವರು, 'ಮಂಗಳೂರು ವಿಮಾನ ನಿಲ್ದಾಣದಲ್ಲಿ ಪತ್ತೆಯಾದ ಬಾಂಬ್ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದ್ದು, ಸಾಕಷ್ಟು ಮಾಹಿತಿ ಲಭ್ಯವಾಗಿವೆ. ಇದೊಂದು ಗಂಭೀರ ಪ್ರಕರಣ ಆಗಿರುವ ಕಾರಣ, ಘಟನೆಯ ಬಗ್ಗೆ ಸಮಾಜದ ಎಲ್ಲ ನಾಯಕರು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು' ಎಂದು ಅವರು ಮನವಿ ಮಾಡಿದ್ದಾರೆ.
ಟ್ವೀಟ್ ಮೂಲಕ ಕುಮಾರಸ್ವಾಮಿ ಅವರು ಬಾಂಬ್ ಪತ್ತೆ ಬಗ್ಗೆ ಹಗುರವಾಗಿ ಮಾತನಾಡಬಾರದು, ಬಾಂಬ್ ಪತ್ತೆ ವಿಷಯದಲ್ಲಿ ಪೊಲೀಸರನ್ನು ಆರೋಪಿತರ ಸ್ಥಾನದಲ್ಲಿ ನಿಲ್ಲಿಸಿ ಹೇಳಿಕೆಗಳನ್ನು ಕೊಡಬಾರದೆಂದು ಪರೋಕ್ಷವಾಗಿ ಹೇಳಿದ್ದಾರೆ.
ಕುಮಾರಸ್ವಾಮಿ ಅವರು ನಿನ್ನೆ ಮಾತನಾಡಿ, 'ಬಾಂಬ್ ಪತ್ತೆಯು ಬಾಂಬ್ ಅಣಕು ಪ್ರದರ್ಶನದಂತೆ ಇತ್ತು' ಎಂದಿದ್ದರು. ಕೆಲವು ದಿನಗಳ ಹಿಂದೆ ಸಹ ಸಿಎಎ ಗಲಭೆ ಸಮಯ ಪೊಲೀಸರು ಪ್ರತಿಭಟನಾಕಾರರ ವಿರುದ್ಧ ಬಿಡುಗಡೆ ಮಾಡಿದ ವಿಡಿಯೋ ಗೆ ವಿರುದ್ಧ ಪೊಲೀಸರ ವಿರುದ್ಧ ವಿಡಿಯೋವನ್ನು ಬಿಡುಗಡೆ ಮಾಡಿದ್ದರು.












Click it and Unblock the Notifications