ಫಾಸ್ಟ್ ಚೆಕ್ : ಸಾರ್ವಜನಿಕರಿಗೆ ಮಂಗಳೂರು ಪೊಲೀಸರ ಮಹತ್ವದ ಮನವಿ
ಮಂಗಳೂರು, ಡಿ 26: ನಿಧಾನವಾಗಿ ಸಹಜಸ್ಥಿತಿಗೆ ಮರಳುತ್ತಿರುವ ಮಂಗಳೂರು ನಗರದಲ್ಲಿ ಮತ್ತೆ ಶಾಂತಿ ಕದಡುವ ಕೆಲಸವನ್ನು ಯಾರೂ ಮಾಡಬಾರದು. "ಕೆಲವು ಕಿಡಿಗೇಡಿಗಳು ಸುಳ್ಳು ಸಂದೇಶವನ್ನು ಸಾಮಾಜಿಕ ತಾಣದಲ್ಲಿ ಹರಿಯ ಬಿಡುತ್ತಿದ್ದಾರೆ. ಇದನ್ನು ಸಾರ್ವಜನಿಕರು ನಂಬಬಾರದು" ಎಂದು ನಗರದ ಪೊಲೀಸ್ ಆಯುಕ್ತ ಪಿ.ಎಸ್.ಹರ್ಷ ಮನವಿ ಮಾಡಿದ್ದಾರೆ.
"ಕೆಲವರು ಇಲಾಖೆಯ ಹೆಸರಿನಲ್ಲಿ ಸುಳ್ಳು ಸಂದೇಶವನ್ನು ಹರಿಯಬಿಡುತ್ತಿದ್ದಾರೆ. ಇಲಾಖೆಯ ಅಧಿಕೃತ ಸಂವಹನದ ಹೆಸರಿನಲ್ಲಿ ಜನರ ದಾರಿತಪ್ಪಿಸುವ ಕೆಲಸವನ್ನು ಮಾಡಲಾಗುತ್ತಿದೆ" ಎಂದು ಆಯುಕ್ತರು ಟ್ವೀಟ್ ಮೂಲಕ ಎಚ್ಚರಿಸಿದ್ದಾರೆ.
ಅವರನ್ನು ಓಲೈಸಲು ಹೋಗಿ, ಇವರ ವಿರೋಧವನ್ನು ಪಕ್ಷ ಕಟ್ಟಿಕೊಳ್ಳುತ್ತಿದೆಯೇ? ಏನಿದು ಹಿರಿಯ ಕಾಂಗ್ರೆಸ್ಸಿಗರ ಭಯ
ಮಂಗಳೂರು ಪೊಲೀಸರ ಲೆಟರ್ ಹೆಡ್ ನಲ್ಲಿ, ನಗರದಲ್ಲಿನ ಗಲಭೆಯ ವೇಳೆ, ಕರ್ತವ್ಯ ನಿರತ ಪೊಲೀಸರ ಶ್ಲಾಘನೀಯ ಸೇವೆಗಾಗಿ ನಗದು ಬಹುಮಾನ ನೀಡಲಾಗಿದೆ ಎನ್ನುವ ಒಕ್ಕಣೆಯಿರುವ ಪತ್ರವನ್ನು ಕಿಡಿಗೇಡಿಗಳು ಸಾಮಾಜಿಕ ತಾಣದಲ್ಲಿ ಹರಿಯಬಿಟ್ಟಿದ್ದರು. ಸುಳ್ಳು ಸುದ್ದಿಯ ಆ ಪತ್ರದಲ್ಲಿ, ಬರೆದುಕೊಂಡಿದ್ದು ಹೀಗೆ:
"CAB & NRC ಮಸೂದೆಯ ವಿರುದ್ಧವಾಗಿ ದಿನಾಂಕ ಡಿ.19 ರಂದು ಮಂಗಳೂರು ನಗರದಲ್ಲಿ ಕಾನೂನು ಸುವ್ಯವಸ್ಥೆಗೆ ತೀವ್ರವಾಗಿ ಭಂಗ ಉಂಟಾಗಿದ್ದು, ಪ್ರತಿಭಟನಾ ನಿರತ ವ್ಯಕ್ತಿಗಳು ಪೊಲೀಸ್ ಅಧಿಕಾರಿ/ ಸಿಬ್ಬಂದಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ನಷ್ಟ ಉಂಟುಮಾಡಿರುತ್ತಾರೆ".
"ಆದ ಕಾರಣ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಕರ್ಫ್ಯೂ ಜಾರಿ ಮಾಡಲಾಗಿರುತ್ತದೆ. ಈ ಪರಿಸ್ಥಿತಿಯನ್ನು ನಿಯಂತ್ರಿಸಲು ಹಾಗೂ ನಗರದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿ ಹಗಲು ರಾತ್ರಿ ಅವಿರತ ಪರಿಶ್ರಮ ನಡೆಸಿರುತ್ತಾರೆ".
"ಆದ್ದರಿಂದ ಈ ಕೆಳಕಂಡ ಅಧಿಕಾರಿ/ ಸಿಬ್ಬಂದಿ ಅವರ ಶ್ಲಾಘನೀಯ ಸೇವೆಯನ್ನು ಗುರುತಿಸಿ ನಗದು ಬಹುಮಾನವನ್ನು ನೀಡಲಾಗಿದೆ ಎಂಬ ವಿಷಯವನ್ನು ಮಾನ್ಯರ ಅವಗಾಹನೆಗೆ ಈ ಮೂಲಕ ತರುತ್ತಿದ್ದೇನೆ" ಎಂದು ಪತ್ರದಲ್ಲಿ ಬರೆಯಲಾಗಿತ್ತು. ಈ ಪತ್ರವನ್ನು, ಮಂಗಳೂರು ಆಯುಕ್ತರು, ರಾಜ್ಯ ಪೊಲೀಸ್ ಮಹಾ ನಿರ್ದೇಶಕರು/ ಮಹಾ ನಿರೀಕ್ಷಕರಿಗೆ ಬರೆದ ಪತ್ರದಂತೆ ಸೃಷ್ಟಿಸಲಾಗಿತ್ತು.