ಅಂತರ ಜಿಲ್ಲಾ ದೇವಸ್ಥಾನ ಕಳವು ಜಾಲ ಬೇಧಿಸಿದ ಮಂಗಳೂರು ಪೊಲೀಸರು
ಮಂಗಳೂರು, ಮಾರ್ಚ್ 9: ರಾಜ್ಯದ ವಿವಿಧ ಜಿಲ್ಲೆಗಳ ದೇವಸ್ಥಾನ ಕಳವು, ಸುಲಿಗೆ, ಬೈಕ್ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದ ಆರೋಪಿಗಳನ್ನು ಮಂಗಳೂರಿನ ಮುಲ್ಕಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ತುಮಕೂರು ಜಿಲ್ಲೆಯ ನವೀನ್ ಕುಮಾರ್ ಮತ್ತು ಬೆಂಗಳೂರಿನ ವೆಂಕಟೇಶ ಎಂದು ಗುರುತಿಸಲಾಗಿದೆ.
ಬಂಧಿತರಿಂದ ಎರಡು ಬೈಕ್, ಮಾಂಗಲ್ಯ ಸರ ಸೇರಿದಂತೆ ಒಟ್ಟು 2 .45 ಲಕ್ಷ ರೂಪಾಯಿ ಮೌಲ್ಯದ ಸೊತ್ತನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು 2017 ಜುಲೈಯಲ್ಲಿ ಮುಲ್ಕಿಯ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ಮತ್ತು ಗುತ್ತಕಾಡು ಮೂಕಾಂಬಿಕಾ ದೇವಸ್ಥಾನದಲ್ಲಿ ನಗ ನಗದು ಕಳವುಗೈದಿದ್ದರು. ಅಲ್ಲದೆ 2017 ರಲ್ಲಿ ಬೆಂಗಳೂರಿನ ದಾಬಸ್ ಪೇಟೆ ಪೂಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಾಗೂ 2018ರಲ್ಲಿ ಬೇಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ಮೋಟಾರು ಸೈಕಲ್ ಕಳವುಗೈದಿದ್ದಾರೆ ಎಂದು ಹೇಳಲಾಗಿದೆ.

ಆರೋಪಿಗಳ ಪೈಕಿ ನವೀನ್ ಕುಮಾರ್ ತನ್ನ ಮೊಬೈಲ್ ನಲ್ಲಿ ದೇವಸ್ಥಾನಗಳನ್ನು ಗೂಗಲ್ ನಲ್ಲಿ ಸರ್ಚ್ ಮಾಡಿ ರೂಟ್ ಮ್ಯಾಪ್ ಮೂಲಕ ದೇವಸ್ಥಾನಗಳನ್ನು ಗುರುತಿಸುತ್ತಿದ್ದ. ನಂತರ ಆ ದೇವಾಲಯಗಳಿಗೆ ಭೇಟಿ ಕೊಟ್ಟು ಕಳ್ಳತನಕ್ಕೆ ಸಂಚು ರೂಪಿಸಿ ರಾತ್ರಿ ಸಮಯದಲ್ಲಿ ಈ ಇಬ್ಬರು ಆರೋಪಿಗಳು ಕಳವು ನಡೆಸುತ್ತಿದ್ದರು ಎಂದು ಹೇಳಲಾಗಿದೆ.
ಆರೋಪಿ ನವೀನ್ ಕುಮಾರ್ ಮೋಟಾರು ಸೈಕಲ್ ಗಳ ಶೋಕಿ ಹೊಂದಿದ. ಈತ ದುಬಾರಿ ಬೆಲೆಯ ಮೋಟಾರು ಸೈಕಲ್ ಗಳನ್ನು ಕಳವು ಮಾಡುತ್ತಿದ್ದ. ಅಲ್ಲದೆ ಬೈಕ್ ಚಲಾಯಿಸುದರಲ್ಲಿ ನಿಸ್ಸಿಮನೆಂದು ಹೇಳಲಾಗಿದ್ದು ಈತ ಹಾಸನ, ತುಮಕೂರು, ಬೆಂಗಳೂರು ಮತ್ತಿತರ 53 ಕಳವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಎಂದು ಹೇಳಲಾಗಿದೆ.












Click it and Unblock the Notifications